ಬೆಂಗಳೂರು: ಕರ್ನಾಟಕ ರಾಜ್ಯ ಬ್ಯಾಡ್ಮಿಂಟನ್ ಸಂಸ್ಥೆ (ಕೆಬಿಎ) ಆಶ್ರಯದಲ್ಲಿ ನಡೆಯಲಿರುವ 76ನೇ ರಾಷ್ಟ್ರೀಯ ಸೀನಿಯರ್ ಹಾಗೂ 67ನೇ ಅಂತರ ರಾಜ್ಯ ಬ್ಯಾಡ್ಮಿಂಟನ್ ಚಾಂಪಿಯನ್ಷಿಪ್ ನಗರದಲ್ಲಿ ನಡೆಯಲಿದ್ದು ರಾಷ್ಟ್ರದ ಹೆಸರಾಂತ ಆಟಗಾರರು ಭಾಗವಹಿಸಲಿದ್ದಾರೆ.
ಕರ್ನಾಟಕ ಬ್ಯಾಡ್ಮಿಂಟನ್ ಸಂಸ್ಥೆ ರಹೇಜಾ ಒಳಾಂಗಣ ಕ್ರೀಡಾಂಗಣದಲ್ಲಿ ರಾಷ್ಟ್ರೀಯ ಚಾಂಪಿಯನ್ಷಿಪ್ನ ಪಂದ್ಯಗಳು ಜನವರಿ 17 ರಿಂದ 25ರ ವರೆಗೆ ನಡೆಯಲಿದೆ. ಪುರುಷರ ಮತ್ತು ಮಹಿಳೆಯರ ಸಿಂಗಲ್ಸ್ ಹಾಗೂ ಡಬಲ್ಸ್ ಮತ್ತು ಮಿಶ್ರ ಡಬಲ್ಸ್ ವಿಭಾಗದಲ್ಲಿ ಪಂದ್ಯಗಳು ನಡೆಯಲಿವೆ. ಅರ್ಹತಾ ಸುತ್ತಿನ ಪಂದ್ಯಗಳು ಮಂಗಳವಾರ ಮತ್ತು ಬುಧವಾರ ನಡೆಯಲಿವೆ. ಚಾಂಪಿಯನ್ಷಿಪ್ನ ಪ್ರಧಾನ ಸುತ್ತಿನ ಪಂದ್ಯಗಳು ಶನಿವಾರದಿಂದ ನಡೆಯಲಿವೆ. ಅಂತರರಾಜ್ಯ ಚಾಂಪಿಯನ್ಷಿಪ್ ಸ್ಪರ್ಧೆಗಳು ಜನವರಿ 19 ಮತ್ತು 20 ರಂದು ನಡೆಯುತ್ತದೆ.
ಈ ವಿಷಯವನ್ನು ಟೂರ್ನಿಯ ನಿರ್ದೇಶಕ ಯು. ವಿಮಲ್ ಕುಮಾರ್ ಹಾಗೂ ಕೆಬಿಎ ಕಾರ್ಯದರ್ಶಿ ಎನ್.ಸಿ. ಸುಧೀರ್ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಪುರುಷರ ವಿಭಾಗದಲ್ಲಿ ಅರವಿಂದ್ ಭಟ್, ಅನೂಪ್ ಶ್ರೀಧರ್, ಚೇತನ್ ಆನಂದ್, ಆನಂದ್ ಪವಾರ್ ಹಾಗೂ ಅಜಯ್ ಜಯರಾಮನ್ ಮತ್ತು ಮಹಿಳಾ ವಿಭಾಗದಲ್ಲಿ ಪಿ.ವಿ. ಸಿಂಧು, ಸಯಾಲಿ ಗೋಖಲೆ, ಪಿ.ಸಿ. ತುಳಸಿ, ಅರುಂಧತಿ ಪಂತ್ವಾನೆ, ನೇಹಾ ಪಂಡಿತ್ ಹಾಗೂ ಅದಿತಿ ಮುಟತ್ಕರ್ ಪ್ರಶಸ್ತಿ ಜಯಿಸುವ ನೆಚ್ಚಿನ ಸ್ಪರ್ಧಿಗಳೆನ್ನಿಸಿದ್ದಾರೆ.
`ಈ ಚಾಂಪಿಯನ್ಷಿಪ್ ಒಟ್ಟು ಐದು ಲಕ್ಷ ರೂಪಾಯಿ ಬಹುಮಾನ ಒಳಗೊಂಡಿದೆ. ಜನವರಿ 24 ಹಾಗೂ 25ರಂದು ನಡೆಯುವ ಸೆಮಿಫೈನಲ್ ಹಾಗೂ ಫೈನಲ್ ಪಂದ್ಯಗಳನ್ನು ದೂರದರ್ಶನದಲ್ಲಿ ನೇರ ಪ್ರಸಾರ ಮಾಡಲಾಗುತ್ತದೆ~ ಎಂದು ವಿಮಲ್ ವಿವರಿಸಿದರು.
ಅಂತರರಾಜ್ಯ ಚಾಂಪಿಯಷಿಪ್ಗೆ ಅರ್ಹತೆ ಪಡೆದ ತಂಡಗಳು: ಪುರುಷರ ತಂಡ: ಕರ್ನಾಟಕ, ದೆಹಲಿ, ಉತ್ತರ ಪ್ರದೇಶ, ಮಹಾರಾಷ್ಟ್ರ, ಏರ್ ಇಂಡಿಯಾ, ಅಸ್ಸಾಂ, ಏರ್ಪೋರ್ಟ್ಸ್ ಅಥಾರಿಟಿ ಆಫ್ ಇಂಡಿಯಾ ಮತ್ತು ಪೆಟ್ರೋಲಿಯಂ ಸ್ಪೋರ್ಟ್ಸ್ ಪ್ರಮೋಷನ್ ಬೋರ್ಡ್ (ಪಿಎಸ್ಪಿಬಿ). ಮಹಿಳಾ ತಂಡ: ಕೇರಳ, ದೆಹಲಿ, ಪಶ್ವಿಮ ಬಂಗಾಳ, ಮಹಾರಾಷ್ಟ್ರ, ಏರ್ ಇಂಡಿಯಾ, ಅಸ್ಸಾಂ, ಹಾಗೂ ಪಿಎಸ್ಪಿಬಿ.