ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳೆ ಪರಿಹಾರಕ್ಕೆ ಆಗ್ರಹ: ಎಮ್ಮೆ ಚಳವಳಿ

Last Updated 9 ಅಕ್ಟೋಬರ್ 2012, 8:20 IST
ಅಕ್ಷರ ಗಾತ್ರ

ಶ್ರೀರಂಗಪಟ್ಟಣ: ತಮಿಳುನಾಡಿಗೆ ಹರಿಸುತ್ತಿರುವ ಕಾವೇರಿ ನೀರು ನಿಲ್ಲಿಸುವಂತೆ ಒತ್ತಾಯಿಸಿ, ಬೆಳೆ ಪರಿಹಾರಕ್ಕೆ ಆಗ್ರಹಿಸಿ ತಾಲ್ಲೂಕಿನ ವಿವಿಧ ಗ್ರಾಮಗಳ ಜನರು ಸೋಮವಾರ ವಿಭಿನ್ನ ರೀತಿಯ ಪ್ರತಿಭಟನೆ ನಡೆಸಿದರು.

ತಾಲ್ಲೂಕಿನ ಗಣಂಗೂರು ಗ್ರಾಮಸ್ಥರು ಬೆಂಗಳೂರು- ಮೈಸೂರು ಹೆದ್ದಾರಿ ತಡೆದು ಸುಮಾರು ಒಂದು ತಾಸು ಪ್ರತಿಭಟನೆ ನಡೆಸಿದರು. ಪಟ್ಟಣದವರೆಗೆ ಟ್ರ್ಯಾಕ್ಟರ್ ಹಾಗೂ ಗೂಡ್ಸ್ ಟೆಂಪೋಗಳ ಸಹಿತಿ ಪ್ರತಿಭಟನಾ ಮೆರವಣಿಗೆ ನಡೆಸಿದರು. ಕುವೆಂಪು ವೃತ್ತದಲ್ಲಿ ಮಾನವ ಸರಪಳಿ ರಚಿಸಿ ಆಕ್ರೋಶ ವ್ಯಕ್ತಪಡಿಸಿದರು. ಕಾವೇರಿ ನದಿ ಪ್ರಾಧಿಕಾರ, ತಮಿಳುನಾಡು ಹಾಗೂ ರಾಜ್ಯ ಸರ್ಕಾರಗಳ ವಿರುದ್ಧ ಘೋಷಣೆ ಕೂಗಿದರು. ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಬಿ.ಎಸ್.ಚಂದ್ರಶೇಖರ್, ಎನ್.ಮಂಜುನಾಥ್, ಸತೀಶ್, ಶಿವಶಂಕರ್, ಜಿ.ಎನ್.ಕೃಷ್ಣ, ಎನ್.ನಂಜೇಗೌಡ, ಮಹೇಂದ್ರ, ಟ್ರ್ಯಾಕ್ಟರ್ ಬೋರೇಗೌಡ, ಕುಮಾರ, ಜಿ.ಸಿ.ಬಾಬು, ವಿಜೇಂದ್ರ ಭಾಗವಹಿಸಿದ್ದರು.

ಎಮ್ಮೆ ಚಳವಳಿ: ತಾಲ್ಲೂಕಿನ ಬಾಬುರಾಯನಕೊಪ್ಪಲು ಹಾಗೂ ಮಿಣಜಿ ಬೋರನಕೊಪ್ಪಲು ಗ್ರಾಮಸ್ಥರು ತಮಿಳುನಾಡಿಗೆ ನೀರು ಹರಿಸುವುದನ್ನು ನಿಲ್ಲಿಸುವಂತೆ ಆಗ್ರಹಿಸಿ ಸೋಮವಾರ ಪಟ್ಟಣದಲ್ಲಿ ಎಮ್ಮೆ ಚಳವಳಿ ನಡೆಸಿದರು. ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಅವರ ಭಾವಚಿತ್ರಗಳನ್ನು ಎಮ್ಮೆಗಳಿಗೆ ಕಟ್ಟಿ ಬಾಬುರಾಯನಕೊಪ್ಪಲು ಗ್ರಾಮದಿಂದ ಪಟ್ಟಣದ ವರೆಗೆ ಮೆರವಣಿಗೆ ನಡೆಸಿದರು. ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಬಿ.ಎಸ್.ಸಂದೇಶ್, ಮಾಜಿ ಪ್ರಧಾನ ಜಯರಾಂ, ಎಸ್.ದೇವರಾಜು, ಸುನಿಲ್, ಬಿ.ಜೆ.ಲೋಕೇಶ್, ಬಿ.ಎಸ್.ರಮೇಶ್, ಪ್ರಭಾಕರ್, ಬಿ.ಎಂ.ಸುಬ್ರಹ್ಮಣ್ಯ, ವಾಸು ಪ್ರತಿಭಟನೆಯಲ್ಲಿದ್ದರು.

