ಧಾರವಾಡ: ಭಕ್ತಿಯಿಂದ ಇರೋದು ಅಂದರೆ ಭಯದಿಂದ ಇರುವುದು ಎಂದರ್ಥ. ಭಕ್ತಿಯಲ್ಲಿ ಭಯ ಹಾಗೂ ಮೌಢ್ಯತೆಗೆ ಸ್ಥಾನ ಇರಬಾರದು. ಅಂದಾಗ ಮಾತ್ರ ಅದು ನಿಜವಾದ ಭಕ್ತಿ ಎಂದೆನಿಸಿಕೊಳ್ಳಲು ಸಾಧ್ಯ ಎಂದು ಎ.ಪಿ.ಪಾಟೀಲ ಗುರೂಜಿ ಹೇಳಿದರು.
ಇಲ್ಲಿನ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಕುಮಾರೇಶ್ವರ ಗೃಹ ನಿರ್ಮಾಣ ಅಭಿವೃದ್ಧಿ ಸಹಕಾರ ಸಂಘದ ಎಸ್.ಎಂ.ಹೊಳೆಯಣ್ಣವರ ದತ್ತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಸಹಕಾರಿ ಕ್ಷೇತ್ರದಲ್ಲಿ ಸಹಕಾರ ಇದ್ದಾಗ ಮಾತ್ರ ಏನನ್ನಾದರೂ ಒಂದು ಸಂಸ್ಥೆಯಿಂದ, ವ್ಯಕ್ತಿಯಿಂದ ನಿರೀಕ್ಷಿಸಲು ಸಾಧ್ಯ, ಸಹಕಾರ ಕ್ಷೇತ್ರದಲ್ಲಿ ಪ್ರೀತಿ ಇದ್ದರೆ ಮಾತ್ರ ಏನೆಲ್ಲಾ ದೊರಕಲು ಸಾಧ್ಯ ಎಂದರು.
ಯಾರಲ್ಲಿ ಶಾಂತಿ, ಸಮಾಧಾನ ಇರುತ್ತದೋ ಅಂಥವರಲ್ಲಿ ಎಂಥ ಕಠಿಣ ಪರಿಸ್ಥಿತಿಯನ್ನು ಎದುರಿಸುವ ಶಕ್ತಿ ಬರುತ್ತದೆ. ಇದು ಸಹಕಾರಿ ಕ್ಷೇತ್ರದಲ್ಲಿ, ಸಾರ್ವಜನಿಕ ರಂಗದಲ್ಲಿರುವವರಿಗೆ ಬಹುವಾಗಿ ಮುಖ್ಯವಾಗಿದ್ದು, ಸಹಕಾರಿ ಕ್ಷೇತ್ರದಲ್ಲಿ ನಾನು ಎಂಬ ಭಾವನೆಗೆ ಅವಕಾಶ ಇರುವುದಿಲ್ಲ.
ಅಹ್ಮಂ, ಹೊಗಳಿಕೆ, ತೆಗಳಿಕೆ ಈ ಮೂರನ್ನೂ ದಾಟಿದವ ಮಾತ್ರ ಶ್ರೇಷ್ಠ ಮನುಷ್ಯ ಎಂದು ಗುರುತಿಸಿಕೊಳ್ಳಲು ಸಾಧ್ಯ. ಅವುಗಳ ದಾಸನಾಗಿದ್ದರೆ, ಅಂಥವನು ಜೀವನದಲ್ಲಿ ಪ್ರತಿ ಹೆಜ್ಜೆಯಲ್ಲಿ ಎಡರು ತೊಡರುಗಳನ್ನು ಎದುರಿಸಬೇಕಾಗುತ್ತದೆ ಎಂದು ಹೇಳಿದರು.
`ದಾನ ನೀಡುವವರಲ್ಲಿ ಕಿಂಚತ್ತು ಸ್ವಾರ್ಥ ಇದ್ದರೆ ಅದು ದಾನವಾಗುವುದಿಲ್ಲ. ಮಾನವ ಉಗಮದಿಂದಲೂ ದಾನದ ಪದ್ಧತಿ ಮೂಡಿಬಂದಿದೆ. ದಾನಗಳು ಸಿಗುವದು ಅಪರೂಪ. ಸಿಕ್ಕರೂ ಸ್ವಾರ್ಥದಿಂದಲೇ ದಾನಿಗಳು ಇರುವುದನ್ನು ಕಾಣುತ್ತೇವೆ. ದಾನ ಎಂದರೆ ತ್ಯಾಗವಿದ್ದಂತೆ, ದಾನ ನೀಡುವಲ್ಲಿ ಆನಂದ ಸಿಗುತ್ತದೆ. ದಾನದಲ್ಲಿ ತ್ಯಾಗದ ಮನೋಭಾವನೆ ಸಹಕಾರದ ಗುಣ ಹೊಂದಿರುತ್ತದೆ~ ಎಂದು ಪ್ರೊ. ವಿ.ವಿ.ಹೆಬ್ಬಳ್ಳಿ ಹೇಳಿದರು.
ಕುಮಾರೇಶ್ವರ ಗೃಹ ನಿರ್ಮಾಣ ಅಭಿವೃದ್ಧಿ ಸಂಘದ ಉಪಾಧ್ಯಕ್ಷ ಎಸ್.ಎಸ್.ದೇಸಾಯಿ ಮಾತನಾಡಿದರು. ಜಿ.ಜಿ.ದೊಡವಾಡ ಅಧ್ಯಕ್ಷತೆ ವಹಿಸಿದ್ದರು. ಕೃಷ್ಣ ಜೋಶಿ, ಪ್ರೊ. ಬಿ.ವಿ.ಗುಂಜೆಟ್ಟಿ ಎಸ್.ಎಂ.ಹೊಳೆಯಣ್ಣವರ ಕುರಿತು ಮಾತನಾಡಿದರು. ಎಸ್. ಎಂ. ಹೊಳೆಯಣ್ಣವರ ವೇದಿಕೆಯಲ್ಲಿದದ್ದರು. ಸುಮಾ ಮಳಿಮಠ ಹಾಗೂ ವೈಶಾಲಿ ಹೊಸಮನಿ ಪ್ರಾರ್ಥಿಸಿದರು. ಶಂಕರ ಹಲಗತ್ತಿ ಸ್ವಾಗತಿಸಿದರು. ಮೋಹನ ನಾಗಮ್ಮನವರ ವಂದಿಸಿದರು. ಗುರು ಹಿರೇಮಠ ನಿರೂಪಿಸಿದರು. ಉಪಸ್ಥಿತರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.