ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾಗ್ಯಲಕ್ಷ್ಮೀ ಯೋಜನೆ: ಬಾಕಿ ಉಳಿದ 5,815 ಬಾಂಡ್ ವಿತರಣೆಗೆ ಒತ್ತಾಯ

Last Updated 21 ಜನವರಿ 2012, 10:40 IST
ಅಕ್ಷರ ಗಾತ್ರ

ರಾಯಚೂರು: ರಾಜ್ಯ ಸರ್ಕಾರವು 2006-007ರಲ್ಲಿ ಜಾರಿಗೆ ತಂದ ಭಾಗ್ಯಲಕ್ಷ್ಮಿ ಯೋಜನೆಯಡಿ ಜಿಲ್ಲೆಯಲ್ಲಿ ಸಮರ್ಪಕ ರೀತಿ ಬಾಂಡ್ ವಿತರಣೆ ಆಗಿಲ್ಲ. 5,816 ಬಾಂಡ್ ಬಾಕಿ ಇದ್ದು ಕೂಡಲೇ ಬಿಡುಗೆ ಮಾಡಬೇಕು ಎಂಬ ಪ್ರಮುಖ ಬೇಡಿಕೆ ಸೇರಿದಂತೆ ನಾಲ್ಕು ಬೇಡಿಕೆ ಈಡೇರಿಸಲು ಆಗ್ರಹಿಸ ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ಪದಾಧಿಕಾರಿಗಳು ಮತ್ತು ಸದಸ್ಯರು ಶುಕ್ರವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.

ಇಲ್ಲಿನ ಸಾರ್ವಜನಿಕ ಉದ್ಯಾನವನದಿಂದ ಜಿಲ್ಲಾಡಳಿತ ಕಚೇರಿವರೆಗೆ ಪ್ರತಿಭಟನಾ ರ‌್ಯಾಲಿ ನಡೆಸಿದರು. ನಂತರ ಜಿಲ್ಲಾಡಳಿತ ಕಚೇರಿ ಎದುರು ಧರಣಿ ನಡೆಸಿದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ ರೋಹಿಣಿ ಹಿರೇಮಠ ಅವರಿಗೆ ಮನವಿ ಸಲ್ಲಿಸಿದರು.

2006ರಿಂದ 2011ರವರೆಗೆ ಬಾಕಿ ಇರುವ 5,816 ಬಾಂಡ್‌ಗಳನ್ನು ಕೂಡಲೇ ಬಿಡುಗಡೆ ಮಾಡಬೇಕು, 2011ರಿಂದ ತಾಲ್ಲೂಕಿಗೆ ವರ್ಷಕ್ಕೆ 1,612 ಫಲಾನುಭವಿಗಳಿಗೆ ಮಾತ್ರ ಆಯ್ಕೆ ಮಾಡಬೇಕು ಎಂಬ ಗುರಿಯನ್ನು ಕೈ ಬಿಡಬೇಕು, ಒಂದೇ ಹೆಸರಿನಲ್ಲಿ ಡಬಲ್ ಮುದ್ರಣಗೊಂಡ ಬಾಂಡ್‌ಗಳನ್ನು ಮತ್ತು ಮರಣ ಹೊಂದಿದ ಫಲಾನುಭವಿಗಳ ಹೆಸರಿನಲ್ಲಿರುವ ಬಾಂಡ್‌ಗಳನ್ನು ಬರದೇ ಇರುವವರ ಹೆಸರಿಗೆ ಮುದ್ರಿಸಿ ನೀಡಬೇಕು, ಬಿಪಿಎಲ್ ಪಡಿತರ ಚೀಟಿ ಮತ್ತು ಆದಾಯ ಪ್ರಮಾಣ ಪತ್ರ ಕಡ್ಡಾಯಗೊಳಿಸಿರುವುದನ್ನು ಕೈ ಬಿಡಬೇಕು, ತಾತ್ಕಾಲಿಕ ಬಿಪಿಎಲ್ ಪಡಿತರ ಚೀಟಿ ಇದ್ದವರಿಗೂ ಸೌಲಭ್ಯ ಕೊಡಬೇಕು ಎಂದು ಸಂಘಟನೆಯ ರಾಜ್ಯ ಉಪಾಧ್ಯಕ್ಷೆ ಕೆ ನೀಲಾ, ರಾಜ್ಯ ಕಾರ್ಯದರ್ಶಿ ಕೆ.ಎಸ್ ಲಕ್ಷ್ಮೀ ಅವರು ಬೇಡಿಕೆಗಳ ಪತ್ರ ಸಲ್ಲಿಸುವ ಮೂಲಕ ಆಗ್ರಹಿಸಿದರು.

