ನಾಗಪುರ: ಕರ್ನಾಟಕ ರಣಜಿ ತಂಡದ ನಾಯಕ ಹಾಗೂ ವೇಗದ ಬೌಲರ್ ಆರ್.ವಿನಯ್ ಕುಮಾರ್ ಇಂಗ್ಲೆಂಡ್ ವಿರುದ್ಧದ ಮುಂಬರುವ ಟ್ವೆಂಟಿ-20 ಕ್ರಿಕೆಟ್ ಸರಣಿಗೆ ಭಾರತ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.
ಡಿಸೆಂಬರ್ 20 ಹಾಗೂ 22 ರಂದು ನಡೆಯಲಿರುವ ಈ ಸರಣಿಗೆ ಈಗಾಗಲೇ ತಂಡ ಪ್ರಕಟಿಸಲಾಗಿತ್ತು.
ಆದರೆ ಮತ್ತೊಬ್ಬ ವೇಗದ ಬೌಲರ್ ಎಲ್.ಬಾಲಾಜಿ ಗಾಯದ ಕಾರಣ ಈ ಸರಣಿಗೆ ಲಭ್ಯರಾಗುತ್ತಿಲ್ಲ.
ವಿನಯ್ ಈಗಾಗಲೇ ಎಂಟು ಟ್ವೆಂಟಿ-20 ಪಂದ್ಯ, 22 ಏಕದಿನ ಪಂದ್ಯ ಹಾಗೂ 1 ಟೆಸ್ಟ್ ಪಂದ್ಯ ಆಡಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧ ಮಾರ್ಚ್ನಲ್ಲಿ ಜೋಹಾನ್ಸ್ಬರ್ಗ್ನಲ್ಲಿ ನಡೆದ ಟ್ವೆಂಟಿ-20 ಪಂದ್ಯದಲ್ಲಿ ವಿನಯ್ ಆಡಿದ್ದರು.
ಅವರು 8 ಚುಟುಕು ಪಂದ್ಯಗಳಿಂದ 7 ವಿಕೆಟ್ ಕಬಳಿಸಿದ್ದಾರೆ. ಈ ರಣಜಿ ಋತುವಿನಲ್ಲಿ ವಿನಯ್ ಆಡಿರುವ ನಾಲ್ಕು ಪಂದ್ಯಗಳಿಂದ 20.58 ಸರಾಸರಿಯಲ್ಲಿ 17 ವಿಕೆಟ್ ಪಡೆದಿದ್ದಾರೆ. ಈ ಸರಣಿಯ ಪಂದ್ಯಗಳು ಕ್ರಮವಾಗಿ ಪುಣೆ ಹಾಗೂ ಮುಂಬೈನಲ್ಲಿ ನಡೆಯಲಿವೆ.