ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಡಕ್ಕಿ ತಯಾರಿಕೆ ಕೋಟಿ ಲೆಕ್ಕದ ಉದ್ಯಮ!

Last Updated 9 ಡಿಸೆಂಬರ್ 2014, 19:30 IST
ಅಕ್ಷರ ಗಾತ್ರ

ಮಂಡಕ್ಕಿ ತಯಾರಿಕೆಗೆ ದಾವಣಗೆರೆ ಬಿಟ್ಟರೆ ಕೊಪ್ಪಳ ಹೆಸರುವಾಸಿ. ಅದರಲ್ಲೂ ಕೊಪ್ಪಳದ ಮಂಡಕ್ಕಿಗೆ (ಮಂಡಾಳು) ವಿಶೇಷ ಬೇಡಿಕೆ. ಬಟ್ಟಿಯಲ್ಲಿ ಹುರಿದು ತಯಾರಿಸುತ್ತಿದ್ದ ಮಂಡಕ್ಕಿಗೆ ಈಗ ಆಧುನಿಕ ಸ್ಪರ್ಶ ಬಂದಿದೆ. ಚಿಲವಾಡಗಿ ಗ್ರಾಮದಲ್ಲಿ ಹುಟ್ಟಿಕೊಂಡ ‘ಜನತಾ ಇಂಡಸ್ಟ್ರೀಸ್‌’ ಈಗ ಮಂಡಕ್ಕಿ ಉತ್ಪಾದಿಸುವ ಕೈಗಾರಿಕೆಯಾಗಿ ಬೆಳೆದಿದೆ. ಶಹಾಬುದ್ದೀನ್‌ ಮತ್ತು ಸಹೋದರರು ಈಗ ಮಂಡಕ್ಕಿ ಉದ್ಯಮಿಗಳು ಎನಿಸಿಕೊಂಡಿದ್ದಾರೆ. ಅಂದಾಜು ರೂ1.50 ಕೋಟಿ ಬಂಡವಾಳದಲ್ಲಿ ಮಂಡಕ್ಕಿ ತಯಾರಿಸುವ ಅತ್ಯಾಧುನಿಕ ತಂತ್ರಜ್ಞಾನ ಅಳವಡಿಸಿರುವ ಘಟಕ ಅವರದು. ಈಗ ವಾರ್ಷಿಕ ಕೋಟಿ ರೂಪಾಯಿಗೂ ಅಧಿಕ ವಹಿವಾಟೂ ನಡೆಯುತ್ತಿದೆ.

ಗಿರ್‌ಮಿಟ್‌, ಚುರುಮುರಿ, ಮಂಡಕ್ಕಿ ಒಗ್ಗರಣೆ... ಅಂದಾಕ್ಷಣ  ನೆನಪಾಗುವುದು ಉತ್ತರ ಕರ್ನಾಟಕ ಭಾಗದಲ್ಲಿ ಸರ್ವೇಸಾಮಾನ್ಯವಾದ ಸಂಜೆಯ (ಕೆಲವೊಮ್ಮೆ ಬೆಳಗಿನ) ಉಪಾಹಾರ. 
ಮಂಡಕ್ಕಿ ತಯಾರಿಕೆಗೆ ದಾವಣಗೆರೆ ಬಿಟ್ಟರೆ ಕೊಪ್ಪಳ ಹೆಸರುವಾಸಿ. ಅದರಲ್ಲೂ ಕೊಪ್ಪಳದ ಮಂಡಕ್ಕಿಗೆ (ಮಂಡಾಳು) ವಿಶೇಷ ಬೇಡಿಕೆ. ಬಟ್ಟಿಯಲ್ಲಿ ಹುರಿದು ತಯಾರಿಸುತ್ತಿದ್ದ ಮಂಡಕ್ಕಿಗೆ ಈಗ ಆಧುನಿಕ ಸ್ಪರ್ಶ ಬಂದಿದೆ.

