ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ (ಟಿಸಿಎಸ್) ಕಂಪೆನಿಯು ಬೋರ್ಡ್ ಆಫ್ ಎಜುಕೇಷನ್ ಸ್ಟ್ಯಾಂಡರ್ಸ್ ಜತೆಗೂಡಿ ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗಾಗಿ 4ನೇ ಆವೃತ್ತಿಯ ಟಿಸಿಎಸ್ ಟೆಕ್ಬೈಟ್ಸ್ ರಸಪ್ರಶ್ನೆ ಸ್ಪರ್ಧೆ ಆಯೋಜಿಸಿತ್ತು. ಈ ಸ್ಪರ್ಧೆಯಲ್ಲಿ ನಗರದ ಬಿಎಂಎಸ್ ಎಂಜಿನಿಯರಿಂಗ್ ಕಾಲೇಜಿನ ಎಂ.ಆರ್. ಅಕ್ಷತ್ ಮತ್ತು ವಿ.ಅರವಿಂದ್ ತಂಡ ವಿಜಯಿಯಾಯಿತು.
ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಮಾಹಿತಿ ತಂತ್ರಜ್ಞಾನ ಕ್ಷೇತ್ರ ಆಧರಿಸಿದ ವಿಷಯದ ಜ್ಞಾನ ಮತ್ತು ಅರಿವಿನ ಮಟ್ಟ ಹೆಚ್ಚಿಸುವ ಉದ್ದೇಶದಿಂದ ಸ್ಪರ್ಧೆ ಆಯೋಜಿಸಲಾಗಿತ್ತು. ಗುಲ್ಬರ್ಗ, ಧಾರವಾಡ, ತುಮಕೂರು, ಮೈಸೂರು, ಮಂಗಳೂರು ಹಾಗೂ ಬೆಂಗಳೂರು ವಲಯ ಮಟ್ಟದಲ್ಲಿ ಅಂತಿಮ ಸುತ್ತಿನ ಸ್ಪರ್ಧೆಗಳು ನಡೆದವು.
ಸುರತ್ಕಲ್ ಎನ್ಐಟಿಯ ಕೆ.ಚೈತನ್ಯ ಹಾಗೂ ಜಿ.ಹೇಮಂತ್ ರನ್ನರ್ಅಪ್ ಪ್ರಶಸ್ತಿ ಮುಡಿಗೇರಿಸಿಕೊಂಡರು.
ಟಿಸಿಎಸ್ ಬೆಂಗಳೂರು ಕಾರ್ಯಾಚರಣೆ ವಿಭಾಗದ ಉಪಾಧ್ಯಕ್ಷ ನಾಗರಾಜ್ ಈಜರಿ, ಬಿಐಟಿಇಎಸ್ ಕಾರ್ಯನಿರ್ವಾಹಕ ನಿರ್ದೇಶಕ ಕೆ.ವಿ.ಪ್ರಹ್ಲಾದ ರಾವ್, ಟಿಸಿಎಸ್ನ ಈ.ಎಸ್. ಚಕ್ರವರ್ತಿ, ಟಿಸಿಎಸ್ ಫೈನಾನ್ಷಿಯಲ್ ಸಲ್ಯೂಷನ್ಸ್ ಕಂಪೆನಿ ಅಧ್ಯಕ್ಷ ಎನ್.ಗಣಪತಿ ಸುಬ್ರಹ್ಮಣ್ಯನ್, ಬಿಐಟಿಇಎಸ್ ಅಧ್ಯಕ್ಷ ಪ್ರೊ.ಆರ್. ನಟರಾಜನ್ ಮತ್ತಿತರರು ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ಉಪಸ್ಥಿತರಿದ್ದರು.