ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಟ್ಟದ ಮೇಲೆ ಜಾತ್ರಾ ಸಂಭ್ರಮ

Last Updated 6 ಜನವರಿ 2014, 19:30 IST
ಅಕ್ಷರ ಗಾತ್ರ

ಚಿಕ್ಕಮಗಳೂರಿನ ಮುಳ್ಳಯ್ಯನಗಿರಿ ಹೊರತುಪಡಿಸಿದರೆ ರಾಜ್ಯದ ಎರಡನೇ ಅತಿ ಎತ್ತರದ ಗಿರಿ ಯಾವುದು ಎಂಬ ಕುತೂಹಲಕ್ಕೆ ಉತ್ತರ ಕಂಡುಕೊಳ್ಳಬೇಕಿದ್ದರೆ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಆಗುಂಬೆ ವಲಯದಲ್ಲಿರುವ ಕುಂದಾದ್ರಿ ಬೆಟ್ಟಕ್ಕೆ ಭೇಟಿ ನೀಡಬೇಕು. ಮುಳ್ಳಯ್ಯನಗಿರಿ ಸುಮಾರು 6,330 ಅಡಿಗಳಷ್ಟು ಎತ್ತರವಿದ್ದರೆ, ಕುಂದಾದ್ರಿ ಬೆಟ್ಟ ಸುಮಾರು 3,550 ಅಡಿಗಳಷ್ಟು ಎತ್ತರವಿದೆ. ಕುಂದಾದ್ರಿ ಗ್ರಾಮದ ಪ್ರವೇಶದ್ವಾರದಿಂದ ಬೆಟ್ಟದ ತುದಿಯವರೆಗೆ ಸುಮಾರು 4 ಕಿ.ಮೀ.ಗಳಷ್ಟು ಅಂತರವಿದೆ.

ಇಂಥ ವಿಶಿಷ್ಟ ಬೆಟ್ಟದ ಮೇಲಿರುವ ಕುಂದಾದ್ರಿ ಶ್ರೀ ಕ್ಷೇತ್ರದ ವಾರ್ಷಿಕ ಮಹಾಪೂಜಾ ಮಹೋತ್ಸವ ಮತ್ತು ಬೃಹತ್‌ ಜಾತ್ರೆ ಇದೇ 14ರಂದು ಬೆಳಿಗ್ಗೆ 8 ರಿಂದ ನಡೆಯಲಿದೆ. ಶತಮಾನಗಳ ಹಿಂದೆ ಜೈನ ಮುನಿ ಆಚಾರ್ಯ ಕುಂದ ಕುಂದ ಈ ಬೆಟ್ಟದ ಮೇಲೆ ತಂಗಿ ತಪಸ್ಸು ಮಾಡಿದ್ದರು. ಬೆಟ್ಟದ ತುತ್ತುದಿಯಲ್ಲಿರುವ ಈ ಕ್ಷೇತ್ರದ ವಾರ್ಷಿಕ ಜಾತ್ರೆ ಜೈನ ಸಮುದಾಯಕ್ಕೆ ಪ್ರಮುಖ ಉತ್ಸವ. ಹೊಂಬುಜ (ಹುಂಚ) ಅತಿಶಯ ಶ್ರೀಕ್ಷೇತ್ರ ಜೈನಮಠದ ಅಧೀನ ಕ್ಷೇತ್ರವಾಗಿರುವ ಕುಂದಾದ್ರಿ ಶ್ರೀಕ್ಷೇತ್ರದಲ್ಲಿ ಅಂದು ಬೆಳಿಗ್ಗೆ ಪಾರ್ಶ್ವನಾಥಸ್ವಾಮಿಗೆ ನವಕಳಸಾಭಿಷೇಕ, ವಿಶೇಷ ಪೂಜೆ, ಪದ್ಮಾವತಿ ದೇವಿ ಷೋಡಶೋಪಚಾರ ಪೂಜೆ ಮತ್ತು ಆಚಾರ್ಯ ಕುಂದ ಕುಂದರ ಪಾದುಕೆಗಳ ಪೂಜೆ ನಡೆಯಲಿದ್ದು, ಹೊಂಬುಜ ಜೈನಮಠದ ದೇವೇಂದ್ರಕೀರ್ತಿ ಭಟ್ಟಾರಕ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ.

