ಬೆಂಗಳೂರು: ಯುವಕರಿಗೆ ವಿಶೇಷ ಸವಲತ್ತುಗಳನ್ನು ನೀಡುವುದಾಗಿ ಬಿಜೆಪಿ ಪಕ್ಷ ಚುನಾವಣೆ ವೇಳೆ ಕೊಟ್ಟಿದ್ದ ಎಲ್ಲಾ ಭರವಸೆಗಳನ್ನು ಶೀಘ್ರವೇ ಅನುಷ್ಠಾನಕ್ಕೆ ತರುವಂತೆ ಸರ್ಕಾರವನ್ನು ಒತ್ತಾಯಿಸಿ ನಗರ ದಕ್ಷಿಣ ಲೋಕಸಭಾ ಯುವ ಕಾಂಗ್ರೆಸ್ ಕಾರ್ಯಕರ್ತರು ನಗರದ ಬಸವನಗುಡಿ ಸಮೀಪದ ರಾಮಕೃಷ್ಣ ಆಶ್ರಮ ವೃತ್ತದ ಬಳಿ ಬುಧವಾರ ಧರಣಿ ನಡೆಸಿದರು.
ವಿದ್ಯಾವಂತ ಯುವಕರ ಏಳಿಕೆಗಾಗಿ ವಿಶೇಷ ಸವಲತ್ತುಗಳನ್ನು ನೀಡುವುದಾಗಿ ಬಿಜೆಪಿ ಚುನಾವಣೆ ವೇಳೆ ತಿಳಿಸಿತ್ತು. ಅಧಿಕಾರಕ್ಕೆ ಬಂದು ಮೂರೂವರೆ ವರ್ಷ ಕಳೆದರೂ ಭರವಸೆಗಳು ಜಾರಿಯಾಗಿಲ್ಲ. `ಒಂದು ಲಕ್ಷ ಉದ್ಯಾಗಾವಕಾಶ~ಗಳನ್ನು ಕೊಡುತ್ತೇವೆ ಹಾಗೂ ವಿದ್ಯಾವಂತ ನಿರುದ್ಯೋಗ ಯುವಕರಿಗೆ ತಿಂಗಳಿಗೆ ರೂ. 1500 ವಿಶೇಷ ಭತ್ಯ ನೀಡುತ್ತೇವೆ ಎಂಬ ಮಾತುಗಳು ಕನಸಾಗಿಯೇ ಉಳಿದಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮಾಜಿ ಸಚಿವ ರಾಮಲಿಂಗಡ್ಡಿ, ಸಂಘಟನೆಯ ಅಧ್ಯಕ್ಷ ಎಚ್. ಎನ್ ಗೌತಮ್ ಸೇರಿದಂತೆ ಹಲವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.