ಶ್ರೀರಂಗಪಟ್ಟಣ: ಜಮ್ಮು ಕಾಶ್ಮೀರ ಉಳಿಸಿ ಜನ ಜಾಗರಣ ಅಭಿಯಾನದ ಅಂಗವಾಗಿ ಬಿಜೆಪಿ ಮತ್ತು ಆರ್ಎಸ್ಎಸ್ ಕಾರ್ಯಕರ್ತರು ಶುಕ್ರವಾರ ಪಟ್ಟಣದಲ್ಲಿ ಪ್ರತಿಭಟನಾ ಧರಣಿ ನಡೆಸಿದರು.
ಮಿನಿ ವಿಧಾನಸೌಧದ ಎದುರು ಸುಮಾರು ಎರಡು ತಾಸು ಧರಣಿ ನಡೆಸಿದ ಪ್ರತಿಭಟನಾಕಾರರು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಸಂವಿಧಾನದ 370ನೇ ವಿಧಿಯನ್ನು ವಜಾ ಮಾಡಬೇಕು. ಅಲ್ಲಿನ ಅಲ್ಪಸಂಖ್ಯಾತ ಹಿಂದೂಗಳಿಗೆ ರಕ್ಷಣೆ ನೀಡಬೇಕು ಎಂದು ಆಗ್ರಹಿಸಿದರು. ಹಿಂದೂ ಜಾಗರಣ ವೇದಿಕೆಯ ಡಾ.ಭಾನುಪ್ರಕಾಶ್ ಶರ್ಮಾ, ಹಾಡ್ಯ ರಮೇಶ್ರಾಜು, ಉಮೇಶ್ಕುಮಾರ್ ಮಾತನಾಡಿದರು.
ಆರ್ಎಸ್ಎಸ್ ಪ್ರಮುಖ್ ಉಮೇಶ್, ಬಿಜೆಪಿ ತಾಲ್ಲೂಕು ಅಧ್ಯಕ್ಷ ಪಿ.ಎಚ್.ಚಂದ್ರಶೇಖರ್, ಮುಖಂಡರಾದ ಎಂ.ಸಂತೋಷ್, ಜಿ.ಉಮಾಶಂಕರ್, ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಟಿ.ಶ್ರೀಧರ್, ಉಮೇಶ್ಕುಮಾರ್, ಎಸ್.ಕೆ.ಮಂಜುನಾಥ್, ಪುರಸಭಾ ಸದಸ್ಯರಾದ ವಿದ್ಯಾ ಉಮೇಶ್, ಪದ್ಮಮ್ಮ, ಆರ್ಮುಗಂ ಇತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ನಂತರ ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಿದರು.
`ರಾಷ್ಟ್ರ ವಿರೋಧಿ ವರದಿ ತಿರಸ್ಕರಿಸಿ~
ಮಳವಳ್ಳಿ: ಜಮ್ಮು-ಕಾಶ್ಮೀರ ಸಂವಾದಕಾರರು ನೀಡಿರುವ ರಾಷ್ಟ್ರ ವಿರೋಧಿ ವರದಿಯನ್ನು ಕೇಂದ್ರ ಸರ್ಕಾರ ತಿರಸ್ಕರಿಸಬೇಕು ಎಂದು ಒತ್ತಾಯಿಸಿ ಶುಕ್ರವಾರ ಜಮ್ಮುಕಾಶ್ಮೀರ ಉಳಿಸಿ ಹೋರಾಟ ಸಮಿತಿಯ ಪದಾಧಿಕಾರಿಗಳು ಪಟ್ಟಣದ ಅಂಚೆಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.
ಕಾಶ್ಮೀರ ಸಮಸ್ಯೆ ಹಾಗೂ ಅದಕ್ಕೆ ಪರಿಹಾರ ಕಂಡುಕೊಳ್ಳುವ ಸಲುವಾಗಿ ರಚಿಸಿದ ತ್ರಿಸದಸ್ಯ ಸಮಿತಿಯು ಗೃಹ ಸಚಿವಾಲಯಕ್ಕೆ ನೀಡಿರುವ ವರದಿಯನ್ನು ತಿರಸ್ಕರಿಸಿ `ಜಮ್ಮುಕಾಶ್ಮೀರವನ್ನು ಭಾರತದಲ್ಲೇ ಉಳಿಸಿ~ ಎಂದು ಆಗ್ರಹಿಸಿದರು.
ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಯು.ಪಿ.ಎ ಸರ್ಕಾರ ತನ್ನ ಓಲೈಕೆ ರಾಜಕಾರಣದಿಂದಾಗಿ ಕಾಶ್ಮೀರವನ್ನು ಉಳಿಸುವಲ್ಲಿ ವಿಭಿನ್ನ ನಿಲುವು ತಳೆಯುವ ಮೂಲಕ ಭಾರತದಿಂದ ಕೈಬಿಡುವ ವಾತಾವರಣ ಉಂಟಾಗಿದೆ ಎಂದು ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನಾಕಾರರು ವಾಗ್ದಾಳಿ ನಡೆಸಿದರು.
ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ ಡಾ.ಕಪನಿಗೌಡ, ಮಾಜಿ ಅಧ್ಯಕ್ಷ ಅಪ್ಪಾಜಿಗೌಡ, ಯುವಮೋರ್ಚಾದ ಎಂ.ಎನ್.ಕೃಷ್ಣ, ಕೆ.ಸಿ.ನಾಗೇಗೌಡ, ಆರ್.ಬಿ.ನಂದೀಶ್, ಎಚ್.ನಾಗೇಶ್, ಮುದ್ದುಮಲ್ಲು, ಡಿ.ಎನ್.ಕುಮಾರಸ್ವಾಮಿ, ಎಂ.ನಾಗೇಂದ್ರಸ್ವಾಮಿ, ಸಿ.ಎಂ.ಪುಟ್ಟಬುದ್ದಿ, ಗುರುಸಿದ್ದಯ್ಯ, ಶಿವಲಿಂಗಸ್ವಾಮಿ, ಲೀಲಾವತಿ, ರೇಖಾಮಣಿ, ಚಿಕ್ಕಣ್ಣ, ಕೆಂಬೂತಗೆರೆ ಮೋಹನ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.