ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ಬಿಜೆಪಿ ಅಭಿವೃದ್ಧಿ ಕಾರ್ಯಗಳೇ ನನಗೆ ಶ್ರೀರಕ್ಷೆ'

ಪ್ರಜಾವಾಣಿ ಸಂದರ್ಶನ
Last Updated 10 ಏಪ್ರಿಲ್ 2013, 8:11 IST
ಅಕ್ಷರ ಗಾತ್ರ

ಧಾರವಾಡ: ಬಿಜೆಪಿಯ ಹಿರಿಯ ಮುಖಂಡ, ಶಾಸಕ ಚಂದ್ರಕಾಂತ ಬೆಲ್ಲದ ಅವರ ಪುತ್ರ ಅರವಿಂದ ಬೆಲ್ಲದ ಈ ಬಾರಿ ಹುಬ್ಬಳ್ಳಿ-ಧಾರವಾಡ ಪಶ್ಚಿಮ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರೆ. *2ರ ಹರೆಯದ ಅರವಿಂದ ಬೆಲ್ಲದ ಅವರು ಇಂದಿನ ರಾಜಕೀಯ ವ್ಯವಸ್ಥೆ, ಶೈಕ್ಷಣಿಕ ವ್ಯವಸ್ಥೆ ಏರಬೇಕಾದ ಹಂತಗಳ ಬಗ್ಗೆ `ಪ್ರಜಾ ವಾಣಿ'ಗೆ ನೀಡಿದ ಸಂದರ್ಶನದಲ್ಲಿ ಹಂಚಿ ಕೊಂಡಿದ್ದಾರೆ.

ಹುಬ್ಬಳ್ಳಿಯ ಬಿ.ವಿ. ಭೂಮರಡ್ಡಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಪದವಿ ಪಡೆದ ಅರವಿಂದ 1991ರಲ್ಲಿ ಉದ್ಯಮದಲ್ಲಿ ತೊಡಗಿಸಿಕೊಂಡರು. ಆದರೆ, ನಂತರವೂ ಓದಬೇಕೆಂಬ ಆಸಕ್ತಿಯಿಂದಾಗಿ ಫ್ರಾನ್ಸ್‌ನ ಫೌಂಟನ್‌ಬ್ಲೋ ನಗರದ ಪ್ರತಿಷ್ಠಿತ `ಇನ್ಸಿಯಾಡ್' ಸಂಸ್ಥೆಯಲ್ಲಿ ಡಿಪ್ಲೊಮಾ ಇನ್ ಬಿಸಿನೆಸ್ ಮ್ಯಾನೇಜ್‌ಮೆಂಟ್ ಪದವಿ ಪಡೆದಿದ್ದಾರೆ.

*ಶಾಸಕರಾಗಿ ಆಯ್ಕೆಯಾದರೆ ನೀವು ಕೈಗೊಳ್ಳಬಹುದಾದ ಪ್ರಮುಖ ಕೆಲಸಗಳು ಯಾವವು?
ಧಾರವಾಡವನ್ನು ಶೈಕ್ಷಣಿಕ, ಸಾಂಸ್ಕೃತಿಕ ನಗರಿಯನ್ನಾಗಿ ಮಾತ್ರ ಗುರುತಿಸಲಾಗುತ್ತಿದೆ. ಆದರೆ ಇವಷ್ಟೇ ಧಾರವಾಡದ ಹೆಸರನ್ನು ಜನಪ್ರಿಯಗೊಳಿಸಿಲ್ಲ. ನನ್ನ ವ್ಯಾಪ್ತಿಗೆ 13 ಹಳ್ಳಿಗಳೂ ಬರುತ್ತದೆ. ಪಕ್ಕದಲ್ಲೇ ಬೇಲೂರು ಕೈಗಾರಿಕಾ ಪ್ರದೇಶವೂ ಬೆಳೆಯುತ್ತಿದೆ. ಹಾಗಾಗಿ ಇದಕ್ಕೆ ಮೂರು ಮತ್ತೊಂದು ಆಯಾಮವೂ ಇದೆ.

ಶೈಕ್ಷಣಿಕ ಆಯಾಮವನ್ನು ತೆಗೆದುಕೊಳ್ಳಬಹು ದಾದರೆ ಕರ್ನಾಟಕ ವಿ.ವಿ., ಕೃಷಿ ವಿ.ವಿ.ಗಳು ಇವೆ. ಇವು ಎಷ್ಟೋ ವರ್ಷದಿಂದ ಹಾಗೆಯೇ ಉಳಿದಿವೆ. ಅದನ್ನು ಉನ್ನತೀಕರಿಸುವ, ಹೊಸ ಆಯಾಮದ ಸ್ಪರ್ಶ ನೀಡುವ ಅವಶ್ಯಕತೆ ಇದೆ. ಅದನ್ನು ಈಗಲೇ ಹೇಳುವುದಕ್ಕಿಂತ ಶಾಸಕನಾಗಿ ಆಯ್ಕೆಯಾದ ಬಳಿಕ ಕಾರ್ಯರೂಪಕ್ಕೆ ತರುತ್ತೇನೆ.

