ಬೆಂಗಳೂರು: ನಗರದಲ್ಲಿ ಬೀದಿನಾಯಿಗಳ ನಿಯಂತ್ರಣ ಹಾಗೂ ನಾಯಿಗಳ ಸಂತಾನಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಬಿಬಿಎಂಪಿ ಹೊಸ ಪ್ರಯತ್ನಕ್ಕೆ ಮುಂದಾಗಿದೆ. ಸ್ಥಳದಲ್ಲೇ ಬೀದಿನಾಯಿಗಳಿಗೆ ಸಂತಾನಹರಣ ಶಸ್ತ್ರಚಿಕಿತ್ಸೆ ನಡೆಸಬಹುದಾದ ವಿಶೇಷ ವಾಹನ ಸೇವೆಗೆ ಚಾಲನೆ ನೀಡಿದೆ.
ಬನಶಂಕರಿ ಬಳಿಯ ಶಾಕಂಬರಿನಗರದ ರಾಜರಾಜೇಶ್ವರಿನಗರ ಕೊಳೆಗೇರಿಯಲ್ಲಿ ಸಂತಾನ ಹರಣ ಶಸ್ತ್ರಚಿಕಿತ್ಸಾ ವಾಹನ ಸೇವೆ ಆರಂಭಿಸಲಾಯಿತು. ಇಡೀ ದಿನ 18 ಗಂಡು ನಾಯಿ ಹಾಗೂ 10 ಹೆಣ್ಣು ನಾಯಿಗಳಿಗೆ ಶಸ್ತ್ರಚಿಕಿತ್ಸೆ ಮಾಡಲಾಯಿತು.‘ನಗರದಲ್ಲಿ ನಾಯಿಗಳ ಸಂತಾನಕ್ಕೆ ಕಡಿವಾಣ ಹಾಕಬೇಕಾದ ಅಗತ್ಯವಿದೆ’ ಎಂದು ಪಾಲಿಕೆ ಪಶುಸಂಗೋಪನೆ ವಿಭಾಗದ ಜಂಟಿ ನಿರ್ದೇಶಕ ಡಾ.ಪರ್ವೇಜ್ ಅಹಮ್ಮದ್ ಪೀರನ್ ‘ಪ್ರಜಾವಾಣಿ’ಗೆ ತಿಳಿಸಿದರು.
‘ವಿಶೇಷ ಸಂಚಾರಿ ಘಟಕದಲ್ಲಿ ಒಬ್ಬರು ವೈದ್ಯರು ಹಾಗೂ ಮೂವರು ಸಹಾಯಕರಿರುತ್ತಾರೆ. ನಾಯಿಗಳನ್ನು ಸೆರೆ ಹಿಡಿದು ರೇಬಿಸ್ ನಿರೋಧಕ ಚುಚ್ಚುಮದ್ದು ಹಾಕಲಾಗುವುದು. ಬಳಿಕ ಸಂತಾನಹರಣ ಶಸ್ತ್ರಚಿಕಿತ್ಸೆ ನಡೆಸಿ ಕೆಲವು ಗಂಟೆಗಳ ನಂತರ ಅವುಗಳನ್ನು ಅದೇ ಸ್ಥಳದಲ್ಲಿ ಬಿಡಲಾಗುತ್ತದೆ’ ಎಂದರು.
‘ಸದ್ಯ ದಕ್ಷಿಣ ವಲಯದಲ್ಲಿ ಈ ಸೇವೆ ಆರಂಭಿಸಲಾಗಿದೆ. ಪೂರ್ವ ವಲಯದಲ್ಲೂ ಮತ್ತೊಂದು ಸಂಚಾರಿ ಘಟಕದ ಸೇವೆಯನ್ನು ಶೀಘ್ರವಾಗಿ ಪ್ರಾರಂಭಿಸಲಾಗುವುದು. ಈ ಎರಡೂ ಘಟಕಗಳ ಕಾರ್ಯ ನಿರ್ವಹಣೆ ಹಾಗೂ ಪರಿಣಾಮವನ್ನು ಗಮನಿಸಿ ಇತರೆ ವಲಯಗಳಲ್ಲೂ ಈ ಸೇವೆ ಆರಂಭಿಸುವ ಕುರಿತು ನಿರ್ಧರಿಸಲಾಗುವುದು’ ಎಂದರು.ರಾಜೇಶ್ವರಿನಗರ ಕೊಳೆಗೇರಿಯಲ್ಲಿ ಇನ್ನೂ ಮೂರು ದಿನ ಕಾಲ ಘಟಕ ಕಾರ್ಯ ನಿರ್ವಹಿಸಲಿದೆ.