ಹೆಣ್ಣು ಮಗುವಿನ ಜನನ ಉತ್ತೇಜಿಸಲು ಮ್ತು ಹೆಣ್ಣು ಮಗುವಿನ ತಂದೆ ತಾಯಿ ಪೋಷಕರ ಆರ್ಥಿಕ ಹೊರೆಯನ್ನು ನೀಗಿಸುವಲ್ಲಿ ಹೆಣ್ಣು ಮಕ್ಕಳ ರಕ್ಷಣೆಗಾಗಿ, ಲಿಂಗಾನುಪಾತ ಸಮಾನತೆಗಾಗಿ, ಹೆಣ್ಣು ಮಗುವಿನ ವಿರುದ್ಧ ಸಮಾಜದಲ್ಲಿರುವ ಧೋರಣೆಯನ್ನು ಬದಲಿಸುವುದು, ಹೆಣ್ಣಿನ ಸ್ಥಾನಮಾನವನ್ನು ಸಮಾಜ ಮತ್ತು ಕುಟುಂಬದಲ್ಲಿ ಉತ್ತಮಗೊಳಿಸುವುದು, ಬಾಲ್ಯ ವಿವಾಹ, ಬಾಲಕಾರ್ಮಿಕ ಪದ್ಧತಿ ಮುಂತಾದವುಗಳನ್ನು ತಡೆಗಟ್ಟುವ ಉದ್ದೇಶದೊಂದಿಗೆ ಜಾರಿಗೊಳಿಸಿದ ಈ ಯೋಜನೆಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಬೇಕು ಎಂದು ಒತ್ತಾಯಿಸಿದರು.

ರಾಜ್ಯ ಸರ್ಕಾರವು ಈಚೆಗೆ ಯೋಜನೆ ವಿಫಲಗೊಳಿಸುವ ನಿಟ್ಟಿನಲ್ಲಿ ನೀತಿ ರೂಪಿಸುತ್ತಿರುವುದು ಖಂಡನೀಯ ಎಂದು ಹೇಳಿದರು.

ರಾಯಚೂರು ತಾಲ್ಲೂಕಿನಲ್ಲಿ 2006-07ರ ಸಾಲಿನಲ್ಲಿ  2,834 ಮತ್ತು 2007-08ರಲ್ಲಿ 3655, 2008-09ರಲ್ಲಿ 4,654, 2010-11ರಲ್ಲಿ 2123 ಸೇರಿದಂತೆ ಒಟ್ಟಾರೆಯಾಗಿ 16,744 ಫಲಾನುಭವಿಗಳು  ಭಾಗ್ಯಲಕ್ಷ್ಮೀ ಬಾಂಡ್ ಕೋರಿ ಅರ್ಜಿ ಸಲ್ಲಿಸಿದ್ದಾರೆ. ಇದರಲ್ಲಿ 1098 ಫಲಾನುಭವಿಗಳು ಮಾತ್ರ ಸೌಲಭ್ಯ ಪಡೆದಿದ್ದಾರೆ. ಇನ್ನೂ 5,816 ಫಲಾನುಭವಿಗಳಿಗೆ ಸೌಲಭ್ಯ ಸಿಕ್ಕಿಲ್ಲ. ಇದರಲ್ಲಿ 200708ರಲ್ಲಿ 1,843 ಹಾಗೂ 2008-09ರಲ್ಲಿ 1,349 ಫಲಾನುಭವಿಗಳಿಗೆ ಆದ್ಯತೆ ಪ್ರಕಾರ ಬಾಂಡ್ ನೀಡಬೇಕಾಗಿತ್ತು.  ಆದರೆ ಆಡಳಿತ ಯಂತ್ರ ಈವರೆಗೂ ಸೌಲಭ್ಯ ಕಲ್ಪಿಸಿಲ್ಲ ಎಂದು ದೂರಿದರು.

ಆದ್ಯತೆ ಪ್ರಕಾರ ಮೊದಲು ಅರ್ಜಿ ಸಲ್ಲಿಸಿದವರಿಗೆ ಸೌಲಭ್ಯ ಕಲ್ಪಿಸಬೇಕು. ಹಿಂದೆ ಬಂದ ಅರ್ಜಿಗಳಿಗೆ ಬಾಂಡ್ ನೀಡಲು ಮುಂದಾಗಿರುವುದು ಖಂಡನೀಯ ಎಂದು ಹೇಳಿದರು.

ಸಂಘಟನೆ ಜಿಲ್ಲಾ ಘಟಕದ ಅಧ್ಯಕ್ಷೆ ಎಚ್.ಪದ್ಮಾ, ತಾಲ್ಲೂಕು ಕಾರ್ಯದರ್ಶಿ ವರಲಕ್ಷ್ಮೀ, ಜಿಲ್ಲಾ ಕಾರ್ಯದರ್ಶಿ ಸರಸ್ವತಿ, ತಾಲ್ಲೂಕು ಅಧ್ಯಕ್ಷೆ ಈರಮ್ಮ,  ಸಿಪಿಐಎಂನ ಕೆ.ಜಿ ವೀರೇಶ, ಡಿ.ಎಸ್. ಶರಣಬಸವ ಹಾಗೂ ಮತ್ತಿತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT