ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳೆ ಹಾನಿ ಪರಿಹಾರಕ್ಕೆ ಶಾಸಕರ ಆಗ್ರಹ

Last Updated 12 ಜನವರಿ 2012, 5:35 IST
ಅಕ್ಷರ ಗಾತ್ರ

ವಿಜಾಪುರ: `ಜಿಲ್ಲೆಯಲ್ಲಿ ಶೇ.90ರಷ್ಟು ಬೆಳೆ ಹಾನಿಯಾಗಿದ್ದು, ತಕ್ಷಣವೇ ರೈತರಿಗೆ ಎಕರೆಗೆ ಕನಿಷ್ಠ 5 ಸಾವಿರ ರೂಪಾಯಿ ಪರಿಹಾರ ನೀಡಬೇಕು~ ಎಂದು ಬಬಲೇಶ್ವರ ಶಾಸಕ ಎಂ.ಬಿ. ಪಾಟೀಲ ಆಗ್ರಹಿಸಿದರು.

`ಬೆಳೆ ಹಾನಿಯ ಸಮಗ್ರ ಸಮೀಕ್ಷೆ ನಡೆಸಬೇಕು. ರಾಜ್ಯ ಸರ್ಕಾರ ತಕ್ಷಣವೇ ರೈತರಿಗೆ ಮಧ್ಯಂತರ ಪರಿಹಾರ ನೀಡಬೇಕು. ಕೇಂದ್ರ ಸರ್ಕಾರದಿಂದ ನೆರವು ಬಂದ ನಂತರ ಪೂರ್ಣ ಪ್ರಮಾಣದ ಪರಿಹಾರ ನೀಡಬೇಕು~ ಎಂದು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಒತ್ತಾಯಿಸಿದರು.

`ಬರ ಪರಿಹಾರ ಕಾಮಗಾರಿಗಳಿಗೆ ರಾಜ್ಯ ಸರ್ಕಾರ ಈ ವರೆಗೆ ಬಿಡಿಗಾಸನ್ನೂ ನೀಡಿಲ್ಲ. ಅರಕೇರಿ, ನಿಡೋಣಿ, ಬಾಬಾನಗರದಲ್ಲಿ ಗೋಶಾಲೆ ಆರಂಭಿಸಲು ಅಲ್ಲಿಯವರು ಜಮೀನು-ನೀರು ನೀಡಲು ಮುಂದೆ ಬಂದಿದ್ದರೂ ಜಿಲ್ಲಾ ಆಡಳಿತ ಈ ವರೆಗೆ ಗೋಶಾಲೆ ಆರಂಭಿಸಿಲ್ಲ. ಮೇವಿನ ಸಂಗ್ರಹವನ್ನೂ ಮಾಡಿಟ್ಟುಕೊಂಡಿಲ್ಲ~ ಎಂದು ದೂರಿದರು.

`ಟ್ಯಾಂಕರ್ ಮೂಲಕ ನೀರು ಪೂರೈಸಲು ಒಂದು ಟ್ರಿಪ್‌ಗೆ ಕೇವಲ ರೂ. 300 ದರ ನಿಗದಿ ಮಾಡಿದ್ದಾರೆ. ಹೀಗಾಗಿ  ಟ್ಯಾಂಕರ್‌ನವರು ನೀರು ಪೂರೈಕೆಗೆ ಮುಂದೆ ಬರುತ್ತಿಲ್ಲ. ಈ ದರವನ್ನು ಕನಿಷ್ಠ ರೂ. 700ಕ್ಕೆ ಹೆಚ್ಚಿಸಿ, ಸಮಸ್ಯಾತ್ಮಕ ಗ್ರಾಮಗಳಿಗೆ ಟ್ಯಾಂಕರ್ ಮೂಲಕ ನೀರು ಪೂರೈಸಬೇಕು~ ಎಂದು ಒತ್ತಾಯಿಸಿದರು.

`ಜಾನುವಾರುಗಳಿಗೆ ಮೇವಿನ ತೀವ್ರ ಸಮಸ್ಯೆ ಎದುರಾಗಿದೆ. ಕಣಕಿ ಮತ್ತಿತರ ಮೇವು ಇಲ್ಲ. ಹೀಗಾಗಿ ಸರ್ಕಾರ ಕಬ್ಬನ್ನು ಖರೀದಿಸಿ ಪೂರೈಸಬೇಕು. ಕಾಲುವೆಗಳಿಗೆ ಪ್ರತಿ ವರ್ಷ ಫೆಬ್ರವರಿ-15ರ ವರೆಗೆ ಮಾತ್ರ ನೀರು ಪೂರೈಸಲಾಗುತ್ತಿದೆ. ಈ ಅವಧಿಯನ್ನು ಏಪ್ರೀಲ್ ಅಂತ್ಯದವರೆಗೆ ವಿಸ್ತರಿಸಬೇಕು. ಅಗತ್ಯಬಿದ್ದರೆ ಮಹಾರಾಷ್ಟ್ರದಿಂದ ನೀರು ಖರೀದಿಸಬೇಕು~ ಎಂದರು.

`ಶಾಸಕರ ನೇತೃತ್ವದ ಕಾರ್ಯಪಡೆಯಲ್ಲಿ ಅನುಮೋದನೆ ನೀಡಿದ ಯಾವ ಕಾಮಗಾರಿಗೂ ಒಂದು ರೂಪಾಯಿ ಹಣ ಬಿಡಗುಡೆ ಮಾಡಿಲ್ಲ. ಒಂದೇ ಒಂದು ಕೊಳವೆ ಬಾವಿ ಕೊರೆದಿಲ್ಲ. ಹಿಂದಿನ ವರ್ಷದ ಯೋಜನೆಗಳಿಗೆ ಹಣ ನೀಡಿ ಇದೇ ವರ್ಷಕ್ಕೆ ನೀಡಿದ್ದೇವೆ ಎಂದು ಅಧಿಕಾರಿಗಳು-ಸರ್ಕಾರ ನಮ್ಮನ್ನು ತಪ್ಪು ದಾರಿಗೆ ಎಳೆಯುತ್ತಿದ್ದಾರೆ~ ಎಂದು ಆಪಾದಿಸಿದರು.

`ಬರ ನಿರ್ವಹಣೆಯಲ್ಲಿ ಜಿಲ್ಲಾಡಳಿತ ಸಂಪೂರ್ಣ ವಿಫಲವಾಗಿದೆ. ಜಿಲ್ಲಾ ಉಸ್ತುವಾರಿ ಸಚಿವರು  15 ದಿನಕ್ಕೊಮ್ಮೆ ಪರಿಶೀಲನೆ ನಡೆಸಬೇಕಿತ್ತು. ಕಾರ್ಯ ನಿರ್ವಹಣೆಯಲ್ಲಿ ಅವರೂ ವಿಫಲರಾಗಿದ್ದಾರೆ~ ಎಂದು ದೂರಿದರು.

ಜಿ.ಪಂ. ಸದಸ್ಯರಾದ ಟಿ.ಕೆ. ಹಂಗರಗಿ, ಉಮೇಶ ಕೊಳಕೂರ, ಬಿ.ಬಿ. ಪಾಟೀಲ, ಜಿ.ಪಂ. ಮಾಜಿ ಅಧ್ಯಕ್ಷರಾದ ಅರ್ಜುನ ರಾಠೋಡ, ಸೋಮನಾಥ ಬಾಗಲಕೋಟೆ ಇತರರು ಪತ್ರಿಕಾಗೋಷ್ಠಿಯಲ್ಲಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT