ಬೆಂಗಳೂರು: ಬಿಜೆಪಿಯಲ್ಲಿ ವಿಲೀನ ಗೊಳ್ಳುವ ವಿಷಯದ ಬಗ್ಗೆ ಕೆಜೆಪಿ ಕೋರ್ ಕಮಿಟಿ ಸಭೆಯಲ್ಲಿ ಒಮ್ಮತ ಮೂಡದ ಕಾರಣ ಯಾವುದೇ ತೀರ್ಮಾನ ತೆಗೆದು ಕೊಳ್ಳಲು ಸಾಧ್ಯವಾಗಲಿಲ್ಲ ಎಂದು ಪಕ್ಷದ ಮೂಲಗಳು ತಿಳಿಸಿವೆ.
ವಿಲೀನದ ಬಗ್ಗೆ ನಿರ್ಧರಿಸುವ ಉದ್ದೇಶ ದಿಂದ ಕೆಜೆಪಿ ಅಧ್ಯಕ್ಷ ಬಿ.ಎಸ್. ಯಡಿ ಯೂರಪ್ಪ ಬುಧವಾರ ತಮ್ಮ ನಿವಾಸ ದಲ್ಲಿ ಕೋರ್ ಕಮಿಟಿ ಸಭೆ ಕರೆದಿದ್ದರು.
ಪಕ್ಷದ ಕಾರ್ಯಾಧ್ಯಕ್ಷೆ ಶೋಭಾ ಕರಂ ದ್ಲಾಜೆ, ಮಾಜಿ ಸಚಿವ ಎಂ.ಪಿ. ರೇಣುಕಾ ಚಾರ್ಯ, ಮಾಜಿ ಶಾಸಕ ಬಿ.ಪಿ.ಹರೀಶ್ ಮೊದಲಾದವರು ವಿಲೀನಕ್ಕೆ ವಿರೋಧ ವ್ಯಕ್ತಪಡಿಸಿದರು ಎಂದು ಗೊತ್ತಾಗಿದೆ.
‘ವಿಲೀನಕ್ಕಿಂತ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಳ್ಳುವುದು ಒಳ್ಳೆಯದು. ವಿಲೀ ನವಾದರೆ ನಮ್ಮ ಕಡೆಯವರಿಗೆ ಸೂಕ್ತ ಸ್ಥಾನಮಾನ ಸಿಗುವುದು ಅನುಮಾನ. ಹೀಗಾಗಿ ಪ್ರತ್ಯೇಕ ಅಸ್ತಿತ್ವ ಉಳಿಸಿಕೊಳ್ಳು ವುದು ಸೂಕ್ತ’ ಎಂದು ಶೋಭಾ ಹೇಳಿ ದರು ಎನ್ನಲಾಗಿದೆ.
ವಿಲೀನಕ್ಕೆ ಎಲ್ಲ ಶಾಸಕರು ಒಪ್ಪುವು ದಿಲ್ಲ. ಅಲ್ಲದೆ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಎನ್ಡಿಎ ಒಕ್ಕೂಟಕ್ಕೆ ಸ್ಪಷ್ಟ ಬಹುಮತ ಬಾರದೆ ಹೋದರೆ ರಾಷ್ಟ್ರ ರಾಜಕಾರಣದ ಚಿತ್ರಣ ಬದಲಾಗಲಿದೆ. ಆದ್ದರಿಂದ ಕಾದು ನೋಡುವುದು ಒಳ್ಳೆಯದು ಎಂದು ಕೆಲವರು ಸಲಹೆ ಮಾಡಿದರು ಎಂದು ಮೂಲಗಳು ತಿಳಿಸಿವೆ.
ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರನ್ನು ಬಿಜೆಪಿಯ ಪ್ರಧಾನಿ ಅಭ್ಯರ್ಥಿ ಎಂದು ಘೋಷಿಸಿದ ಬೆನ್ನಿಗೇ ಕೆಜೆಪಿ – ಬಿಜೆಪಿ ವಿಲೀನದ ಬಗ್ಗೆ ಎರಡೂ ಕಡೆಯಿಂದ ಪ್ರತಿಕ್ರಿಯೆಗಳು ವ್ಯಕ್ತವಾಗು ತ್ತಿವೆ. ಆದರೆ, ಕೆಜೆಪಿಯಲ್ಲಿ ಆರು ಶಾಸಕ ರಿದ್ದು, ಅವರೆಲ್ಲರೂ ಬಿಜೆಪಿಯೊಂದಿಗೆ ವಿಲೀನವಾಗುವ ಸಾಧ್ಯತೆ ಇಲ್ಲ. ಬಿ.ಆರ್. ಪಾಟೀಲ, ಗುರುಪಾದಪ್ಪ ನಾಗಮಾರ ಪಳ್ಳಿ ವಿಲೀನವನ್ನು ವಿರೋಧಿಸಿದ್ದಾರೆ ಎನ್ನ ಲಾಗಿದೆ. ಈ ಇಬ್ಬರೂ ಶಾಸಕರು ಕೋರ್ ಕಮಿಟಿ ಸಭೆಯಲ್ಲಿ ಭಾಗವಹಿಸಿರಲಿಲ್ಲ.
ಬಿಜೆಪಿಯೊಂದಿಗೆ ಹೋಗುವುದು ಕಷ್ಟ ವಾಗಲಿದೆ. ಮುಂದೆ ಏನು ಮಾಡಬೇಕು ಎಂದು ಇನ್ನೂ ನಿರ್ಧರಿಸಿಲ್ಲ. ಪಕ್ಷದ ಇತರೆ ಶಾಸಕರು ಹಾಗೂ ಕ್ಷೇತ್ರದ ಜನರೊಂದಿಗೆ ಸಮಾಲೋಚನೆ ನಡೆಸಿ ಸೂಕ್ತ ತೀರ್ಮಾ ನ ತೆಗೆದುಕೊಳ್ಳಲಾಗು ವುದು ಎಂದು ಪಾಟೀಲ ‘ಪ್ರಜಾವಾಣಿ’ಗೆ ತಿಳಿಸಿದರು.
ವಿಲೀನ ಇಲ್ಲ: ಬಿಜೆಪಿ ಜೊತೆ ಕೆಜೆಪಿ ವಿಲೀನವಾಗುವ ಪ್ರಶ್ನೆಯೇ ಇಲ್ಲ. ಆದರೆ, ಮೈತ್ರಿಗೆ ಸಿದ್ಧ ಎಂದು ಕೆಜೆಪಿ ಮುಖಂಡ ವಿ.ಧನಂಜಯಕುಮಾರ್ ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.