ಬೆಟ್ಟದ ಬಗ್ಗೆ ಒಂದಿಷ್ಟು
ಕಿರಿದಾದ ಟಾರು ರಸ್ತೆಯಿದೆಯಾದರೂ ಸರ್ಕಾರಿ ಮತ್ತು ಖಾಸಗಿ ಬಸ್‌ಗಳಂತೂ ಏರಲು ಸಾಧ್ಯವೇ ಇಲ್ಲ. ಸುಮಾರು ಆಟೊರಿಕ್ಷಾಗಳು ಇವೆಯಾದರೂ ಅವುಗಳಲ್ಲಿ ಪ್ರಯಾಸದಲ್ಲೇ ಪ್ರಯಾಣಿಸಬೇಕು. ರಸ್ತೆಯುದ್ದಕ್ಕೂ ಎರಡೂ ಬದಿಗಳಲ್ಲಿರುವ ದಟ್ಟವಾದ ಕಾಡು ಪ್ರದೇಶದಲ್ಲಿ ದಟ್ಟ ಗಿಡಮೂಲಿಕೆಗಳು ಇವೆ. ಹುಲಿಗಳು ಸೇರಿದಂತೆ ಬೇರೆ ಬೇರೆ ಕಾಡುಪ್ರಾಣಿಗಳು ಈ ಕಾಡುಪ್ರದೇಶವನ್ನು ಆಶ್ರಯತಾಣವಾಗಿಸಿಕೊಂಡಿವೆ. ಇದು ವನ್ಯವಿಜ್ಞಾನಿಗಳ ಅಧ್ಯಯನ ತಾಣವೂ ಆಗಿದೆ. ಈ ಕಾರಣದಿಂದಲೇ ಈ ಕಾಡು ಪ್ರದೇಶವನ್ನು ಮೀಸಲು ಅರಣ್ಯವಾಗಿರಿಸಲಾಗಿದೆ. ಪ್ಲಾಸ್ಟಿಕ್‌ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.

ಇಲ್ಲಿನ ಸ್ಥಳೀಯರು ಹೇಳುವ ಪ್ರಕಾರ, ಬೆಟ್ಟದ ತುದಿಯಿಂದ ಸೂರ್ಯೋದಯ ಮತ್ತು ಸೂರ್ಯಾಸ್ತ ನೋಡಲೆಂದೇ ದೂರದೂರದ ಊರುಗಳಿಂದ ಜನರು ಬರುತ್ತಾರೆ. ಬಸದಿಯ ಬಳಿಯಿರುವ ಆಳವಾದ ಹೊಂಡದ ಬದಿಯಲ್ಲಿ ಕೂತು ಕಾಲ ಕಳೆಯುವ ಜನರು ಅಲ್ಲಿಂದ ಕಣ್ಣು ಹಾಯಿಸಿದಷ್ಟು ಕಾಣಸಿಗುವ ಕಾಡನ್ನು ಕಂಡು ಮೈಮೆರೆಯುತ್ತಾರೆ. ಬಿಸಿಲಿದ್ದರೂ ಅದರ ತಾಪ ತಾಗದೇ ಬೀಸುವ ತಂಗಾಳಿಯಲ್ಲೇ ಹೆಚ್ಚಿನ ಸಮಯ ಕಳೆಯುತ್ತಾರೆ. ಕೆಲ ಬಾರಿ ಮೊಬೈಲ್‌ ಫೋನ್‌ ನೆಟ್‌ವರ್ಕ್‌ ಕೂಡ ಸಿಗದೇ ಜಗತ್ತಿನ ಎಲ್ಲ ಸಂಪರ್ಕ ಕಳೆದುಕೊಂಡು ಕೆಲ ನಿಮಿಷಗಳಾದರೂ ನೆಮ್ಮದಿಯಾಗಿರಲು ಬಯಸುತ್ತಾರೆ.

