ಬೆಂಗಳೂರು (ಪಿಟಿಐ): ಈ ಬಾರಿಯ ಬೇಸಿಗೆ ಸಮಯದ ವಿದ್ಯುತ್ ಬೇಡಿಕೆಯನ್ನು ಸಂಪೂರ್ಣವಾಗಿ ಪೂರೈಸಲು ತಾನು ಸಜ್ಜಾಗಿರುವುದಾಗಿ ಕರ್ನಾಟಕ ಸರ್ಕಾರ ಸೋಮವಾರ ಘೋಷಿಸಿದೆ. ಈ ವರ್ಷದ ಮಾರ್ಚ್- ಏಪ್ರಿಲ್ ವೇಳೆಗೆ ರಾಜ್ಯದ ವಿದ್ಯುತ್ ಬೇಡಿಕೆ 170 ದಶಲಕ್ಷ ಯೂನಿಟ್ ತಲುಪುವ ನಿರೀಕ್ಷೆಯಿದೆ.
ಹೆಚ್ಚುತ್ತಿರುವ ವಿದ್ಯುತ್ ಬೇಡಿಕೆಯನ್ನು ಈಡೇರಿಸಲು ರಾಜ್ಯವು ಛತ್ತೀಸ್ಗಡದಿಂದ 1300 ಮೆ.ವಾ. ವಿದ್ಯುತ್ ಖರೀದಿಸಲಿದೆ ಎಂದು ಇಂಧನ, ಆಹಾರ ಮತ್ತು ನಾಗರಿಕ ಪೂರೈಕೆ ಸಚಿವೆ ಶೋಭಾ ಕರಂದ್ಲಾಜೆ ಇಲ್ಲಿ ಸುದ್ದಿಗಾರರ ಜೊತೆ ಮಾತನಾಡುತ್ತಾ ಹೇಳಿದರು.
’ಈ ವರ್ಷದ ಬೇಸಿಗೆಯಲ್ಲಿ ವಿದ್ಯುತ್ ಕಡಿತ ಇರುವುದಿಲ್ಲ’ ಎಂದು ಅವರು ಭರವಸೆ ನೀಡಿದರು. ಫೆಬ್ರುವರಿ 12 ರ ವೇಳೆಗೆ ವಿದ್ಯುತ್ ಬೇಡಿಕೆಯು 164 ಮಿಲಿಯನ್ ಯೂನಿಟ್ ತಲುಪಿತ್ತು. ಅದನ್ನು ವಿದ್ಯುತ್ ಕಂಪೆನಿಗಳು ನಿಭಾಯಿಸಿವೆ ಎಂದು ಕರಂದ್ಲಾಜೆ ಹೇಳಿದರು.
ಸೆಪ್ಟೆಂಬರ್ ಅಂತ್ಯದ ವೇಳೆಗೆ ಬಳ್ಳಾರಿ ವಿದ್ಯುತ್ ಘಟಕವು ಉತ್ಪಾದನೆ ಆರಂಭಿಸಿದಾಗ ವಿದ್ಯುತ್ ಜಾಲಕ್ಕೆ (ಗ್ರಿಡ್) 500 ಮೆ.ವ್ಯಾ ವಿದ್ಯುತ್ ಪೂರೈಕೆಯಾಗುವ ನಿರೀಕ್ಷೆಯಿದೆ. ವರ್ಷಾಂತ್ಯದ ವೇಳೆಗೆ ಉಡುಪಿಯಲ್ಲಿರುವ 500 ಮೆ.ವ್ಯಾ ಸಾಮರ್ಥ್ಯದ ಉಷ್ಣ ವಿದ್ಯುತ್ ಘಟಕವೂ ಕಾರ್ಯಾರಂಭ ಮಾಡುವ ಸಾಧ್ಯತೆ ಇದೆ ಎಂದು ಕರಂದ್ಲಾಜೆ ಹೇಳಿದರು.