ಇಸ್ಲಾಮಾಬಾದ್ (ಐಎಎನ್ಎಸ್): ಪಾಕಿಸ್ತಾನದ ಮಾಜಿ ಅಧ್ಯಕ್ಷ ಮತ್ತು ಸೇನಾಡಳಿತಗಾರ ಪರ್ವೇಜ್ ಮುಷರಫ್ ಅವರಿಗೆ ಮಾಜಿ ಪ್ರಧಾನಿ ಬೆನಜೀರ್ ಭುಟ್ಟೊ ಅವರನ್ನು ಹತ್ಯೆ ಮಾಡಲು ತಾಲಿಬಾನ್ ಸಂಚು ರೂಪಿಸಿದ ಬಗ್ಗೆ ಸುಳಿವಿದ್ದರೂ,ಸಂಬಂಧಪಟ್ಟ ಭದ್ರತಾ ಆಡಳಿತಕ್ಕೆ ಮಾಹಿತಿ ರವಾನಿಸದೆ ತಪ್ಪು ಎಸಗಿರುವುದಾಗಿ 2007ರಲ್ಲಿ ನಡೆದ ಈ ಹತ್ಯೆಯ ಬಗ್ಗೆ ತನಿಖೆ ನಡೆಸುತ್ತಿರುವ ತಂಡವೊಂದು ಆರೋಪಿಸಿದೆ.
ಬೆನಜೀರ್ ಹತ್ಯೆಗೆ ತೆಹ್ರೀಕ್-ಇ-ತಾಲಿಬಾನ್ ಪಾಕಿಸ್ತಾನದ ಮುಖ್ಯಸ್ಥ ಬೈತುಲ್ಲಾ ಮೆಹ್ಸುದ್ ಸಂಚು ರೂಪಿಸಿದ ಸುಳಿವು ಮುಷರಫ್ಗೆ ತಿಳಿದಿದ್ದರೂ ಸಹ, ಅದನ್ನು ಬಹಿರಂಗಪಡಿಸದಂತೆ ಭದ್ರತಾ ಸಂಸ್ಥೆಗಳಿಗೆ ತಡೆಯೊಡ್ಡಿದ್ದರು ಎಂಬ ಸತ್ಯವನ್ನು ಜಂಟಿ ತನಿಖಾ ತಂಡ (ಜೆಐಟಿ) ಪತ್ತೆ ಹಚ್ಚಿರುವುದಾಗಿ ‘ಡಾನ್’ ಪತ್ರಿಕೆ ಗುರುವಾರ ಪ್ರಕಟಿಸಿದೆ.
ಈ ವಾರ, ರಾವಲ್ಪಿಂಡಿಯ ಭಯೋತ್ಪಾದನಾ ನಿಗ್ರಹ ನ್ಯಾಯಾಲಯದಲ್ಲಿ (ಎಟಿಸಿ) ಪೆಡರಲ್ ತನಿಖಾ ಸಂಸ್ಥೆ (ಎಫ್ಐಎ) ಸಲ್ಲಿಸಿದ ಮೊಕದ್ದಮೆಯ ಬಗ್ಗೆ ಜೆಐಟಿ ಮುಖ್ಯಸ್ಥ ಖಾಲಿದ್ ಖುರೇಷಿ ಅವರು ಆಂತರಿಕ ಭದ್ರತಾ ಸಚಿವಾಲಯಕ್ಕೆ ವಿವರಣೆ ನೀಡಿದ್ದಾರೆ. ಈ ಮೊಕ ್ದದಮೆಯಲ್ಲಿ ಮುಷರಫ್ ವಿರುದ್ಧ 12 ಆರೋಪಗಳನ್ನು ಹೊರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.