ಆಳಂದ (ಗುಲ್ಬರ್ಗ): ತಾಲ್ಲೂಕಿನ ಕಡೆಗಂಚಿ ಭಾರತೀಯ ಸ್ಟೇಟ್ ಬ್ಯಾಂಕ್ ಶಾಖೆಯಲ್ಲಿ ಶುಕ್ರವಾರ ರಾತ್ರಿ ನಡೆದ 1.50 ಕೋಟಿ ರೂಪಾಯಿ ಮೌಲ್ಯದ ನಗನಾಣ್ಯ ಕಳವು ಪ್ರಕರಣದ ತನಿಖೆಯನ್ನು ಪೊಲೀಸರು ಚುರುಕುಗೊಳಿಸಿದ್ದಾರೆ.
ಕಳ್ಳರ ಪತ್ತೆಗಾಗಿ ಪೊಲೀಸರ ಎರಡು ತಂಡಗಳನ್ನು ರಚಿಸಲಾಗಿದೆ. ಅಂತರರಾಜ್ಯ ಕಳ್ಳರು ಈ ಕೃತ್ಯ ಎಸಗಿರುವ ಶಂಕೆ ಇರುವುದರಿಂದ ನರೋಣಾ ಪಿಎಸ್ಐ ವಿನಾಯಕ ನಾಯಕ ನೇತೃತ್ವದ ತಂಡವು ಭಾನುವಾರ ನೆರೆಯ ಮಹಾರಾಷ್ಟ್ರದ ಸೊಲ್ಲಾಪುರ, ಉಮರ್ಗಾ ಪಟ್ಟಣಗಳಿಗೆ ತೆರಳಿತು. ಸರ್ಕಲ್ ಇನ್ಸ್ಪೆಕ್ಟರ್ ಜಿ.ಎಸ್.ಉಡುಗಿ ನೇತೃತ್ವದ ಇನ್ನೊಂದು ತಂಡವು ರಾಜ್ಯದ ಗುಲ್ಬರ್ಗ, ಯಾದಗಿರಿ ಮತ್ತಿತರ ಪಟ್ಟಣಗಳಿಗೆ ಭೇಟಿ ನೀಡಿ ಮಾಹಿತಿ ಕಲೆ ಹಾಕುತ್ತಿದೆ ಎಂದು ಡಿವೈಎಸ್ಪಿ ಎಸ್.ಬಿ. ಸಾಂಬಾ `ಪ್ರಜಾವಾಣಿ~ಗೆ ತಿಳಿಸಿದರು.