ಬೆಂಗಳೂರು: `ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪ್ರತಿನಿತ್ಯ ನೀಡುವ ಹೇಳಿಕೆಗಳು ಕುರುಕ್ಷೇತ್ರ ಯುದ್ಧದಲ್ಲಿ ಸೋತು ತನ್ನದೆಲ್ಲವನ್ನೂ ಕಳೆದುಕೊಂಡ ದುರ್ಯೋಧನನ ಆರ್ತನಾದದಂತೆ ಇದೆ~ ಎಂದು ಜನತಾದಳ (ಎಸ್) ಟೀಕಿಸಿದೆ.
ಜೆಡಿಎಸ್ ಉಪಾಧ್ಯಕ್ಷ ಎಂ.ಡಿ.ಚಂದ್ರಶೇಖರ್ ಬುಧವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, `ಅಪ್ಪ ಮಕ್ಕಳನ್ನು ವಿಧಾನಸೌಧದ ಮೆಟ್ಟಿಲು ಹತ್ತಲು ಬಿಡುವುದಿಲ್ಲ ಎಂಬ ಬಿಎಸ್ವೈ ಹೇಳಿಕೆ ಹಾಸ್ಯಾಸ್ಪದವಾದುದು. ವಿಧಾನಸೌಧದ ಅವರ ಆಸ್ತಿ ಅಲ್ಲ. ಇಂತಹ ಹೇಳಿಕೆಗಳು ಅವರ ಬೌದ್ಧಿಕ ದಿವಾಳಿತನವನ್ನು ಎತ್ತಿ ತೋರಿಸುತ್ತದೆ~ ಎಂದು ಲೇವಡಿ ಮಾಡಿದರು.
`ಬಿಎಸ್ವೈ ಹೇಳಿಕೆಗಳಿಗೆ ಬಿಜೆಪಿ ವರಿಷ್ಠರು ಕಡಿವಾಣ ಹಾಕದಿದ್ದರೆ ರಾಜ್ಯದಲ್ಲಿ ಪಕ್ಷದ ಅವಸಾನ ಖಚಿತ. ಅವರ ನಡವಳಿಕೆ ಪ್ರಜಾಪ್ರಭುತ್ವದ ಆಶಯಗಳಿಗೆ ಕಂಟಕಪ್ರಾಯ. ಯಡಿಯೂರಪ್ಪ ತಮ್ಮ ಸ್ವಯಂಕೃತ ಅಪರಾಧಗಳಿಂದ ಅಧಿಕಾರವನ್ನು ಕಳೆದುಕೊಂಡರು ಹಾಗೂ ರಾಜ್ಯದ ಜನತೆಯ ನಿರೀಕ್ಷೆಗಳನ್ನು ಮಣ್ಣುಪಾಲು ಮಾಡಿದರು. ಬಿಜೆಪಿ ಅಧಿಕಾರಕ್ಕೆ ಬರಲು ನಾನೇ ಕಾರಣ ಎಂಬ ಯಡಿಯೂರಪ್ಪ ತರ್ಕ ಅರ್ಥಹೀನ~ ಎಂದು ಅವರು ಅಭಿಪ್ರಾಯಪಟ್ಟರು.