ನಾಲ್ಕು ದಶಕಗಳ ಹಿಂದೆ ಕೊಪ್ಪಳದಲ್ಲಿ ಟೈರ್‌ ಸುಟ್ಟು ಹೊಗೆ ಕಕ್ಕುತ್ತಾ ಮಂಡಕ್ಕಿ ಸಿದ್ಧಪಡಿಸುತ್ತಿದ್ದ ಸುಮಾರು 250ರಷ್ಟು ಕೈಬಟ್ಟಿಗಳಿದ್ದವು. ಈಗಲೂ ಕೊಪ್ಪಳದಲ್ಲಿ ಸಾಂಪ್ರದಾಯಿಕ ರೀತಿಯಲ್ಲಿ ಮಂಡಕ್ಕಿ ತಯಾರಿಸುವವರಿದ್ದಾರೆ. ಹೀಗೆ ತಯಾರಾಗುತ್ತಿದ್ದ ಮಂಡಕ್ಕಿಯನ್ನು ತಲೆಮೇಲೆ ಹೊತ್ತು ಊರೂರು ಸುತ್ತಾಡಿ ಮಾರಾಟ ಮಾಡಲಾಗುತ್ತಿತ್ತು. ವಾರ್ಷಿಕ ವಹಿವಾಟು ರೂ50 ಕೋಟಿಗೂ ಹೆಚ್ಚು ಇತ್ತು. ನೂರಾರು ಕುಟುಂಬಗಳು ಈ ಮಂಡಕ್ಕಿ ತಯಾರಿಕೆಯಲ್ಲಿ ತೊಡಗಿಸಿಕೊಂಡಿದ್ದವು.

ಈಗ ಕಾಲ ಬದಲಾಗಿದೆ. ಭತ್ತದ ಬೆಲೆ ಗಗನಕ್ಕೇರಿದೆ. ಕಾರ್ಮಿಕರ ಕೊರತೆ ಎದುರಾಗಿದೆ. ಪರಿಣಾಮ ಮಂಡಕ್ಕಿ ತಯಾರಿಕೆ ಮತ್ತು ಮಾರಾಟ ವಹಿವಾಟು ಸಂಕಷ್ಟದಲ್ಲಿದೆ. ಹೀಗಾಗಿ ನೂರಕ್ಕೂ ಹೆಚ್ಚು ಕೈಬಟ್ಟಿಗಳು ಬಾಗಿಲು ಮುಚ್ಚಿದವು.

ಆದರೆ, ಇದೇ ಕೈಬಟ್ಟಿಯಲ್ಲಿ ತಯಾರಾಗುತ್ತಿದ್ದ ಮಂಡಕ್ಕಿಯನ್ನು ಹೊತ್ತು ವ್ಯಾಪಾರ ಮಾಡುತ್ತಿದ್ದ ಕೊಪ್ಪಳ ಜಿಲ್ಲೆ ಕುಕನೂರಿನ ಶಹಾಬುದ್ದೀನ್‌ ಸಾಬ್‌ ನೂರ್‌ಪಾಷಾ ಮತ್ತು ಸಹೋದರರು ಧೈರ್ಯ ಮಾಡಿ ತಾವೇ ದೊಡ್ಡಮಟ್ಟದಲ್ಲಿ ಮಂಡಕ್ಕಿ ತಯಾರಿಸಲು ಮುಂದಾದರು. ಕೇವಲ ಪಿಯುಸಿ ಕಲಿತಿದ್ದ ಶಹಾಬುದ್ದೀನ್‌ ಸಾಬ್‌, ಸಹೋದರರ ಪೈಕಿ ಹಿರಿಯರು. ಅವರ ನೇತೃತ್ವದಲ್ಲಿ ಕೊಪ್ಪಳ ನಗರದಿಂದ ಸುಮಾರು ಏಳು ಕಿ.ಮೀ ದೂರದ ಚಿಲವಾಡಗಿ ಗ್ರಾಮದಲ್ಲಿ ಹುಟ್ಟಿಕೊಂಡ ‘ಜನತಾ ಇಂಡಸ್ಟ್ರೀಸ್‌’ ಈಗ ಮಂಡಕ್ಕಿ ಉತ್ಪಾದಿಸುವ ಕೈಗಾರಿಕೆಯಾಗಿ ಬೆಳೆದಿದೆ. ಶಹಾಬುದ್ದೀನ್‌ ಮತ್ತು ಸಹೋದರರು ಈಗ ಮಂಡಕ್ಕಿ ಉದ್ಯಮಿಗಳು ಎನಿಸಿಕೊಂಡಿದ್ದಾರೆ. ಅಂದಾಜು ರೂ1.50 ಕೋಟಿ ಬಂಡವಾಳದಲ್ಲಿ ಮಂಡಕ್ಕಿ ತಯಾರಿಸುವ ಅತ್ಯಾಧುನಿಕ ತಂತ್ರಜ್ಞಾನ ಅಳವಡಿಸಿರುವ ಘಟಕ ಅವರದು. ಈಗ ವಾರ್ಷಿಕ ಕೋಟಿ ರೂಪಾಯಿಗೂ ಅಧಿಕ ವಹಿವಾಟೂ ನಡೆಯುತ್ತಿದೆ.

‘ನಾವು ತಲೆಮೇಲೆ ಹೊತ್ತು ಮಂಡಕ್ಕಿ ವ್ಯಾಪಾರ ಮಾಡುತ್ತಿದ್ದಾಗ (1977ರಲ್ಲಿ) ಕೊಪ್ಪಳದ ಸರ್ದಾರ್‌ ಗಲ್ಲಿ, ತೆಗ್ಗಿನಕೇರಿ ಪ್ರದೇಶದಲ್ಲಿ ಮಂಡಕ್ಕಿ ತಯಾರಿಸುತ್ತಿದ್ದ ಸುಮಾರು 250 ಕೈಬಟ್ಟಿಗಳಿದ್ದವು. ಅವರಿಂದ ನಾವು ಪ್ರತಿದಿನ ಮಂಡಕ್ಕಿ ಪಡೆದುಕೊಂಡು ಯಲಬುರ್ಗಾ, ಕುಷ್ಟಗಿ, ಗಂಗಾವತಿ ಮತ್ತಿತರ ಕಡೆಗಳಿಗೆ ಹೋಗಿ ಮಾರುತ್ತಿದ್ದೆವು. ಈಗ ಕೈಬಟ್ಟಿಗಳ ಸಂಖ್ಯೆ 50–60ಕ್ಕೆ ಇಳಿದಿದೆ. ಮಂಡಕ್ಕಿ ವ್ಯಾಪಾರವನ್ನೇ ನಂಬಿದ್ದ ನಾವು, ಕೈಬಟ್ಟಿಗಳು ಮುಚ್ಚುತ್ತಿರುವುದನ್ನು ಕಂಡು ರೋಸ್ಟರ್‌ (ಹುರಿಯುವ ಯಾಂತ್ರಿಕ ವ್ಯವಸ್ಥೆ) ವಿಧಾನದಲ್ಲಿ ಮಂಡಕ್ಕಿ ತಯಾರಿಸುವ ಘಟಕ ಆರಂಭಿಸಿದೆವು’ ಎನ್ನುತ್ತಾರೆ ಶಹಾಬುದ್ದೀನ್‌.

ಸಹೋದರರ ಸಾಧನೆ– ಸವಾಲು

ಇದು ಐವರು ಸಹೋದರರ ಸಾಧನೆ–ಸವಾಲಿನ ಕಥೆ. ಈ ಪೈಕಿ ಹಿರಿಯವರು ಶಹಾಬುದ್ದೀನ್‌. ಉಳಿದವರು ಖಲಂದರ್‌ ಸಾಬ್‌, ನಜೀರ್‌ ಅಹ್ಮದ್‌, ಮುರ್ತುಜಾ ಅಹ್ಮದ್ ಮತ್ತು ನೂರ್‌ ಅಹ್ಮದ್‌.
ಕೈಬಟ್ಟಿಯಿಂದ ಮಂಡಕ್ಕಿ ಖರೀದಿಸಿ ದೊಡ್ಡಪ್ಪನ ಬೆನ್ನ ಹಿಂದೆ ಜೋಳಿಗೆಯಲ್ಲಿ ಹೊತ್ತು ಊರೂರು ಸುತ್ತಾಡಿ ವ್ಯಾಪಾರ ಮಾಡಿದ ಈ ಸಹೋದರರ ಕನಸು ಈಗ ನನಸಾಗಿದೆ.

ಮಂಡಕ್ಲಿ ವ್ಯಾಪಾರವಷ್ಟೆ ಅಲ್ಲ, ಸ್ವಂತ ಉದ್ಯಮವನ್ನೇ ಆರಂಭಿಸಬೇಕು ಎಂಬ ಕನಸು 2004ರಲ್ಲಿ ನನಸಾಗಿತ್ತು. ಕಳೆದ 10 ವರ್ಷದ ಹಾದಿಯಲ್ಲಿ ಉದ್ಯಮ ಉತ್ತುಂಗಕ್ಕೆ ಏರಿದೆ. ವಾರ್ಷಿಕ ವ್ಯವಹಾರ ಕೋಟಿ ದಾಟಿದೆ. ‘ದೊಡ್ಡಪ್ಪನ ಜತೆ 1977ರಲ್ಲಿ 25 ಕಿಲೋ ಮಂಡಕ್ಕಿ ತಲೆ ಮೇಲೆ ಹೊತ್ತುಕೊಂಡು, ಸೈಕಲ್‌ನಲ್ಲಿ ಸಾಗಿಸಿ ವ್ಯಾಪಾರ ಮಾಡುತ್ತಿದ್ದೆವು. ಹೋಟೆಲ್‌, ಕಿರಾಣಿ ಅಂಗಡಿಗಳಿಗೆ ಬೇಡಿಕೆಗೆ ಅನುಗುಣವಾಗಿ ಪೂರೈಸುತ್ತಿದ್ದೆವು.  ಎರಡು ಮೂರು ವರ್ಷ ಹೀಗೆಯೇ ವ್ಯಾಪಾರ ಸಾಗುತ್ತಿತ್ತು. ನಂತರದ ದಿನಗಳಲ್ಲಿ ಕೊಪ್ಪಳ ಸುತ್ತ,ಮುತ್ತ ಲಾರಿ ಸಂಚಾರ ಆರಂಭಗೊಂಡಿದ್ದರಿಂದ  50– 75 ಕಿಲೋ ಮಂಡಕ್ಕಿ ಚೀಲಗಳನ್ನು ಲಾರಿ ಮೂಲಕ ಸಾಗಿಸಿ ವ್ಯಾಪಾರ ಮಾಡಿದೆವು. 2004ರಲ್ಲಿ ಸ್ವಂತ ಉದ್ಯಮದೊಂದಿಗೆ ನಾವೇ ಮಂಡಕ್ಕಿ ಉತ್ಪಾದನೆ ಆರಂಭಿಸಿದೆವು’ ಎಂದು ಗತದಿನಗಳನ್ನು ನೆನಪಿಸಿಕೊಳ್ಳುತ್ತಾರೆ.

‘ಗಂಗಾವತಿಯಿಂದ ಸಿಂಧನೂರುವರೆಗೆ ಹೋಗಿ ನೇರವಾಗಿ ರೈತರಿಂದ ಭತ್ತ ಖರೀದಿಸುತ್ತೇವೆ. ಮಂಡಕ್ಕಿ ತಯಾರಿಗೆ ಅಗತ್ಯವಾದ ಸಮುದ್ರದ ಉಪ್ಪನ್ನು ಕಾರಾವಾರದಿಂದ ಲೋಡ್‌ಗಟ್ಟಲೆ ತರುತ್ತೇವೆ. ಸಾಮಿಲ್‌ಗಳಿಂದ ಮರದ ಪುಡಿ ತರಿಸುತ್ತೇವೆ. ಉದ್ಯಮ ಆರಂಭಿಸಲು ಕೈಗಾರಿಕಾ ಕೇಂದ್ರದಿಂದ ನೆರವು ಸಿಕ್ಕಿದೆ.  ರೂ1 ಲಕ್ಷದ ಬಂಡವಾಳಕ್ಕೆ ಶೇ 15ರಷ್ಟು ಸಬ್ಸಿಡಿ ಸಿಗುತ್ತದೆ. ನಮಗೆ ರೂ15 ಲಕ್ಷ ಸಿಕ್ಕಿದೆ’ ಎಂದರು.

