ರಾಜ್ಯದ ಗ್ರಾಮೀಣ ಪ್ರದೇಶದಲ್ಲಿ ದಲಿತರಿಗೆ ಬಹಿಷ್ಕಾರದ ಹಾಕುವ ಘಟನೆಗಳು ಮರುಕಳಿಸುತ್ತಿವೆ. ಕೊಪ್ಪಳ ಜಿಲ್ಲೆ ಯಲಬುರ್ಗಾ ತಾಲೂಕಿನ ಭಟಪ್ಪನಹಳ್ಳಿಯಲ್ಲಿ ಈಗ ದಲಿತರಿಗೆ ಬಹಿಷ್ಕಾರ ಹಾಕಲಾಗಿದೆ.
ಅಂಗನವಾಡಿ ಕೇಂದ್ರದಲ್ಲಿ ದಲಿತ ಮಕ್ಕಳನ್ನು ಹೊರಗೆ ಕೂರಿಸಿ ತಿಂಡಿ ಕೊಡುತ್ತಿದ್ದುದನ್ನು ವಿರೋಧಿಸಿದ್ದಕ್ಕೆ ಊರಿನ ಸವರ್ಣೀಯರು ಅಂಗನವಾಡಿಯನ್ನು ಬಂದ್ ಮಾಡಿಸಿದ್ದಾರೆ. ಹಾಗೇ ದಲಿತರು ಹೋಟೆಲಿಗೆ ಬರುವುದು ಬೇಡ ಎಂದು ಅಲ್ಲಿನ ಹೋಟೆಲನ್ನೂ ಬಂದ್ ಮಾಡಿಸಿದ್ದಾರೆ.
ಊರಿನ ಮೂಲಭೂತ ಸೌಕರ್ಯಗಳು ದಲಿತರಿಗೆ ಸಿಗದಂತೆ ಮಾಡಲು ಊರಿನ ಸವರ್ಣೀಯರೆಲ್ಲ ಒಗ್ಗಟ್ಟಾಗಿದ್ದಾರೆ. ನೂರೈವತ್ತು ಮನೆಗಳಿರುವ ಈ ಊರಿನಲ್ಲಿ 30 ದಲಿತರ ಮನೆಗಳಿವೆ. ಬಹಿಷ್ಕಾರ ಹಾಕಿ ಒಂದು ವಾರವಾಯಿತು.
ಉಸಿರುಗಟ್ಟಿದ ವಾತಾವರಣದಲ್ಲಿ ಬದುಕುತ್ತಿರುವ ದಲಿತರ ನೆರವಿಗೆ ಕೊಪ್ಪಳ ಜಿಲ್ಲಾಡಳಿತ ಬರಬೇಕಿದೆ. ಈ ಬೆಳವಣಿಗೆಯನ್ನು ಪ್ರಜ್ಞಾವಂತರು ಖಂಡಿಸಬೇಕು ಮತ್ತು ಬಹಿಷ್ಕಾರಕ್ಕೆ ಒಳಗಾಗಿರುವ ದಲಿತರಿಗೆ ನೈತಿಕ ಬೆಂಬಲ ನೀಡಬೇಕು.