ದೊಡ್ಡಪಾಳ್ಯ: ತಾಲ್ಲೂಕಿನ ದೊಡ್ಡಪಾಳ್ಯ ಗ್ರಾಮಸ್ಥರು ತಮಿಳುನಾಡಿಗೆ ಹರಿಸುತ್ತಿರುವ ನೀರು ನಿಲ್ಲಿಸುವಂತೆ ಆಗ್ರಹಿಸಿ, ಬೆಳೆಗೆ ಸೂಕ್ತ ಪರಿಹಾರ ನೀಡುವಂತೆ ಒತ್ತಾಯಿಸಿ ಸೋಮವಾರ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು. ಕುವೆಂಪು ವೃತ್ತದಲ್ಲಿ ಮಾನವ ಸರಪಳಿ ರಚಿಸಿ ಆಕ್ರೋಶ ವ್ಯಕ್ತಪಡಿಸಿದರು. ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ನಿರ್ಮಿತಾ ಲೋಕೇಶ್, ವಿಎಸ್‌ಎಸ್‌ಎನ್ ಅಧ್ಯಕ್ಷ ನಾರಾಯಣ, ಮಂಜೇಶ್‌ಗೌಡ, ಚಂದ್ರಶೇಖರ್, ಮಾಯಿಗೌಡ, ಜಗದೀಶ್, ಶಿವಕುಮಾರ್, ಡಿ.ಎಂ.ರವಿ, ನಾಗರಾಜು ಪ್ರತಿಭಟನೆಯ ನೇತೃತ್ವ ವಹಿಸಿದ್ದರು.

ಹೆಬ್ಬಾಡಿಹುಂಡಿ: ತಾಲ್ಲೂಕಿನ ಹೆಬ್ಬಾಡಿಹುಂಡಿ ಹಾಗೂ ಹೆಬ್ಬಾಡಿ ಗ್ರಾಮಗಳ ಜನರು ಸೋಮವಾರ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು, ಬೆಂಗಳೂರು- ಮೈಸೂರು ಹೆದ್ದಾರಿ ವೃತ್ತದಲ್ಲಿ ತಮಟೆ ಚಳವಳಿ ನಡೆಸಿದರು. ಸುಮಾರು ಅರ್ಧತಾಸು ಹೆದ್ದಾರಿ ತಡೆದು ಆಕ್ರೋಶ ವ್ಯಕ್ತಪಡಿಸಿದರು. ಸಿದ್ದೇಗೌಡ, ಶಿವಣ್ಣ, ಕಾಳೇಗೌಡ, ಸಂಪತ್‌ಕುಮಾರ್, ಲಿಂಗರಾಜೇಗೌಡ, ಮರೀಗೌಡ, ಸಿದ್ದರಾಮು, ಮಹೇಶ್, ಚಂದ್ರಶೇಖರ್ ನೇತೃತ್ವ ವಹಿಸಿದ್ದರು.

