ಚೆನ್ನೈ:ಬೆಂಗಳೂರು ಮಲ್ಲೇಶ್ವರದ ಬಿಜೆಪಿ ಕಚೇರಿ ಬಳಿ ಸಂಭವಿಸಿದ ಬಾಂಬ್ ಸ್ಫೋಟ ಪ್ರಕರಣದಲ್ಲಿ ಬಂಧಿಸಲಾಗಿರುವ ಮೂವರು ಆರೋಪಿಗಳು ನಿಷೇಧಿತ ಇಸ್ಲಾಮಿಕ್ ಸಂಘಟನೆ `ಅಲ್-ಉಮ್ಮಾ'ಗೆ ಸೇರಿದವರಾಗಿದ್ದು 1998ರ ಕೊಯಮತ್ತೂರು ಸರಣಿ ಸ್ಫೋಟ ಪ್ರಕರಣದಲ್ಲಿ ಜೈಲು ಶಿಕ್ಷೆ ಪೂರೈಸಿ ಬಿಡುಗಡೆಯಾದವರು ಎಂದು ತಮಿಳುನಾಡು ಪೊಲೀಸರು ತಿಳಿಸಿದ್ದಾರೆ.
ಕೊಯಮತ್ತೂರು ಸ್ಫೋಟ ಪ್ರಕರಣದಲ್ಲಿ `ಅಲ್-ಉಮ್ಮಾ' ಕೈವಾಡ ಪ್ರಮುಖವಾಗಿದ್ದು ಇದೇ ಸಂಘಟನೆ ಬೆಂಗಳೂರು ಸ್ಫೋಟಕ್ಕೂ ಸಂಚು ರೂಪಿಸಿತ್ತೆ ಎಂಬುದನ್ನು ಗಂಭೀರವಾಗಿ ತನಿಖೆ ಮಾಡಲಾಗುತ್ತಿದೆ.
`ಅಲ್- ಉಮ್ಮಾ' ಕಾರ್ಯಕರ್ತ ಕಿಚನ್ ಬುಹಾರಿ ಅವರನ್ನು ಮಂಗಳವಾರ ಪೊಲೀಸರು ಬಂಧಿಸಿದ್ದು ಇದನ್ನು ಪ್ರಶ್ನಿಸಿ ಆತನ ಪತ್ನಿ ಜಮೀಲಾ ಬಾನು ಮದುರೆನಲ್ಲಿರುವ ಮದ್ರಾಸ್ ಹೈಕೋರ್ಟ್ ಪೀಠದಲ್ಲಿ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದಾಳೆ.
ಮತ್ತೆ ಬಂಧನ ಇಲ್ಲ: ಕೊಯಮತ್ತೂರು ಸ್ಫೋಟ ಪ್ರಕರಣದಲ್ಲಿ 45ಕ್ಕೂ ಹೆಚ್ಚು ಜನರು ತಮ್ಮ ಶಿಕ್ಷೆ ಅವಧಿ ಪೂರೈಸಿ ಚೆನ್ನೈ ಅಕ್ಕ-ಪಕ್ಕ ವಾಸಿಸುತ್ತಿದ್ದು, ಇವರನ್ನು ವಿಚಾರಣೆಗೆ ಒಳಪಡಿಸಲಾಗಿದೆ.