ಮಾಲೂರು: ಬಾಲ್ಯ ಪ್ರತಿ ಮಗುವಿನ ಮೂಲಭೂತ ಹಕ್ಕು. ಇದರ ಯಶಸ್ಸಿಗೆ ಸಂಘಟಿತ ಪ್ರಯತ್ನ ಅಗತ್ಯ ಎಂದು ಜೆಎಂಸಿ ನ್ಯಾಯಾಲಯದ ಹಿರಿಯ ನ್ಯಾಯಾಧೀಶರಾದ ಸುಶೀಲ ಸಲಹೆ ನೀಡಿದರು.
ಅವರು ಪಟ್ಟಣದ ಸರ್ಕಾರಿ ಹಿರಿಯ ಬಾಲಕರ ಪ್ರಾಥಮಿಕ ಶಾಲೆಯಲ್ಲಿ ವಕೀಲರ ಸಂಘ, ಕಾನೂನು ಸೇವಾ ಸಮಿತಿ ಮತ್ತು ಕಾರ್ಮಿಕ ಇಲಾಖೆ ವತಿಯಿಂದ ಗುರುವಾರ ಹಮ್ಮಿಕೊಂಡಿದ್ದ ವಿಶ್ವ ಬಾಲ ಕಾರ್ಮಿಕರ ವಿರೋಧಿ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.
`ಬಾಲ ಕಾರ್ಮಿಕರ ಪದ್ಧತಿ ನಿರ್ಮೂಲನೆಗೆ ಶಾಲಾ ಶಿಕ್ಷಕರು ಹಾಗೂ ನಾಗರಿಕರು ಶ್ರಮಿಸಬೇಕು. ಕಾನೂನು ಸೇವಾ ಮತ್ತು ಪ್ರಾಧಿಕಾರ ಸಮಿತಿ ವತಿಯಿಂದ ಉಚಿತ ಕಾನೂನು ಸಲಹೆ ಮತ್ತು ನೆರವು ನೀಡಲಾಗುವುದು.ಕಡಿಮೆ ಆದಾಯ ಇರುವ ಎಲ್ಲಾ ಜನಾಂಗದವರಿಗೂ ಉಚಿತ ಕಾನೂನು ನೆರವು ಪಡೆಯಬಹುದು. ಇದರ ಸದುಪಯೋಗವನ್ನು ಫಲಾನುಭವಿಗಳು ಪಡೆದುಕೊಳ್ಳುವಂತೆ ತಿಳಿಸಿದರು.
ಜೆಎಂಎಫ್ಸಿ ಕಿರಿಯ ವಿಭಾಗದ ನ್ಯಾಯಾಧೀಶ ಉಮೇಶ್ ಅಟ್ನೂರ್, ಬಿಇಒ ವೆಂಕಟರಾಮರೆಡ್ಡಿ, ವಕೀಲರ ಸಂಘದ ಅಧ್ಯಕ್ಷ ಕೆ.ನಾರಾಯಣಪ್ಪ, ಹಿರಿಯ ವಕೀಲ ಅಪ್ಪಾಜಿಗೌಡ, ಸಿಡಿಪಿಒ ರಾಜಣ್ಣ, ಕಾರ್ಮಿಕ ಇಲಾಖೆ ಆರ್.ವೆಂಕಟೇಶ್ ಹಾಜರಿದ್ದರು.