ಧಾರವಾಡ ಆಕಾಶವಾಣಿ ಕೇಂದ್ರವು ರಾಜ್ಯದ ಯಾವುದೇ ಆಕಾಶವಾಣಿ ಕೇಂದ್ರಗಳು ಮಾಡದಷ್ಟು ಉತ್ತಮ ಕೆಲಸಗಳನ್ನು ಮಾಡುತ್ತಿದೆ. ಅದಕ್ಕೂ ಇನ್ನಷ್ಟು ಬಲ ನೀಡುವ ಅವಶ್ಯಕತೆಯಿದೆ. ಇನ್ನು ಕೆಲ ವರ್ಷಗಳಲ್ಲೇ ಬೇಲೂರು ಕೈಗಾರಿಕಾ ವಲಯ ಬೆಳೆಯಲಿದೆ. ಕೈಗಾರಿಕೆ, ಶಿಕ್ಷಣ ಹಾಗೂ ಸಾಂಸ್ಕೃತಿಕ ಕ್ಷೇತ್ರಗಳ ಸಮ್ಮಿಲನ ಅಗತ್ಯವಿದ್ದು, ಅದಕ್ಕೆ ತಕ್ಕ ನೀಲನಕ್ಷೆಯನ್ನು ರೂಪಿಸಿದ್ದೇನೆ.

*ತುರ್ತಾಗಿ ನೀವು ಮಾಡಲೇಬೇಕು ಎಂದಿರುವ ಕೆಲಸಗಳು?
ವಾರ್ಡ್‌ವಾರು ಎಲ್ಲ ಉದ್ಯಾನಗಳ ಅಭಿವೃದ್ಧಿ, ಪ್ರತಿ ವಾರ್ಡ್‌ನಲ್ಲಿಯೂ ಮಾರುಕಟ್ಟೆಗಳನ್ನು ಸ್ಥಾಪಿಸುವುದು, 2* ಗಂಟೆಯೂ ನೀರು ಪೂರೈಕೆ ಮಾಡುವುದು.

* ರಾಜಕಾರಣಿಗಳು ಜನರಿಗೆ ವಿವಿಧ ಬಗೆಯ ಆಮಿಷ ತೋರಿಸಿ ಭ್ರಷ್ಟರನ್ನಾಗಿ ಮಾಡಿದ್ದಾರೆ ಎಂಬ ಆರೋಪಗಳಿವೆ. ಮೂಲತಃ ಉದ್ಯಮಿಯಾಗಿರುವ ನೀವು ಈ ಪರಿಸ್ಥಿತಿಯನ್ನು ಹೇಗೆ ನಿಭಾಯಿಸುತ್ತೀರಿ?
ರಾಜಕಾರಣಿಗಳು ಭ್ರಷ್ಟರಾಗಿರಬಹುದು. ಆದರೆ ಜನರು ಇನ್ನೂ ಭ್ರಷ್ಟರಾಗಿಲ್ಲ. ಆದ್ದರಿಂದಲೇ ಈ ಚುನಾವಣೆ ಎದುರಿಸುವುದು ನನಗೆ ಸುಲಭವಾ ಗಿದೆ. ನನ್ನ ತಂದೆಯವರು ಮಾಡಿದ ಅಭಿವೃದ್ಧಿ ಕೆಲಸಗಳ ಮೇಲೆ ನಾನು ಮತ ಕೇಳುತ್ತೇನೆ. ಹಾಗೆಂದು ತಂದೆಯ ಆಶ್ರಯ ಪಡೆದಿದ್ದೇನೆ ಎಂದರ್ಥವಲ್ಲ. ತಂದೆಯವರ ಸಹಕಾರದಿಂದ ಉದ್ಯಮಿಯಾಗಿ ಬೆಳೆದೆ. ಜನರೊಂದಿಗೂ ನಿರಂತರ ವಾಗಿ ಒಡನಾಟ ಹೊಂದಿದ್ದೇನೆ.

ಕಳೆದ ಐದು ವರ್ಷಗಳಲ್ಲಿ ಬಿಜೆಪಿ ಸರ್ಕಾರ ಅವಳಿ ನಗರದಲ್ಲಿ ಹಲವಾರು ಪಾರ್ಕ್, ರಸ್ತೆಗಳನ್ನು ಅಭಿವೃದ್ಧಿಪಡಿಸಿದೆ. ತಂದೆ ಚಂದ್ರಕಾಂತ ಬೆಲ್ಲದ ಅವರೂ ತಮ್ಮ ಅವಧಿಯಲ್ಲಿ ಹಲವು ಕಲ್ಯಾಣ ಕಾರ್ಯಗಳನ್ನು ಮಾಡಿದ್ದಾರೆ. ಅವೇ ನನಗೆ ಶ್ರೀರಕ್ಷೆಯಾಗಲಿವೆ.

