ಶ್ರೀರಂಗಪಟ್ಟಣ: ತಾಲ್ಲೂಕಿನ ಕೆ.ಶೆಟ್ಟಹಳ್ಳಿ, ಗೌರಿಪುರ, ಗರುಡನಉಕ್ಕಡ ಗ್ರಾಮಗಳ ಸರ್ಕಾರಿ ಶಾಲೆಗಳಿಗೆ, ಬಿಸಿಯೂಟ ಯೋಜನೆಯಡಿ ಹುಳು ಹಿಡಿದಿರುವ ಬೇಳೆ ಸರಬರಾಜು ಮಾಡಲಾಗಿದೆ.
50 ಕಿ.ಲೋ. ತೂಕದ ಚೀಲಗಳಲ್ಲಿ ಶಾಲೆಗಳಿಗೆ ನೀಡಿರುವ ಬೇಳೆಯಲ್ಲಿ ಕಪ್ಪು ಹುಳುಗಳು ಕಂಡು ಬಂದಿವೆ. ಹುಳುಗಳ ಮೊಟ್ಟೆಗಳು ಕೂಡ ಇವೆ.
ಬಿಸಿಲಿನಲ್ಲಿ ಒಣಗಿಸಿ, ಸೋಸಿದ ನಂತರ ಬೇಳೆಯನ್ನು ಅಡುಗೆಗೆ ಬಳಸಲಾಗುತ್ತಿದೆ. ತಾಲ್ಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘ ಈ ಬೇಳೆ ಸರಬರಾಜು ಮಾಡುತ್ತಿದ್ದು ಹಿಂದೆಂದಿಗಿಂತ ಕಳಪೆ ಬೇಳೆ ವಿತರಿಸಿದೆ ಎಂದು ಕೆ.ಶೆಟ್ಟಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕ ಚನ್ನೇಗೌಡ `ಪ್ರಜಾವಾಣಿ'ಗೆ ತಿಳಿಸಿದ್ದಾರೆ.
ಈ ಕುರಿತು ಅಕ್ಷರ ದಾಸೋಹ ಯೋಜನೆ ಸಹಾಯಕ ನಿರ್ದೇಶಕ ರತ್ನೇಶ್ ಅವರಿಗೆ ಮಾಹಿತಿ ನೀಡಲಾಗಿದೆ ಎಂದು ಅವರು ಹೇಳಿದ್ದಾರೆ.
ಸರ್ಕಾರಿ ಶಾಲೆ ವಿದ್ಯಾರ್ಥಿಗಳ ಮಧ್ಯಾಹ್ನದ ಬಿಸಿಯೂಟಕ್ಕೆ ಈ ಬಾರಿ ತೀರಾ ಸಣ್ಣದಾದ ಹಾಗೂ ಮುಗ್ಗಲು ಹಿಡಿದ ಬೇಳೆ ಸರಬರಾಜು ಮಾಡಲಾಗಿದೆ. ದನ, ಎಮ್ಮೆಗಳಿಗೆ ಹಾಕುವ ಕಳಪೆ ಕಾಳು ಕೊಡಲಾಗಿದೆ. ವಿದ್ಯಾರ್ಥಿಗಳ ಆರೋಗ್ಯದ ಮೇಲೆ ಇದು ಪರಿಣಾಮ ಬೀರಲಿದೆ. ಹಾಗಾಗಿ ಕಳಪೆ ಬೇಳೆ ನೀಡಿರುವವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಉತ್ತಮ ಗುಣಮಟ್ಟದ ಬೇಳೆ, ಅಕ್ಕಿ ವಿತರಿಸಬೇಕು ಎಂದು ಕೆ.ಶೆಟ್ಟಹಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷ ಸಿ.ದೇವರಾಜು, ಸದಸ್ಯ ದೀಪು ಒತ್ತಾಯಿಸಿದ್ದಾರೆ.