ಮಂಗಳೂರು: ಉಡುಪಿಯ ವೆಂಕಟೇಶ್ ಕಾಮತ್ ಮೂರು ಗೇಮ್ಗಳ ಹೋರಾಟದಲ್ಲಿ ಬೆಂಗಳೂರಿನ ಫಲ್ಗುಣ್ ಅವರನ್ನು 21-16, 17-21, 21- 16ರಿಂದ ಸೋಲಿಸಿ, ಮಂಗಳಾ ಸ್ಪೋರ್ಟ್ಸ್ ಆಶ್ರಯದ ಮಂಗಳೂರು ಸೂಪರ್ ಸಿರೀಸ್ ರಾಜ್ಯ ಮಟ್ಟದ ಬ್ಯಾಡ್ಮಿಂಟನ್ ಟೂರ್ನಿಯ ಪುರುಷರ ಓಪನ್ ವಿಭಾಗದ ಸಿಂಗಲ್ಸ್ ಪ್ರಶಸ್ತಿ ಗೆದ್ದುಕೊಂಡರು.
ನಗರದ ಶ್ರೀನಿವಾಸ ಮಲ್ಯ ಒಳಾಂಗಣ ಕ್ರೀಡಾಂಗಣದಲ್ಲಿ ಭಾನುವಾರ ರಾತ್ರಿ ಮುಕ್ತಾಯಗೊಂಡ ಈ ಟೂರ್ನಿಯ ಪುರುಷರ ಡಬಲ್ಸ್ ಪ್ರಶಸ್ತಿ ರಾಘವನ್ ಮತ್ತು ಸುನೀಲ್ ಗ್ಲಾಡ್ಸನ್ ಪಾಲಾಯಿತು. ಈ ಜೋಡಿ ಫೈನಲ್ನಲ್ಲಿ ಬೆಂಗಳೂರಿನ ಫಲ್ಗುಣ್- ಅಮಿತ್ ಕುಮಾರ್ ಅವರನ್ನು 17-21, 21-16, 21-19 ರಿಂದ ಸೋಲಿಸಿತು.
19 ವರ್ಷದೊಳಗಿನವರ ಬಾಲಕರ ಸಿಂಗಲ್ಸ್ ಫೈನಲ್ನಲ್ಲಿ ನಿಶ್ಮಿತ್ ಚಂದ್ 21-12, 21-19 ರಿಂದ ಅಶಿತ್ ಸೂರ್ಯ ವಿರುದ್ಧ ಜಯಗಳಿಸಿದರು. 13 ವರ್ಷದೊಳಗಿನ ಸಿಂಗಲ್ಸ್ ಫೈನಲ್ನಲ್ಲಿ ಮಂಗಳೂರಿನ ಅಭಯ್ ಪೈ 21-13, 21-10 ರಲ್ಲಿ ನೇರ ಆಟಗಳಿಂದ ವರ್ಷಿತ್ ರಾಜ್ ಸವಾಲನ್ನು ಬದಿಗೊತ್ತಿ ಪ್ರಶಸ್ತಿಯನ್ನು ಮಡಿಲಿಗೆ ಹಾಕಿಕೊಂಡರು.