ಹೆಬ್ರಿ: ಇಲ್ಲಿನ ಅಮೃತ ಭಾರತಿ ವಿದ್ಯಾಲಯದ ಆವರಣದಲ್ಲಿ ಇದೇ 17 ರಂದು ನಡೆಯಲಿರುವ ಬಾಬಾ ರಾಮ್ದೇವ್ಜಿ ಅವರ ಗ್ರಾಮೀಣ ಜನಸಭಾ ಕಾರ್ಯಕ್ರಮಕ್ಕೆ ಭರದ ಸಿದ್ಧತೆಗಳು ನಡೆಯುತ್ತಿದ್ದು ವಿದ್ಯಾಲಯದ ಮೈದಾನವನ್ನು ಸಮತಟ್ಟುಗೊಳಿಸುವ ಕಾಮಗಾರಿ ನಡೆಯುತ್ತಿದೆ. ಗ್ರಾಮೀಣ ಪ್ರದೇಶದ ಹತ್ತು ಸಾವಿರಕ್ಕೂ ಮಿಕ್ಕಿ ಜನರು ಸೇರುವ ನಿರೀಕ್ಷೆ ಇದೆ ಎಂದು ಪತಂಜಲಿ ಯೋಗ ಸಮಿತಿಯ ಗ್ರಾಮೀಣ ಜಿಲ್ಲಾ ಪ್ರಭಾರಿ ರಾಜೇಂದ್ರ ಚಕ್ಕೆರಾ ತಿಳಿಸಿದರು.
ಅವರು ಹೆಬ್ರಿ ರಾಮ ಮಂಟಪದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ತಾಲ್ಲೂಕಿನಾದ್ಯಂತ 300ಕ್ಕೂ ಹೆಚ್ಚು ಬ್ಯಾನರ್, ಕರಪತ್ರಗಳನ್ನು ಅಳವಡಿಸಲಾಗಿದೆ ಎಂದರು.
ಬಾಬಾ ರಾಮ್ದೇವ್ಜಿ ಇದೇ 17 ರಂದು 1 ಗಂಟೆಯಿಮದ 3 ಗಂಟೆ ತನಕ ಯೋಗ ಧರ್ಮ, ಸ್ವಧರ್ಮ ಮತ್ತು ದೇಶ ಧರ್ಮದ ಕುರಿತು ಕಾರ್ಯಕ್ರಮ ನಡೆಸಲಿದ್ದಾರೆ ಎಂದರು.
ಹೆಬ್ರಿ ಯೋಜನೆ ವ್ಯಾಪ್ತಿಗೆ :ಪತಂಜಲಿ ಗ್ರಾಮಾಭಿವೃದ್ಧಿ ಮತ್ತು ಸ್ವಾಭಿಮಾನ ಗ್ರಾಮೋತ್ಥಾನ ಯೋಜನೆಯ ವ್ಯಾಪ್ತಿಗೆ ಹೆಬ್ರಿಯನ್ನು ಸೇರಿಸುವ ಪ್ರಯತ್ನವು ಗ್ರಾಮೀಣ ಜನಸಭಾ ಕಾರ್ಯಕ್ರಮದ ಸ್ವಾಗತ ಸಮಿತಿಯ ವಿಶೇಷ ಮುತುವರ್ಜಿಯಿಂದ ನಡೆಯುತ್ತಿದೆ. ರಾಜ್ಯ ಪ್ರಭಾರಿಗಳು ಮತ್ತು ಜಿಲ್ಲಾ ನಾಯಕರಿಂದ ಆಶಾದಾಯಕ ಭರವಸೆ ದೊರೆತಿದೆ ಎಂದರು.
ಇದರಿಂದ ಹೆಬ್ರಿಯನ್ನು ಪಾನಮುಕ್ತವಾಗಿ,ಶಿಕ್ಷಣ,ಸಾವಯವ ಕೃಷಿ,ಗೊಬ್ಬರ್ ಗ್ಯಾಸ್ ಅಳವಡಿಕೆ ಸೇರಿದಂತೆ ವಿವಿಧ ರೀತಿಯಲ್ಲಿ ಹೆಬ್ರಿಯನ್ನು ಆದರ್ಶ ಗ್ರಾಮವಾಗಿ ರೂಪುಗೊಳಿಸಬಹುದು ಎಂದರು.
ಹೆಬ್ರಿ ಗ್ರಾಮೀಣ ಜನಸಭಾ ಕುರಿತು ಕಾರ್ಕಳ ತಾಲ್ಲೂಕು ಪ್ರಭಾರಿ ಹೆಬ್ರಿ ಗುರುದಾಸ್ ಶೆಣೈ ಮಾಹಿತಿ ನೀಡಿದರು.ಕಾರ್ಕಳ ತಾಲ್ಲೂಕು ಕೋಶಾಧಿಕಾರಿ ಡಾ.ರವಿಪ್ರಸಾದ ಹೆಗ್ಡೆ, ಪ್ರಧಾನ ಕಾರ್ಯದರ್ಶಿ ನಿತ್ಯಾನಂದ ಪೈ, ಸ್ವಾಗತ ಸಮಿತಿ ಅಧ್ಯಕ್ಷ ಚಾರ ವಾದಿರಾಜ ಶೆಟ್ಟಿ, ಸ್ವಾಗತ ಸಮಿತಿಯ ಆನಂದ ಹೆಗ್ಡೆ, ಗಣೇಶ್ ಕುಮಾರ್, ಸುಧಾಕರ ಹೆಗ್ಡೆ ಇದ್ದರು.