*ಲಿಂಗಾಯತ ಟ್ರಂಪ್ ಕಾರ್ಡ್‌ನಿಂದ ಚುನಾವಣೆ ಎದುರಿಸುತ್ತೀರಾ?
ನಮ್ಮ ತಂದೆ ವೀರಶೈವ ಮಹಾಸಭಾದ ನಾಯಕತ್ವ ವಹಿಸಿಕೊಂಡು ಕೆಲಸ ಮಾಡಿದ್ದಾರೆ. ನಾವು ಲಿಂಗಾಯತ ಧರ್ಮದಲ್ಲಿ ಬೆಳೆದು ಅದರ ಆದರ್ಶಗಳನ್ನು ಅಳವಡಿಸಿಕೊಂಡಿದ್ದೇವೆ. ಆದರೆ, ನನ್ನ ಉದ್ಯಮವೂ ಸೇರಿದಂತೆ, ನನ್ನ ಸ್ನೇಹಿತ ವರ್ಗದವರಲ್ಲಿ ಬಹುತೇಕರು ಲಿಂಗಾಯತರಲ್ಲ. ಬೆಲ್ಲದ ಉದ್ಯಮ ಸಮೂಹವವನ್ನು ನೋಡಿ ಕೊಳ್ಳುವ 14 ಮ್ಯಾನೇಜರ್‌ಗಳಲ್ಲಿ ಇಬ್ಬರು ಮಾತ್ರ ಲಿಂಗಾಯರು. ನನ್ನ ಪತ್ನಿ ಸ್ಮೃತಿ ಪಂಜಾಬಿ. ಇನ್ನು ಜಾತಿ ಆಧಾರದಲ್ಲಿ ಮತ ಕೇಳುವುದು ಎಲ್ಲಿಂದ ಬಂತು? ನನ್ನ ತಂದೆ ಒಮ್ಮೆಯೂ, ಲಿಂಗಾಯತ ರಲ್ಲದವರೊಂದಿಗೆ ಸ್ನೇಹ ಮಾಡಬೇಡ ಎಂದಿಲ್ಲ. ಪಂಜಾಬಿ ಯುವತಿಯನ್ನು ಮದುವೆಯಾದರೂ ಆಕ್ಷೇಪಿಸಲಿಲ್ಲ.

*ನಿಮಗೆ ಟಿಕೆಟ್ ನೀಡಿದ್ದರಿಂದ ಪಕ್ಷದಲ್ಲಿ ಒಳಜಗಳ ಏನಾದರೂ ಇದೆಯೇ?
ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡುವುದಾಗಿ ಭರವಸೆ ನೀಡಿದ್ದಾರೆ. ಅಸಲಿಗೆ ನಮ್ಮಲ್ಲಿ ಒಳಜಗಳ ಇಲ್ಲವೇ ಇಲ್ಲ.

*ಉದ್ಯಮಿಯಾಗಿರುವ ನೀವು ಇದೀಗ ಶಾಸಕರಾಗಲು ಹೊರಟಿದ್ದೀರಿ. ಎರಡನ್ನೂ ಹೇಗೆ ನಿಭಾಯಿಸುತ್ತೀರಿ?
ನಾನಿಲ್ಲದೆಯೇ ನಮ್ಮ ಸಮೂಹ ಉದ್ಯಮಗಳು ತಮ್ಮ ಪಾಡಿಗೆ ಕೆಲಸ ಮಾಡಿಕೊಂಡು ಹೋಗುವ ವ್ಯವಸ್ಥೆ ಮಾಡಿದ್ದೇನೆ. ನಮ್ಮದೊಂದು ನಂಬಿಗಸ್ಥ ತಂಡವಿದೆ. ಅವರೇ ಅದನ್ನು ನಿಭಾಯಿಸಿಕೊಂಡು ಹೋಗುತ್ತಾರೆ. ಎರಡು ವರ್ಷಗಳ ಹಿಂದೆ ಎರಡು ಗಂಟೆ ಮಾತ್ರ ಕಚೇರಿಗೆ ಹೋಗುತ್ತಿದ್ದೆ. ಇತ್ತೀಚೆಗೆ ಆ ಸಮಯ ಅರ್ಧ ಗಂಟೆಗೆ ಇಳಿದಿದೆ. ಹೀಗಾಗಿ ಜನಸೇವೆಗೆ ಸಾಕಷ್ಟು ಸಮಯ ಸಿಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT