ಅಣುಸ್ಫೋಟ ನಿಷೇಧಕ್ಕೆ ರಷ್ಯ ನಿರಾಕರಣೆ
ಮಾಸ್ಕೊ, ಸೆ. 10 - ವಾಯುಮಂಡಲದಲ್ಲಿ ಪ್ರಾಯೋಗಿಕ ಅಣುಸ್ಫೋಟಕಗಳನ್ನು ನಿಷೇಧಿಸುವ ಬಗ್ಗೆ ಬ್ರಿಟನ್ ಮತ್ತು ಅಮೆರಿಕಗಳ ಜಂಟಿ ಸಲಹೆಯನ್ನು ಸೋವಿಯತ್ ಒಕ್ಕೂಟವು ತಿರಸ್ಕರಿಸಿದೆ.
ಈ ನಿರಾಕರಣೆಯನ್ನೊಳಗೊಂಡ ಪತ್ರವನ್ನು ಇಂದು ವಿದೇಶಾಂಗ ಸಚಿವರ ಕಚೇರಿಯಲ್ಲಿ ರಷ್ಯದ ಉಪವಿದೇಶಾಂಗ ಮಂತ್ರಿಯೊಬ್ಬರು ಬ್ರಿಟನ್ ಮತ್ತು ಅಮೆರಿಕ ರಾಯಭಾರಿಗಳಿಗೆ ತಲುಪಿಸಿದರು.
ಗೇಣಿ ಪುನರ್ ಸಂಪಾದನೆ ಅರ್ಜಿಗೆ ಅವಕಾಶ
ಬೆಂಗಳೂರು, ಸೆ. 10 - ಇಂದು ವಿಧಾನ ಸಭೆ ಅಧಿಕೃತ ತಿದ್ದುಪಡಿಯೊಂದನ್ನು ಅಂಗೀಕರಿಸಿ `1957ರ ಸೆಪ್ಟೆಂಬರ್ 10ಕ್ಕೆ ಹಿಂದೆ 6 ವರ್ಷಗಳ ಕಾಲ ಒಂದೇ ಸಮನೆ ಗೇಣಿಯಲ್ಲಿದ್ದು ಬಿಡಿಸಲ್ಪಟ್ಟವರು ಗೇಣಿಯ ಪುನರ್ ಸಂಪಾದನೆಗೆ ಅರ್ಜಿ ಹಾಕಿಕೊಳ್ಳಲು ಅವಕಾಶ ಕಲ್ಪಿಸಲು ತೀರ್ಮಾನಿಸಿತು.
ರಾಜ್ಯದ 7 ಪ್ರದೇಶಗಳಿಗೆ ಸಂಬಂಧಿಸಿದಂತೆ 52ನೇ ಇಸವಿಯಿಂದ ಹಿಡಿದು 56ನೇ ಇಸವಿಯವರೆಗೆ ನಾನಾ ದಿನಗಳನ್ನು ಗೊತ್ತುಮಾಡಿ ಅಲ್ಲಿಂದ ಹಿಂದಕ್ಕೆ 6 ವರ್ಷಗಳ ಕಾಲ ಎಂದು ಮಸೂದೆಯಲ್ಲಿ ಗೊತ್ತು ಮಾಡಲಾಗಿದೆ.
ಮಾಸ್ಕೋದಿಂದ ನೆಹರೂ ಪ್ರಯಾಣ
ಲಂಡನ್, ಸೆ. 10 - ಭಾರತದ ಪ್ರಧಾನ ಮಂತ್ರಿ ಪಂಡಿತ್ ನೆಹರೂರವರು ಇಂದು ಮಾಸ್ಕೋದಿಂದ ಪ್ರಯಾಣ ಮಾಡಿದರೆಂದು ಮಾಸ್ಕೋ ರೇಡಿಯೊ ಇಂದು ವರದಿ ಮಾಡಿದೆ.
ವಿಮಾನ ನಿಲ್ದಾಣಕ್ಕೆ ಖ್ರುಶ್ಚೋವ್ ಮತ್ತಿತರರು ಆಗಮಿಸಿದ್ದು ನೆಹರೂರವರಿಗೆ ಸುಖ ಪ್ರಯಾಣ ಕೋರಿದರು.
3ನೇ ಯೋಜನೆಯಲ್ಲಿ ಹೇಮಾವತಿ ಅಣೆಕಟ್ಟು
ಬೆಂಗಳೂರು, ಸೆ. 10 - ಹೇಮಾವತಿ ಯೋಜನೆಯನ್ನು ತೃತೀಯ ಪಂಚವಾರ್ಷಿಕ ಯೋಜನೆಯಲ್ಲಿ ಸೇರಿಸಬೇಕೆಂದು ಕೇಂದ್ರ ಸರ್ಕಾರವನ್ನು ರಾಜ್ಯ ಸರ್ಕಾರ ಒತ್ತಾಯ ಪಡಿಸುವುದೆಂದು ಲೋಕೋಪಯೋಗಿ ಸಚಿವ ಶ್ರೀ ಎಚ್. ಕೆ. ವೀರಣ್ಣಗೌಡ ಅವರು ಇಂದು ವಿಧಾನ ಪರಿಷತ್ತಿನಲ್ಲಿ ತಿಳಿಸಿದರು.
ಈ ಯೋಜನೆಯನ್ನು ಎರಡು ಘಟ್ಟಗಳಲ್ಲಿ ಕೈಗೊಳ್ಳಬೇಕೆಂದು ಯೋಚಿಸಲಾಗಿದೆ ಎಂದು ಸಚಿವರು ಶ್ರೀ ಹಾರನಹಳ್ಳಿ ರಾಮಸ್ವಾಮಿ ಅವರಿಗೆ ತಿಳಿಸಿದರು.