ಬೆಂಗಳೂರು (ಪಿಟಿಐ): ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಬೆಂಬಲಿಗ ಮಾಜಿ ಕೇಂದ್ರಸಚಿವ ವಿ. ಧನಂಜಯಕುಮಾರ್ ಅವರನ್ನು ಬಿಜೆಪಿ ಹೈಕಮಾಂಡ್ 6 ವರ್ಷಗಳ ಅವಧಿಗೆ ಪಕ್ಷದಿಂದ ಮಂಗಳವಾರ ಉಚ್ಚಾಟಿಸಿದ್ದು, ಯಡಿಯೂರಪ್ಪ ಅವರಿಗೆ ಭಾರಿ ಹೊಡೆತ ನೀಡಿದೆ.
ಕಾವೇರಿ ವಿವಾದವನ್ನು ನಿರ್ವಹಿಸಿದ ರೀತಿಯ ಕುರಿತು ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಅವರ ವಿರುದ್ಧ ಧನಂಜಯ ಕುಮಾರ್ ಅವರು ಮಾಡಿದ್ದ ಟೀಕೆಗೆ ಪಕ್ಷದ ಹೈಕಮಾಂಡ್ ನೋಟಿಸ್ ನೀಡಿತ್ತು.
ಇದಕ್ಕೆ ಯಾವುದೇ ಕ್ಷಮಾಪಣೆ ಹಾಗೂ ವಿಷಾದ ವ್ಯಕ್ತಪಡಿಸದ ಧನಂಜಯಕುಮಾರ್ ಅವರು ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದರು. ಇದಕ್ಕಾಗಿ ಅವರನು ಉಚ್ಚಾಟನೆ ಮಾಡಲಾಯಿತು ಎಂದು ಪಕ್ಷದ ಮೂಲಗಳು ತಿಳಿಸಿವೆ.
ಯಡಿಯೂರಪ್ಪ ಅವರ ಕಟ್ಟಾ ಬೆಂಬಲಿಗ ಎಂದೇ ಗುರುತಿಸಲಾಗಿರುವ ಧನಂಜಯಕುಮಾರ್ ಅವರ ಉಚ್ಚಾಟನೆ ಯಡಿಯೂರಪ್ಪ ಅವರ ಪಾಳಯದಲ್ಲಿ ಸಂಚಲನ ಮೂಡಿಸಿದೆ.