ಕಿರಂಗೂರು: ತಾಲ್ಲೂಕಿನ ಕಿರಂಗೂರು ಗ್ರಾಮದ ರೈತರು ಬೆಳೆ ನಷ್ಟ ಭರಿಸುವಂತೆ ರಾಜ್ಯ ಸರ್ಕಾರವನ್ನು ಆಗ್ರಹಿಸಿ ಪಟ್ಟಣದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು. ಕೆ.ಎನ್.ಕುಮಾರಸ್ವಾಮಿ, ಗ್ರಾಮ ಪಂಚಾಯಿತಿ ಸದಸ್ಯ ಮುರಳಿ, ಮಹದೇವು, ನಿಂಗೇಗೌಡ, ಮರೀಗೌಡ ಪ್ರತಿಭಟನೆಯ ನೇತೃತ್ವ ವಹಿಸಿದ್ದರು.

 ಗ್ರಾಮ ಪಂಚಾಯಿತಿ ಸದಸ್ಯರ ಒಕ್ಕೂಟ: ಗ್ರಾಮ ಪಂಚಾಯತಿ ಸದಸ್ಯರ ತಾಲ್ಲೂಕು ಒಕ್ಕೂಟದ ಅಧ್ಯಕ್ಷ ಹಾಗೂ ಸದಸ್ಯರು ಸೋಮವಾರ ಪಟ್ಟಣದ ಕುವೆಂಪು ವೃತ್ತದ ಬಳಿ ಪ್ರತಿಭಟನಾ ಧರಣಿ ನಡೆಸಿದರು. ಒಕ್ಕೂಟದ ಅಧ್ಯಕ್ಷ ಟಿ.ಎಂ.ದೇವೇಗೌಡ, ಕಾರ್ಯದರ್ಶಿ ಸಿ.ಮಂಜುನಾಥ್, ಮಲ್ಲೇಗೌಡ, ವಿಜಯಕುಮಾರ್, ಸಬ್ಬನಕುಪ್ಪೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಂಜುಳಾ ಆನಂದ್, ಸದಸ್ಯೆ ಕಮಲಾಕ್ಷಿ, ಸತೀಶ್ ಭಾಗವಹಿಸಿದ್ದರು.

ಹೆದ್ದಾರಿಯಲ್ಲಿ ಯೋಗ: ತಾಲ್ಲೂಕಿನ ಕೆ.ಶೆಟ್ಟಹಳ್ಳಿ ಗ್ರಾಮದ ವಿವೇಕಾನಂದ ಕಿಶೋರ ಕೇಂದ್ರದ ಯೋಗಪಟುಗಳು ತಮಿಳುನಾಡಿಗೆ ಕಾವೇರಿ ನೀರು ಹರಿಸುವುದನ್ನು ವಿರೋಧಿಸಿ ಸೋಮವಾರ ಪಟ್ಟಣದ ಬೆಂಗಳೂರು- ಮೈಸೂರು ಹೆದ್ದಾರಿ ವೃತ್ತದಲ್ಲಿ ಯೋಗ ಪ್ರದರ್ಶಿಸಿದರು. ಯೋಗ ಶಿಕ್ಷಕ ಅಪ್ಪಾಜಿ ಅವರ ನೇತೃತ್ವದಲ್ಲಿ ಯೋಗ ಚಳವಳಿ ನಡೆಯಿತು.

ಕಲಾಪ ಬಹಿಷ್ಕಾರ: ತಮಿಳುನಾಡಿಗೆ ಹರಿಸುತ್ತಿರುವ ನೀರು ನಿಲ್ಲಿಸುವಂತೆ ಒತ್ತಾಯಿಸಿ ವಕೀಲರು ಪಟ್ಟಣದ ನ್ಯಾಯಾಲಯ ಕಲಾಪ ಬಹಿಷ್ಕರಿಸಿ ಅಸಹಕಾರ ವ್ಯಕ್ತಪಡಿಸಿದರು. ಸಂಜೆ ವರೆಗೆ ಯಾವೊಬ್ಬ ವಕೀಲರು ನ್ಯಾಯಾಲಯ ಕಲಾಪದಲ್ಲಿ ಭಾಗವಹಿಸಲಿಲ್ಲ ಎಂದು ವಕೀಲರ ಸಂಘದ ಅಧ್ಯಕ್ಷ ಮೂರ್ತಿ ತಿಳಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT