ಹೈದರಾಬಾದ್: ಆಂಧ್ರ ಪ್ರದೇಶದ ಮಾಜಿ ಮುಖ್ಯಮಂತ್ರಿ ದಿ. ವೈ.ಎಸ್.ರಾಜಶೇಖರ ರೆಡ್ಡಿ (ವೈಎಸ್ಆರ್) ನೆರವಿನ ಬ್ರಹ್ಮಣಿ ಸ್ಟೀಲ್ಸ್ ನಕಲಿ ಕಂಪೆನಿ ಎನ್ನುವುದಕ್ಕೆ ಪುರಾವೆ ಇದೆ ಎಂದು ಸಿಬಿಐ ಹೇಳಿದೆ.
ಅಕ್ರಮ ಗಣಿ ಪ್ರಕರಣದಲ್ಲಿ ಬಂಧನದಲ್ಲಿರುವ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಅವರ ನ್ಯಾಯಾಂಗ ಬಂಧನದ ಅವಧಿಯನ್ನು ಇನ್ನೂ 9 ದಿನಗಳ ಕಾಲ ವಿಸ್ತರಿಸುವಂತೆ ವಿಶೇಷ ನ್ಯಾಯಾಲಯವನ್ನು ಕೋರಿದ ವೇಳೆ ಅದು ಈ ಅಂಶವನ್ನು ಬಹಿರಂಗಪಡಿಸಿದೆ.
ವಾಸ್ತವದಲ್ಲಿ ಬ್ರಹ್ಮಣಿ ಕಂಪೆನಿ ಅಸ್ತಿತ್ವದಲ್ಲಿ ಇಲ್ಲ. ಆದರೆ ಗಣಿಗಾರಿಕೆ ಹಾಗೂ ಅದಿರು ರಫ್ತಿಗೆ ಅನುಕೂಲವಾಗಲೆಂದು ವೈಎಸ್ಆರ್ ಹಾಗೂ ಗಾಲಿ ಜನಾರ್ದನ ರೆಡ್ಡಿ ಅವರು ಬ್ರಹ್ಮಣಿ ಸೇರಿದಂತೆ ಹಲವಾರು ಬೇನಾಮಿ ಕಂಪೆನಿಗಳನ್ನು ಹುಟ್ಟುಹಾಕಿದ್ದರು ಎಂದು ಸಿಬಿಐ ಹೇಳಿದೆ.
2007ರಲ್ಲಿ ಜನಾರ್ದನ ರೆಡ್ಡಿ ಅವರಿಗೆ ವೈಎಸ್ಆರ್ ಸರ್ಕಾರ ಆಂಧ್ರ ಪ್ರದೇಶದ ಕಡಪಾ ಜಿಲ್ಲೆಯ ಜಮ್ಮಲಮಡುಗುವಿನಲ್ಲಿ ಬ್ರಹ್ಮಣಿ ಸ್ಟೀಲ್ಸ್ ಸ್ಥಾಪಿಸಲು 10,760 ಎಕರೆ ಭೂಮಿಯನ್ನು ಮಂಜೂರು ಮಾಡಿತ್ತು. ಅಷ್ಟೇ ಅಲ್ಲ ವಿಮಾನ ನಿಲ್ದಾಣವೊಂದನ್ನು ಅಭಿವೃದ್ಧಿಪಡಿಸಲು ಮತ್ತೆ 4000 ಎಕರೆ ಭೂಮಿಯನ್ನು ನೀಡಿತ್ತು ಎನ್ನುವ ಅಂಶವನ್ನೂ ತನಿಖಾ ಸಂಸ್ಥೆಯು ಅನಾವರಣಗೊಳಿಸಿದೆ.
ನೈಸರ್ಗಿಕ ಸಂಪನ್ಮೂಲವನ್ನು ಕೊಳ್ಳೆ ಹೊಡೆದ ಒಎಂಸಿ ಒಂದು ದೊಡ್ಡ ಹಗರಣ ಎಂದಿರುವ ಸಿಬಿಐ ವಕೀಲ ಬಿ.ರವೀಂದ್ರನಾಥ್, ಆಂಧ್ರದ ಕೆಲವು ಹಿರಿಯ ಅಧಿಕಾರಿಗಳು ಅಕ್ರಮ ಗಣಿಗಾರಿಕೆಗೆ ಬೆಂಬಲ ನೀಡಿದ್ದಾರೆ ಎಂದು ಕೋರ್ಟ್ಗೆ ತಿಳಿಸಿದರು.
ಅಕ್ರಮ ಗಣಿಗಾರಿಕೆಯಿಂದ ಎಷ್ಟು ಪ್ರಮಾಣದ ಅದಿರನ್ನು ತೆಗೆಯಲಾಗಿದೆ? ಯಾರಿಗೆ ಮಾರಲಾಗಿದೆ? ಅದಿರು ಸಾಗಣೆಗೆ ಪರವಾನಗಿ ನೀಡಿದ ಅಧಿಕಾರಿಗಳು ಯಾರು?- ಇತ್ಯಾದಿ ಅಂಶಗಳನ್ನು ನಾವು ತಿಳಿದುಕೊಳ್ಳಬೇಕಾಗಿದೆ ಎಂದು ಬಿ.ರವೀಂದ್ರನಾಥ್ ಹಾಗೂ ಪಬ್ಲಿಕ್ ಪ್ರಾಸಿಕ್ಯೂಟರ್ ಟಿ.ವಿ.ರಮಣ ಹೇಳಿದರು.