ಸಾಗರ: ಇಲ್ಲಿನ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಪುರಸಭೆ ಮಾಜಿ ಅಧ್ಯಕ್ಷೆ ಶರಾವತಿ ಸಿ. ರಾವ್ ಕಣಕ್ಕೆ ಇಳಿಯುವುದು ಬಹುತೇಕ ಖಚಿತವಾಗಿದೆ.
ಕಳೆದ ಎರಡು ಚುನಾವಣೆಗಳಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದ ಬೇಳೂರು ಗೋಪಾಲಕೃಷ್ಣ ಬಿಜೆಪಿಗೆ ಗುಡ್ಬೈ ಹೇಳುತ್ತಿದ್ದು, ಬದಲಾದ ರಾಜಕೀಯ ಸನ್ನಿವೇಶದಲ್ಲಿ ಮಹಿಳಾ ಅಭ್ಯರ್ಥಿ ಕಣಕ್ಕೆ ಇಳಿಸಲು ತೀರ್ಮಾನಿಸಿರುವುದಾಗಿ ಬಿಜೆಪಿ ಮೂಲಗಳು ದೃಢಪಡಿಸಿವೆ.
ಬಿಜೆಪಿ ಮುಖಂಡ ಯು.ಎಚ್. ರಾಮಪ್ಪ, ಸತ್ಯನಾರಾಯಣ ತಳಿನೀರು, ಚಿತ್ರನಟ ಬಾಲರಾಜ್ ಬಿಜೆಪಿಯಿಂದ ಕಣಕ್ಕೆ ಇಳಿಯಲು ಬಯಸಿದ್ದರು. ಈಚೆಗಷ್ಟೇ ಬಿಜೆಪಿ ಸೇರಿರುವ ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯ ಕೆ. ಅರುಣ್ಪ್ರಸಾದ್ ಹೆಸರು ಕೂಡ ಕೇಳಿ ಬಂದಿತ್ತು.
ಕಳೆದ ನಗರಸಭಾ ಚುನಾವಣೆಯಲ್ಲಿ ಸ್ಪರ್ಧಿಸದೇ ಪಕ್ಷದ ಸಂಘಟನೆಗೆ ಮುಂದಾದ ಶರಾವತಿ ಸಿ. ರಾವ್ ಅವರಿಗೆ ಟಿಕೆಟ್ ನೀಡಬೇಕು ಎಂದು ಬಿಜೆಪಿಯ ತಾಲ್ಲೂಕು ಹಾಗೂ ಜಿಲ್ಲಾ ಘಟಕ ಶಿಫಾರಸು ಮಾಡಿದೆ ಎಂದು ತಿಳಿದುಬಂದಿದೆ. ದೆಹಲಿಯ ಬಿಜೆಪಿ ವರಿಷ್ಠರಿಂದ ಒಪ್ಪಿಗೆ ದೊರೆತ ನಂತರ ಅಧಿಕೃತ ಪ್ರಕಟಣೆ ಹೊರಬೀಳಲಿದೆ ಎನ್ನಲಾಗಿದೆ.
ಬಿಜೆಪಿ ತಮಗೆ ಟಿಕೆಟ್ ನೀಡಲು ಒಪ್ಪಿದೆ. ಈ ಬಗ್ಗೆ ವರಿಷ್ಠರು ಘೋಷಿಸುತ್ತಾರೆ ಎಂದು ಶರಾವತಿ ಸಿ.ರಾವ್ `ಪ್ರಜಾವಾಣಿ'ಗೆ ತಿಳಿಸಿದರು.
ಕಾಂಗ್ರೆಸ್ನಿಂದ ಕಾಗೋಡು ತಿಮ್ಮಪ್ಪ, ಕೆಜೆಪಿಯಿಂದ ಬಿ.ಆರ್. ಜಯಂತ್ ಸ್ಪರ್ಧೆ ಖಚಿತವಾಗಿದ್ದು. ಪ್ರಚಾರ ಆರಂಭಿಸಿದ್ದಾರೆ. ಗೋಪಾಲಕೃಷ್ಣ ಬೇಳೂರು ಜೆಡಿಎಸ್ನಿಂದ ಸ್ಪರ್ಧಿಸುತ್ತಾರೆ ಎನ್ನಲಾಗಿದೆ.