ಬೆಂಗಳೂರು: `ರಾಜ್ಯ ಸರ್ಕಾರ ನಮ್ಮ ಮನವಿಗೆ ಸ್ಪಂದಿಸಿದೆ. ಸಾಕಷ್ಟು ಸಮಸ್ಯೆಗಳ ನಡುವೆಯೂ ಈ ಸಾಧನೆ ಮಾಡಿದ್ದೇವೆ. ಮುಂದೆ ಇನ್ನಷ್ಟು ಸಾಧನೆ ಮಾಡಲು ರಾಜ್ಯದ ಈ ಬೆಂಬಲ ಸ್ಫೂರ್ತಿ ನೀಡಿದೆ~ ಎಂದು ಭಾರತ ತಂಡದಲ್ಲಿದ್ದ ಕರ್ನಾಟಕದ ಎಸ್.ವಿ.ಸುನಿಲ್ ಪ್ರತಿಕ್ರಿಯಿಸಿದರು.
ಏಷ್ಯನ್ ಚಾಂಪಿಯನ್ಸ್ ಟ್ರೋಫಿಯಲ್ಲಿ ಪ್ರಶಸ್ತಿ ಜಯಿಸಿದ ಭಾರತ ಹಾಕಿ ತಂಡದಲ್ಲಿದ್ದ ಕರ್ನಾಟಕದ ನಾಲ್ಕು ಮಂದಿ ಆಟಗಾರರಿಗೆ ರಾಜ್ಯ ಸರ್ಕಾರ ಬುಧವಾರ ತಲಾ 5 ಲಕ್ಷ ರೂಪಾಯಿ ಬಹುಮಾನ ಪ್ರಕಟಿಸಿದೆ. ಈ ಹಿನ್ನೆಲೆಯಲ್ಲಿ ಪತ್ರಿಕೆಯೊಂದಿಗೆ ಅವರು ಮಾತನಾಡಿದರು.
ರಾಜ್ಯದ ಆಟಗಾರರ ಮನದಾಳದ ಮಾತನ್ನು `ದಯವಿಟ್ಟು ನಮ್ಮತ್ತ ಗಮನ ಹರಿಸಿ~ ಎನ್ನುವ ಶೀರ್ಷಿಕೆ ಅಡಿ `ಪ್ರಜಾವಾಣಿ~ ಬುಧವಾರ ವಿಶೇಷ ಲೇಖನ ಪ್ರಕಟಿಸಿತ್ತು. ಆದ್ದರಿಂದ ಸುನಿಲ್ ಪತ್ರಿಕೆಗೆ ಧನ್ಯವಾದ ಅರ್ಪಿಸಿದ್ದಾರೆ.
ಒಲಿಂಪಿಕ್ ಕ್ರೀಡಾಕೂಟಕ್ಕೆ ಇನ್ನಷ್ಟು ಉತ್ತಮ ರೀತಿಯಲ್ಲಿ ಸಜ್ಜುಗೊಳ್ಳಲು ರಾಜ್ಯ ಸರ್ಕಾರ ಬೆಂಬಲ ನೀಡಿದೆ. ಇದರಿಂದ ನಾವು ಇನ್ನಷ್ಟು ಸಾಧನೆ ಮಾಡುತ್ತೇವೆ. ನಿಜಕ್ಕೂ ಖುಷಿಯಾಗಿದೆ ಎಂದು ಸಂತಸದಿಂದ ಅವರು ಪ್ರತಿಕ್ರಿಯಿಸಿದರು. ಇಗ್ನೇಸ್ ಟರ್ಕಿ ಒಡಿಶಾ ಮೂಲದವರು. ಆದರೆ ಅವರು ಕರ್ನಾಟಕ ತಂಡ ಪ್ರತಿನಿಧಿಸುತ್ತಿದ್ದಾರೆ.