ಮಹದೇವಪುರ: ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಚಳಿಯ ನಡುವೆ ಮಹದೇವಪುರ ಕ್ಷೇತ್ರದ ವರ್ತೂರು ಕೆರೆಯ ಸುತ್ತಮುತ್ತಲೂ ಪ್ರತಿ ದಿನ ದಟ್ಟ ಮಂಜು ಆವರಿಸುತ್ತಿದ್ದು ಚಳಿಗಾಲದ ಸೌಂದರ್ಯ ಮೈದುಂಬಿ ಮೆರೆಯುತ್ತಿದೆ.
ಹೊಸ ವರ್ಷದ ಮೊದಲ ದಿನದಿಂದಲೇ ಇನ್ನಷ್ಟು ಮಂಜು ಬೀಳುತ್ತಿದೆ. ಇದು ಪ್ರಕೃತಿ ಪ್ರಿಯರಿಗೆ ಹಿತ ನೀಡುತ್ತಿದೆ.
ಸಾಮಾನ್ಯವಾಗಿ ಮುಂಜಾನೆ ಎಂಟು- ಒಂಬತ್ತು ಗಂಟೆಯವರೆಗೆ ಮಂಜು ಸುರಿಯುತ್ತಿದೆ. ಹೀಗಾಗಿ ವರ್ತೂರು ಕೆರೆಯ ಕಟ್ಟೆಯ ಮೇಲಿನ ರಸ್ತೆಯ ಮೇಲೆ ವಾಹನ ಸವಾರರು ತಮ್ಮ ವಾಹನಗಳ ಲೈಟ್ ಹಾಕಿಕೊಂಡು ನಿಧಾನವಾಗಿ ಸಂಚರಿಸುವಂತಹ ವಾತಾವರಣ ನಿರ್ಮಾಣವಾಗಿದೆ.
ದಿನ ಬೆಳಗಾದರೆ ಪಾಲಕರು ಶಾಲೆಗೆ ತಮ್ಮ ಮಕ್ಕಳನ್ನು ಮಂಜಿನ ನಡುವೆ ಸ್ವೆಟರ್ ಹಾಗೂ ಕ್ಯಾಪ್ಗಳನ್ನು ಹಾಕಿಕೊಂಡು ಶಾಲೆಗಳಿಗೆ ಕರೆದುಕೊಂಡು ಹೋಗುವುದು ಸಾಮಾನ್ಯ ಎನಿಸಿದೆ.
ಹೂವಿನ ಬೆಳೆಗೆ ತೊಂದರೆ: ಪ್ರತಿದಿನವೂ ಹೀಗೆ ಮಂಜು ಬೀಳುತ್ತಿದ್ದರೆ ಹೂವು ಬೆಳೆಗಾರರಿಗೆ ತೊಂದರೆಯಾಗಲಿದೆ. ಇದೇ ರೀತಿ ಒಂದೆರಡು ದಿನಗಳ ಕಾಲ ನಿರಂತರವಾಗಿ ಮಂಜು ಸುರಿದರೆ ಹೂವಿನ ಇಳುವರಿ ಕಡಿಮೆಯಾಗುತ್ತದೆ ಎನ್ನುತ್ತಾರೆ ವರ್ತೂರು ಗ್ರಾಮದ ನಿವಾಸಿ ಲಕ್ಷ್ಮಣ ಹುಣಸಾಳ.
ಅಲ್ಲದೆ, ತರಕಾರಿ ಬೆಳೆಯುವ ಬೆಳೆಗಾರರಿಗೂ ಇದರಿಂದ ಸಾಕಷ್ಟು ನಷ್ಟ ಉಂಟಾಗಲಿದೆ. ಇಂತಹ ಮಂಜು ಬೀಳುವುದರಿಂದ ಹುಳುಗಳ ಕಾಟವೂ ಹೆಚ್ಚಾಗಿ ಬೆಳೆಗಳ ಮೇಲೆ ಪರಿಣಾಮ ಉಂಟಾಗುತ್ತದೆ. ಆದಷ್ಟು ಬೇಗನೆ ಈ ಮಂಜು ದೂರವಾಗಲಿ ಎಂಬುದು ಅವರ ಅಭಿಪ್ರಾಯ.