ಭದ್ರಾವತಿ: ಅಲ್ಲಿ ಪುರೋಹಿತರ ಅಡಂಬರವಿರಲಿಲ್ಲ, ಮಂಗಳವಾದ್ಯದ ದನಿ ಇರಲಿಲ್ಲ, ಆದರೆ, ಅಂಧರ ಬಾಳಿಗೆ ಬೆಳಕು ನೀಡುವ ಸಾಹಸಕ್ಕೆ ಕೈ ಹಾಕಿದ್ದ ಜನರ ದಂಡು ಅಲ್ಲಿ ನೆರೆದಿತ್ತು.
ಇಲ್ಲಿನ ಬಸವೇಶ್ವರ ಸಭಾಭವನದಲ್ಲಿ ಬುಧವಾರ ಅಂಧರ ಬಾಳಿಗೆ ಬೆಳಕು ನೀಡುವ ಕೆಲಸವನ್ನು ಬಸವೇಶ್ವರ ಧರ್ಮಸಂಸ್ಥೆ ಹಾಗೂ ಸಿದ್ಧಾರ್ಥ ಅಂಧರ ಕೇಂದ್ರ ಸಂಯುಕ್ತವಾಗಿ ಆಯೋಜಿಸಿತ್ತು.
ಅಂಧರಾದ ನಾಗರಾಜ್ಯಶೋದಾ ಮತ್ತು ಶ್ರೀಧರ್ಶೀಲಾ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಗಳಿಗೆಯನ್ನು ಅಚ್ಚುಕಟ್ಟಾಗಿ ನಡೆಸಿದ ಸಂತೃಪ್ತಿ ಆಯೋಜಕರಲ್ಲಿ ಮನೆ ಮಾಡಿತ್ತು.
ಮದುವೆಗಷ್ಟೇ ಸೀಮಿತಾಗದ ಈ ಶುಭ ಸಮಾರಂಭ ಅಂಧ ಮಕ್ಕಳಲ್ಲಿ ಅಡಗಿರುವ ಪ್ರತಿಭೆಯನ್ನು ಗುರುತಿಸಿ ಅವರನ್ನು ಸನ್ಮಾನಿಸುವ ಕಾರ್ಯಕ್ಕೂ ಮುಂದಾಗಿದ್ದು, ನೆರೆದಿದ್ದ ಜನರ ಮನಕೆ ಒಂದಿಷ್ಟು ಮಾನವೀಯ ಮೌಲ್ಯಗಳನ್ನು ಸಾರಿತು.
ಶಾಸಕ ಬಿ.ಕೆ. ಸಂಗಮೇಶ್ವರ, ಜಿ.ಪಂ ಅಧ್ಯಕ್ಷೆ ಶುಭಾ ಕೃಷ್ಣಮೂರ್ತಿ, ಅಂಧರ ಕೇಂದ್ರದ ಕಾರ್ಯದರ್ಶಿ ಎಂ. ಗುರುಮೂರ್ತಿ ವೇದಿಕೆಯಲ್ಲಿ ಉಪಸ್ಥಿತರಿದ್ದು, ನೂತನ ದಂಪತಿಗಳಿಗೆ, ಪ್ರತಿಭಾನ್ವಿತರಿಗೆ ಶುಭ ಹಾರೈಸಿದರು.
ಬಸವೇಶ್ವರ ಧರ್ಮಸಂಸ್ಥೆ ಅಧ್ಯಕ್ಷ ಶಿವಕುಮಾರ್, ಸಿದ್ಧಾರ್ಥ ಅಂಧರ ಕೇಂದ್ರದ ಅಧ್ಯಕ್ಷ ಶಿವಬಸಪ್ಪ, ಶಶಿಕಲಾ ಶಿವಕುಮಾರ್, ಯಶೋದಾ ವೀರಭದ್ರಪ್ಪ, ಶಾರದಾ ಅವರು ಈ ಅಚ್ಚುಕಟ್ಟಾದ ಸಮಾರಂಭಕ್ಕೆ ವೇದಿಕೆ ಕಲ್ಪಿಸಿದ್ದರು.