ಭಾರತ ವಿದೇಶಾಂಗ ನೀತಿಗೆ ರಾಜ್ಯಸಭೆ ಒಪ್ಪಿಗೆ
ನವದೆಹಲಿ, ಸೆ. 3- `ಭಾರತದ ತಟಸ್ಥ ವಿದೇಶಾಂಗ ನೀತಿ ಅಮೂಲ್ಯವಾದದ್ದು, ಎಲ್ಲರ ಮೆಚ್ಚಿಗೆ ಹೊಂದಿರುವ ನೀತಿ. ಈ ವಿದೇಶಾಂಗ ನೀತಿಯಿಂದ ಭಾರತಕ್ಕೆ ಅಲ್ಲದೆ ವಿಶ್ವಕ್ಕು ಲಾಭವಿದೆ' ಎಂಬುದಾಗಿ ಪ್ರಧಾನ ಮಂತ್ರಿ ನೆಹರೂ ಇಂದು ರಾಜ್ಯ ಸಭೆಯಲ್ಲಿ ವಿದೇಶಾಂಗ ವ್ಯವಹಾರದ ಚರ್ಚೆಗೆ ಉತ್ತರವೀಯುತ್ತಾ ತಿಳಿಸಿದರು. ಅವರು ಉತ್ತರ ನೀಡಿದ ನಂತರ ಸರ್ಕಾರದ ವಿದೇಶಾಂಗ ನೀತಿಗೆ ಸಭೆ ಅಂಗೀಕಾರ ನೀಡಿತು.
ಕಾಶ್ಮೀರವನ್ನು ಪಾಕಿಸ್ತಾನಕ್ಕೆ ಕೊಟ್ಟರೆ `ಭಾರತ ಸತ್ತಂತೆ'
ನವದೆಹಲಿ, ಸೆ. 3- ಕಾಶ್ಮೀರ ರಾಜ್ಯಾಂಗ ಹಾಗೂ ನ್ಯಾಯಾಂಗ ದೃಷ್ಟಿಯಿಂದ ಪೂರ್ಣವಾಗಿ ಭಾರತದ ಭಾಗ. ಕಾಶ್ಮೀರದ ಬಗ್ಗೆ ಯಾವುದೊಂದು ಬದಲಾವಣೆಯೂ ಕಾಶ್ಮೀರ, ಭಾರತ ಹಾಗೂ ಪಾಕಿಸ್ತಾನದ ಜನತೆಗೆ ವಿನಾಶಕಾರಿ ಪರಿಣಾಮವನ್ನುಂಟು ಮಾಡೀತು. ಕಾಶ್ಮೀರವನ್ನು `ಒಂದು ತಟ್ಟೆಯಲ್ಲಿಟ್ಟು' ಪಾಕಿಸ್ತಾನಕ್ಕೆ ಕೊಟ್ಟರೆ ಆ ದಿನ `ಭಾರತ ಸತ್ತು ನಾಶವಾದಂತೆ' ಎಂಬುದಾಗಿ ಪ್ರಧಾನ ಮಂತ್ರಿ ನೆಹರೂರವರು ರಾಜ್ಯ ಸಭೆಯಲ್ಲಿ ಚರ್ಚೆಗೆ ಉತ್ತರವೀಯುತ್ತಾ ತಿಳಿಸಿದರು.