ವಿಜಾಪುರ: ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ 617 ಅಂಕ ಪಡೆದ ವಿದ್ಯಾರ್ಥಿಯ ಬದಲು 614 ಅಂಕ ಪಡೆದ ವಿದ್ಯಾರ್ಥಿಗೆ `ಕನ್ನಡ ಮಾಧ್ಯಮ ಪ್ರಥಮ ಪ್ರಶಸ್ತಿ~ ಯನ್ನು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಪ್ರಕಟಿಸಿದೆ ಎಂಬ ಆರೋಪ ಕೇಳಿ ಬಂದಿದೆ.
ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡಿ ಎಸ್ಎಸ್ಎಲ್ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿದ ರಾಜ್ಯದ 1,246 ವಿದ್ಯಾರ್ಥಿಗಳಿಗೆ `ಕನ್ನಡ ಮಾಧ್ಯಮ ಪ್ರಶಸ್ತಿ~ಯನ್ನು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಪ್ರಕಟಿಸಿದೆ.
`ವಿಜಾಪುರ ಜಿಲ್ಲೆ ಬಸವನ ಬಾಗೇವಾಡಿ ತಾಲ್ಲೂಕು ಗೊಳಸಂಗಿಯ ಸ್ವಾಮಿ ವಿವೇಕಾನಂದ ವಿದ್ಯಾವರ್ಧಕ ಸಂಘದ ರಾ.ಅ. ದಳವಾಯಿ ಮಾಧ್ಯಮಿಕ ಶಾಲೆಯ ವಿದ್ಯಾರ್ಥಿ ಪ್ರಮೋದ ನಿಂಗಪ್ಪ ಹೆಬ್ಬಾಳ 2011ರ ಏಪ್ರಿಲ್ನಲ್ಲಿ ಜರುಗಿದ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ 625ಕ್ಕೆ 617 ಅಂಕ ಗಳಿಸಿ ರಾಜ್ಯಕ್ಕೆ 4ನೇ ಸ್ಥಾನ ಹಾಗೂ ವಿಜಾ ಪುರ ಜಿಲ್ಲೆಗೆ ಪ್ರಥಮ ಸ್ಥಾನ ಗಳಿಸಿದ್ದಾನೆ.
ಈ ವಿದ್ಯಾರ್ಥಿಗೆ ಕನ್ನಡ ಅಭಿವೃದ್ಧಿ ಪ್ರಾಧಿ ಕಾರ ಪ್ರಥಮ ಬಹುಮಾನ ಪ್ರಕಟಿಸಬೇಕಿತ್ತು. ಆದರೆ, 614 ಅಂಕ ಪಡೆದಿರುವ ಶಿರಸಿ ತಾಲ್ಲೂಕು ಸಿದ್ದಾಪುರದ ಹೆಗರಣಿಯ ಸ್ವಾಮಿ ವಿವೇಕಾನಂದ ಪ್ರೌಢಶಾಲೆಯ ಗಣೇಶ ಮಹಾಬಳೇಶ್ವರ ಹೆಗಡೆ ಎಂಬ ವಿದ್ಯಾರ್ಥಿಗೆ ಪ್ರಥಮ ಬಹುಮಾನ ಪ್ರಕಟಿಸಿದ್ದಾರೆ. ಇದು ಅನ್ಯಾಯ~ ಎಂದು ಗೊಳಸಂಗಿ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಕಾ.ಹು. ವಿಜಾಪುರ ಆರೋಪಿಸಿದ್ದಾರೆ.