ಚನ್ನರಾಯಪಟ್ಟಣ:ತಾಲ್ಲೂಕಿನ ಹೊನ್ನ ಶೆಟ್ಟಿಹಳ್ಳಿ, ಕಾಚೇನಹಳ್ಳಿ ಗ್ರಾಮದ ಬಳಿ ಭೂಕಂಪನ ಅಧ್ಯಯನ ನಡೆಸಲು ಆಗಮಿಸಿದ್ದ ಹೈದರಾಬಾದ್ನ ಖಾಸಗಿ ಸಂಸ್ಥೆಯ ಅಧಿಕಾರಿಗಳಿದ್ದ ವಾಹನವನ್ನು ಗ್ರಾಮಸ್ಥರು ಭಾನುವಾರ ತಡೆದು ಪ್ರತಿಭಟನೆ ನಡೆಸಿದರು.
ಈ ಎರಡು ಗ್ರಾಮದ ಆಸುಪಾಸಿನಲ್ಲಿ ಭಾನುವಾರ ಬೆಳಿಗ್ಗೆಯಿಂದ 8 ಕೊಳವೆ ಬಾವಿ ಕೊರೆಯಲಾಗಿತ್ತು. ಚರ್ಚ್ ಬಳಿ ಪಾಯಿಂಟ್ ಮಾಡುತ್ತಿದ್ದಾಗ ಅಲ್ಲಿನ ಫಾದ್ರಿ ಅದನ್ನು ಪ್ರಶ್ನಿಸಿದರು. ಅಲ್ಲಿಗೆ ಆಗಮಿಸಿದ ಗ್ರಾಮಸ್ಥರು ಖಾಸಗಿ ಸಂಸ್ಥೆ ಅಧಿಕಾರಿಗಳಿದ್ದ ವಾಹನ ತಡೆದರು.
ಗ್ರಾಮಸ್ಥರ ಗಮನಕ್ಕೆ ಬರದೇ ಕೊಳವೆ ಬಾವಿ ಕೊರೆಯಲಾಗುತ್ತಿದೆ. ಭೂಮಿಯಲ್ಲಿ ಸುಮಾರು 100 ಅಡಿ ಕೊರೆದು ಅದರೊಳಗೆ ಮದ್ದು ತುಂಬಿ ಸ್ಫೋಟ ನಡೆಸುತ್ತಿರುವುದರಿಂದ ಸುತ್ತಲಿನ ಕಟ್ಟಡ, ಮನೆಗಳಿಗೆ ಹಾನಿಯಾಗುತ್ತದೆ. ಭೂಮಿಯ ಗಟ್ಟಿತನ ತಿಳಿಯುವ ದೃಷ್ಟಿಯಿಂದ ಕೊಳವೆ ಬಾವಿಕೊರೆದು ಸ್ಫೋಟಿಸಲು ಮುಂದಾಗಿರುವುದರಿಂದ ಅನೇಕ ತೊಂದರೆಗಳು ಉಂಟಾಗುತ್ತಿದೆ. ಇದನ್ನು ತಕ್ಷಣ ನಿಲ್ಲಿಸಬೇಕು ಎಂದು ಒತ್ತಾಯಿಸಿದರು.
ಆಗ ಸಂಸ್ಥೆಯ ಅಧಿಕಾರಿಗಳು, ಇದನ್ನು ಕೊರೆಯಲು ಜಿಲ್ಲಾಧಿಕಾರಿಗಳು ನೀಡಿದ ಅನುಮತಿ ಪತ್ರವನ್ನು ಗ್ರಾಮಸ್ಥರಿಗೆ ತೋರಿಸಿದರಾದರೂ ಇದನ್ನು ಗ್ರಾಮಸ್ಥರು ಒಪ್ಪಲಿಲ್ಲ. ನಂತರ ಕೊಳವೆ ಬಾವಿ ಕೊರೆಯುವುದನ್ನು ನಿಲ್ಲಿಸಲಾಯಿತು.