ಚಾಮರಾಜನಗರ: ನ್ಯಾ.ತಲವಾರ್ ನೇತೃತ್ವದ ಸಮಿತಿಯ ಶಿಫಾರಸು ಅನುಷ್ಠಾನಗೊಳಿಸುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ನಗರದ ಅಂಚೆ ಕಚೇರಿ ಮುಂಭಾಗ ಮಂಗಳವಾರ ಅಖಿಲ ಭಾರತ ಅಂಚೆ ಇಲಾಖೇತರ ನೌಕರರ ಸಂಘದ ಜಿಲ್ಲಾ ಘಟಕದಿಂದ ಅನಿರ್ದಿಷ್ಟಾವಧಿ ಧರಣಿ ನಡೆಯಿತು.
ಕರ್ತವ್ಯಕ್ಕೆ ಗೈರುಹಾಜರಾದ ನೌಕರರು, ಇಲಾಖೆಯಲ್ಲಿ 5 ಗಂಟೆಗೂ ಹೆಚ್ಚು ಕಾಲದವರೆಗೆ ಸೇವೆ ಸಲ್ಲಿಸುತ್ತಿರುವ ನೌಕರರ ಸೇವೆಯನ್ನು ಕಾಯಂಗೊಳಿಸಬೇಕು. ಇಲಾಖೆಯ ನೌಕರರಿಗೆ ನೀಡುವ ಪಿಎಲ್ಬಿ ಸಿಲ್ಲಿಂಗ್ ಬೋನಸ್ ಅನ್ನು ನಮಗೂ ನೀಡಬೇಕು ಎಂದು ಆಗ್ರಹಿಸಿದರು.
ಹೊಸ ನೇಮಕಾತಿಯಲ್ಲಿ ಸಾಕಷ್ಟು ಲೋಪವಿದೆ. ಇದನ್ನು ಸರಿಪಡಿಸಬೇಕು. ರಾಷ್ಟ್ರೀಯ ಸ್ವಾಸ್ಥ್ಯ ಭೀಮಾ ಯೋಜನೆಯನ್ನು ಜಾರಿಗೊಳಿಸಬೇಕು. ಇಲಾಖೆಯಲ್ಲಿರುವ ದಿನಗೂಲಿ ನೌಕರರ ವೇತನ ಪರಿಷ್ಕರಣೆ ಮಾಡಬೇಕು ಎಂದು ಆಗ್ರಹಿಸಿದರು.
ಗ್ರಾಮೀಣ ಅಂಚೆ ನೌಕರರಾದ ಕೋಡಿಮೋಳೆ ಗೋವಿಂದಶೆಟ್ಟಿ, ಕುಮಾರ್, ರಾಧಮ್ಮ, ಪುಷ್ಪಾ, ಸಿದ್ದರಾಜು, ಗುರುಲಿಂಗಪ್ಪ, ಮಹದೇವಯ್ಯ ಧರಣಿಯಲ್ಲಿ ಪಾಲ್ಗೊಂಡಿದ್ದರು.