ಚಿಕ್ಕಮಗಳೂರು: ವಿಧಾನಸಭಾಧ್ಯಕ್ಷ ಕೆ.ಜಿ.ಬೋಪಯ್ಯ ಅವರನ್ನು ಗಡಿಪಾರು ಮಾಡಬೇಕೆಂದು ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಗುರುವಾರ ಜಿಲ್ಲಾಧಿಕಾರಿ ಕಚೇರಿ ಬಳಿ ಧರಣಿ ನಡೆಸಿದರು.
ರಾಜ್ಯದ ಅಭಿವೃದ್ಧಿ ದೃಷ್ಟಿಯಿಂದ ಕೆಲಸ ಮಾಡಬೇಕಾದ ಹಾಗೂ ರಾಜ್ಯದ ಸಂಪತ್ತನ್ನು ಉಳಿಸಲು, ನಾಡ ರಕ್ಷಣೆ ಮಾಡಬೇಕಾದ ವಿಧಾನಸಭೆ ಅಧ್ಯಕ್ಷರು ಕೊಡಗು ಜಿಲ್ಲೆಯನ್ನು ಪ್ರತ್ಯೇಕ ರಾಜ್ಯವನ್ನಾಗಿ ಮಾಡುವಂತೆ ಹೇಳಿಕೆ ನೀಡುವ ಮೂಲಕ ರಾಜ್ಯ ವಿಭಜನೆ ಕುರಿತು ಮಾತನಾಡಿರುವುದನ್ನು ಪ್ರತಿಭಟನಾ ನಿರತರು ಖಂಡಿಸಿದರು.
ಪಶ್ಚಿಮ ಘಟ್ಟವನ್ನು ವಿಶ್ವಪರಂಪರೆ ಪಟ್ಟಿಗೆ ಸೇರಿಸಲು ನಿರ್ಧಾರ ಕೈಗೊಳ್ಳಲಾಗಿದೆ.
ಇದನ್ನೆ ನೆಪ ಮಾಡಿಕೊಂಡು ಕೊಡಗನ್ನು ಪ್ರತ್ಯೇಕ ರಾಜ್ಯ ಮಾಡಿದರೆ ಯುನೆಸ್ಕೊ ಕಾಡು ರಕ್ಷಿಸುವುದಕ್ಕಿಂತ ಕೊಡಗನ್ನು ಪ್ರತ್ಯೇಕ ರಾಜ್ಯವನ್ನಾಗಿಸಿದರೆ ಅದಕ್ಕಿಂತ ಉತ್ತಮವಾಗಿ ಕಾಡು ರಕ್ಷಿಸಲಾಗುವುದು ಎಂದು ಹೇಳಿರುವುದು ಸರಿಯಲ್ಲ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಹೊನಕೇರಿ ಅವರಿಗೆ ಮನವಿ ಸಲ್ಲಿಸಿದರು.
ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಅಧ್ಯಕ್ಷ ತೇಗೂರು ಜಗದೀಶ್ ಸಹ ಮಾತನಾಡಿದರು.
ಜಿಲ್ಲಾ ಕಾರ್ಯದರ್ಶಿ ಪಂಚಾಕ್ಷರಿ, ಮುಖಂಡರಾದ ರೇಣುಕಾ ಪರಮೇಶ್, ವಸಂತಕುಮಾರ್, ಸುರೇಶ್, ಉಮೇಶ್, ರಾಜ್ಕುಮಾರ್ ಅಭಿಮಾನಿಗಳ ಸಂಘದ ಮುಖಂಡರಾದ ಕುಮಾರ್, ಎಲ್.ವಿ.ಕೃಷ್ಣಮೂರ್ತಿ ಮತ್ತಿತರರು ಧರಣಿಯಲ್ಲಿ ಭಾಗವಹಿಸಿದ್ದರು.