ಕುಂದಾದ್ರಿ ಬೆಟ್ಟ, ಬೆಟ್ಟದ ಮೇಲಿರುವ ಜೈನ ಬಸದಿ, ಆಚಾರ್ಯ ಕುಂದ ಕುಂದ ಅವರಿಗೂ ಮತ್ತು ಜೈನ ಸಮುದಾಯಕ್ಕೂ ಸುಮಾರು ನೂರಾರು ವರ್ಷಗಳ ಗಾಢವಾದ ನಂಟು ಇದೆ. ಆಚಾರ್ಯ ಕುಂದ ಕುಂದ ಅವರು ಇಲ್ಲಿ ದೀರ್ಘ ಕಾಲದವರೆಗೆ ತಪಸ್ಸು ಮಾಡಿದ್ದರು. ಆಗ ದಟ್ಟವಾದ ಕಾಡು ಮತ್ತು ಪ್ರಾಣಿಪಕ್ಷಿಗಳಿದ್ದರೂ ಅದ್ಯಾವುದನ್ನೂ ಲೆಕ್ಕಿಸದೇ ತಪಸ್ಸು ಮಾಡುತ್ತ ವಿದ್ಯಾಪೀಠವೊಂದನ್ನು ಸ್ಥಾಪಿಸಿದ್ದರು. ಮಕ್ಕಳಿಗೆ ವಿದ್ಯೆಯನ್ನು ನೀಡುತ್ತಿದ್ದರು. ಈ ಕಾರಣದಿಂದಲೇ ಬಸದಿ ಬಳಿ ಪಾದುಕೆಯಿದೆ’ ಎಂದು ಜೈನ ಬಸದಿಯ ಶಾಂತಿನಾಥ ಪಂಡಿತರು ಹೇಳುತ್ತಾರೆ.

ಕುಂದಾದ್ರಿಯೆಂದರೆ ದುಂಡು ಮಲ್ಲಿಗೆಯೆಂದು ಅರ್ಥ. ಸರಳವಾಗಿ ಹೇಳುವುದಾದರೆ, ಇದು ದುಂಡುಮಲ್ಲಿಗೆ ಬೆಟ್ಟ. ಬಸದಿಯ ಎರಡೂ ಬದಿಗಳಲ್ಲಿ ಹೊಂಡಗಳಿದ್ದು, ನೀರು ಪರಿಶುದ್ಧವಾಗಿದೆ. ಅವುಗಳಲ್ಲಿ ಸಣ್ಣಪುಟ್ಟ ಮೀನುಗಳಿವೆ. ಜೈನ ಸಮುದಾಯದವರಿಗೆ ಇದು ಪ್ರಮುಖ ಕ್ಷೇತ್ರವಾಗಿದ್ದು, ಹೊಂಬುಜ (ಹುಂಚ) ಅತಿ ಶಯ ಕ್ಷೇತ್ರಕ್ಕೆ ಬರುವ ಭಕ್ತಾದಿಗಳು ಈ ಬೆಟ್ಟಕ್ಕೆ ತಪ್ಪದೇ ಬರುತ್ತಾರೆ.

ಕ್ಷೇತ್ರದಲ್ಲಿ ವಸತಿ ವ್ಯವಸ್ಥೆಯಿದ್ದು, ಇಲ್ಲಿ ಬರುತ್ತಾರೆ. ಅದರಲ್ಲೂ ಜನವರಿ 14ರ ಬೃಹತ್‌ ಜಾತ್ರೆಗೆ ಭಾರಿ ಸಂಖ್ಯೆಯಲ್ಲಿ ಜನರು ಸೇರುತ್ತಾರೆ. ಅಂದು ಭಾರಿ ಸಡಗರ–ಸಂಭ್ರಮ ಆವರಿಸಿರುತ್ತದೆ ಎಂದು ಸ್ಥಳೀಯರಾದ ಕೃಷ್ಣ ಮತ್ತು ವೆಂಕಟೇಶ್‌ ಹೇಳುತ್ತಾರೆ. ಹೊಂಬುಜ ಮಠದ ಸಂಪರ್ಕ ದೂರವಾಣಿ ಸಂಖ್ಯೆ: 08185–262722 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT