ಬೆಂಗಳೂರು: ಡಿಸೆಂಬರ್ 25ರಂದು ನಗರದಲ್ಲಿ ನಡೆಯುವ ಭಾರತ - ಪಾಕಿಸ್ತಾನ ಕ್ರಿಕೆಟ್ ಪಂದ್ಯವನ್ನು ರದ್ದುಗೊಳಿಸಬೇಕು ಎಂದು ಆಗ್ರಹಿಸಿ ಶ್ರೀರಾಮಸೇನೆ ಮತ್ತು ಭಾರತ-ಪಾಕ್ ಕ್ರಿಕೆಟ್ ವಿರೋಧಿ ಒಕ್ಕೂಟದ ಸದಸ್ಯರು ನಗರದ ಪುರಭವನದ ಎದುರು ಪಾಕಿಸ್ತಾನದ ಧ್ವಜವನ್ನು ಸುಟ್ಟು ಸೋಮವಾರ ಪ್ರತಿಭಟನೆ ನಡೆಸಿದರು.
ಪ್ರತಿಭಟನೆಯಲ್ಲಿ ಮಾತನಾಡಿದ ಶ್ರೀರಾಮಸೇನೆಯ ಮುಖ್ಯಸ್ಥ ಪ್ರಮೋದ್ ಮುತಾಲಿಕ್, `ಭಾರತ - ಪಾಕ್ ಕ್ರಿಕೆಟ್ ಪಂದ್ಯದಿಂದ ದೇಶಕ್ಕೆ ಉಗ್ರಗಾಮಿಗಳು ಬರಲು ಅನುಕೂಲ ಮಾಡಿಕೊಟ್ಟಂತಾಗಿದೆ. ಕಳೆದ ಬಾರಿ ಭಾರತ - ಪಾಕ್ ಪಂದ್ಯ ನಡೆದ ಸಂದರ್ಭದಲ್ಲಿ ವೀಸಾ ಪಡೆದಿದ್ದವರ ಪೈಕಿ 117 ಮಂದಿ ಪಾಕಿಸ್ತಾನಿಯರು ಭಾರತದಲ್ಲೇ ಉಳಿದಿದ್ದಾರೆ. ಈ ಬಾರಿ ಮೂರು ಸಾವಿರ ಮಂದಿ ಪಾಕಿಸ್ತಾನಿಯರಿಗೆ ವೀಸಾ ನೀಡಲಾಗಿದ್ದು, ಇವರಲ್ಲಿ ಉಗ್ರಗಾಮಿಗಳೂ ಸೇರಿರುವ ಸಾಧ್ಯತೆಗಳಿವೆ' ಎಂದರು.
`ಪಂದ್ಯಕ್ಕೆ ಭಾರೀ ಪ್ರಮಾಣದ ಕಪ್ಪುಹಣ ಹೂಡಿಕೆಯಾಗಿದೆ. ಪಂದ್ಯದಲ್ಲಿ ಯಾರು ಗೆಲ್ಲಲಿದ್ದಾರೆ ಎಂಬುದು ಈಗಾಗಲೇ ನಿಗದಿಯಾಗಿದೆ. ಮ್ಯಾಚ್ ಫಿಕ್ಸಿಂಗ್ನಲ್ಲಿ ದಾವೂದ್ ಇಬ್ರಾಹಿಂ ಪಾತ್ರವೂ ಇದೆ ಎಂಬುದು ಗುಪ್ತಚರ ಇಲಾಖೆಯ ಮಾಹಿತಿಯಿಂದ ಗೊತ್ತಾಗಿದೆ. ಇಂತಹ ಕ್ರಿಕೆಟ್ ಪಂದ್ಯ ನಮ್ಮ ನೆಲದಲ್ಲಿ ನಡೆಯುವ ಅಗತ್ಯವಿಲ್ಲ. ಹೀಗಾಗಿ ಈ ಪಂದ್ಯವನ್ನು ರದ್ದುಗೊಳಿಸಬೇಕು' ಎಂದು ಅವರು ಆಗ್ರಹಿಸಿದರು.
`ಯಾವುದೇ ಕಾರಣಕ್ಕೂ ಭಾರತ - ಪಾಕ್ ಪಂದ್ಯವನ್ನು ನಡೆಯಲು ಬಿಡುವುದಿಲ್ಲ. ಪಂದ್ಯ ನಡೆಯುವ ದಿನದಂದು ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಮುತ್ತಿಗೆ ಹಾಕಿ ಪಂದ್ಯಕ್ಕೆ ಅಡ್ಡಿಪಡಿಸಲಾಗುವುದು. ಭಾರತಕ್ಕೆ ಮತ್ತಷ್ಟು ಜನ ಉಗ್ರಗಾಮಿಗಳು ಬರುವುದನ್ನು ತಡೆಗಟ್ಟಲು ಈ ಪಂದ್ಯವನ್ನು ರದ್ದುಗೊಳಿಸಬೇಕು' ಎಂದು ಅವರು ಒತ್ತಾಯಿಸಿದರು.