ಶಿವಮೊಗ್ಗ: ಯಡಿಯೂರಪ್ಪ ನ್ಯಾಯಾಂಗ ಬಂಧನದಿಂದ ಪಕ್ಷದ ವರ್ಚಸ್ಸಿಗೆ ಧಕ್ಕೆಯಾಗಿದೆ ಎಂಬ ಬಿಜೆಪಿ ಹಿರಿಯ ಮುಖಂಡ ಎಲ್.ಕೆ. ಅಡ್ವಾಣಿ ಅವರ ಹೇಳಿಕೆಗೆ ಪ್ರತಿಕ್ರಿಯಿಸಲು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಕೆ.ಎಸ್. ಈಶ್ವರಪ್ಪ ಗುರುವಾರ ಇಲ್ಲಿ ನಿರಾಕರಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸ್ವಚ್ಛ ಆಡಳಿತಕ್ಕಾಗಿ ಅಡ್ವಾಣಿ ಅವರ ಜನಚೇತನ ಯಾತ್ರೆ ಹೊರಟಿದೆ. ಭ್ರಷ್ಟಾಚಾರದ ಬಗ್ಗೆ ಈಗ ದೇಶದೆಲ್ಲೆಡೆ ಚರ್ಚೆ ಆರಂಭವಾಗಿರುವುದು ಸಂತೋಷದ ಸಂಗತಿ ಎಂದರು.
`ಡಿನೋಟಿಫಿಕೇಷನ್ ಯಾರ ಕಾಲದಲ್ಲಿ ಆಗಿಲ್ಲ; ಎಸ್.ಎಂ. ಕೃಷ್ಣ, ಧರ್ಮಸಿಂಗ್, ಎಚ್.ಡಿ. ಕುಮಾರಸ್ವಾಮಿ ಎಲ್ಲರ ಕಾಲದಲ್ಲೂ ಆಗಿವೆ. ಆದರೆ, ಯಡಿಯೂರಪ್ಪ ಕಾಲದಲ್ಲಿ ಆಗಿಲ್ಲವೇ ಎಂದು ಕೇಳಿದರೆ ನನ್ನಲ್ಲಿ ಉತ್ತರವಿಲ್ಲ~ ಎಂದು ಈಶ್ವರಪ್ಪ ಹೇಳಿದರು.
ಕಾಂಗ್ರೆಸ್ನವರು ತಮಗೂ ಭ್ರಷ್ಟಾಚಾರಕ್ಕೂ ಸಂಬಂಧವೇ ಇಲ್ಲ ಎಂಬಂತೆ ವರ್ತಿಸುತ್ತಿದ್ದಾರೆ. ಆದರೆ, ಅವರ ಪಕ್ಷದ ಮುಖಂಡರೇ ಸಾಲು-ಸಾಲಾಗಿ ಜೈಲು ಸೇರಿದ್ದಾರೆ. ಇನ್ನೂ ಸೇರುವವರಿದ್ದಾರೆ. ಆಗಲೂ ಸಿದ್ದರಾಮಯ್ಯ ಡ್ಯಾನ್ಸ್ ಮಾಡುತ್ತಾರೆಯೇ? ಎಂದು ಅವರು ಪ್ರಶ್ನಿಸಿದರು.
ಸಾರ್ವಜನಿಕ ಜೀವನದಲ್ಲಿ ಯಾರೂ ಸತ್ಯಹರಿಶ್ಚಂದ್ರರಲ್ಲ, ಪ್ರತಿಯೊಬ್ಬರಲ್ಲೂ ವ್ಯಕ್ತಿದೋಷಗಳಿರುತ್ತವೆ. ಯಾವುದೇ ವ್ಯಕ್ತಿಯ ವೈಯಕ್ತಿಕ ಬದುಕನ್ನು ಮಾಧ್ಯಮಗಳು ವಿಜೃಂಭಿಸುವುದು ಸರಿಯಲ್ಲ ಎಂದು ಅವರು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಕುಟುಂಬದ ಬಗೆಗಿನ ಪ್ರಶ್ನೆಗೆ ಪ್ರತಿಕ್ರಿಯಿಸಿದರು.