ಕೈಗಾರಿಕೆಗೆ ಬುನಾದಿ
2004ರಲ್ಲಿ ಚಿಲವಾಡಗಿ ಗ್ರಾಮದಲ್ಲಿ 3.25 ಎಕರೆ ಭೂಮಿ ಖರೀದಿಸಿ ಕೈಗಾರಿಕಾ ಪ್ರದೇಶವನ್ನಾಗಿ ಪರಿವರ್ತಿಸಿದೆವು. ರೂ40 ಲಕ್ಷ ಆರಂಭಿಕ ಬಂಡವಾಳದಲ್ಲಿ ಜನತಾ ಇಂಡಸ್ಟ್ರೀಸ್‌ ಆರಂಭಿಸಿದೆವು. ‘ಎಂ–ಗೋಲ್ಡ್‌’ ಬ್ರಾಂಡ್‌ನಡಿ ಮಂಡಕ್ಕಿಯನ್ನು ಪ್ಯಾಕೆಟ್‌ ಮಾಡಿ ವ್ಯಾಪಾರ ಕ್ಕಿಳಿದೆವು. ಆದರೆ, ಆಗ ತಾಂತ್ರಿಕ ವ್ಯವಸ್ಥೆ ಅಷ್ಟೊಂದು ಸುಧಾರಿಸಿರ ಲಿಲ್ಲ. ಆದರೆ ಮಂಡಕ್ಕಿಗೆ ಹೆಚ್ಚು ಹೆಚ್ಚು ಬೇಡಿಕೆ ಬರುತ್ತಿತ್ತು. ಬೇಡಿಕೆಗೆ ಅನುಗುಣವಾಗಿ ಪೂರೈಕೆ ಮಾಡಲೇಬೇಕು ಎಂಬ ಉದ್ದೇಶದಿಂದಲೇ 2010ರಲ್ಲಿ, ಮೊದಲಿದ್ದ ಘಟಕದ ಸಮೀಪದಲ್ಲಿ ರೂ1.25 ಕೋಟಿ ಬಂಡವಾಳ ಹೂಡಿ ಮತ್ತೊಂದು ಘಟಕ ಸ್ಥಾಪಿಸಿದೆವು. ಮಂಡಕ್ಕಿಗೆ  ಬೇಡಿಕೆಯೇನೋ ಹೆಚ್ಚುತ್ತಿತ್ತು. ಆದರೆ ಕಾರ್ಮಿಕರ ಕೊರತೆಯಿಂದ ಉತ್ಪಾದನೆ ಹೆಚ್ಚಿಸಲು ಸಾಧ್ಯವಾಗುತ್ತಿರಲಿಲ್ಲ. ಇದು ನಮ್ಮನ್ನು ಹೊಸ ಘಟಕ ಅಳವಡಿಸುವಂತೆ ಪ್ರೇರೇಪಿಸಿತು’ ಎಂದು ನೆನಪಿಸಿಕೊಳ್ಳುತ್ತಾರೆ.

ಯಂತ್ರ–ತಂತ್ರ ಉತ್ಪಾದನೆ ಮಂತ್ರ
‘2004ರಲ್ಲಿ 30 ಮಂದಿ ಕಾರ್ಮಿಕರ ನೆರವಿನಿಂದ ರೋಸ್ಟರ್‌ ವಿಧಾನದಲ್ಲಿ ದಿನವೊಂದಕ್ಕೆ 300 ಚೀಲ (ಒಂದು ಚೀಲದಲ್ಲಿ 5 ಕಿಲೋ) ಮಂಡಕ್ಕಿ ತಯಾರಿಸಿದರೆ, 2010ರಲ್ಲಿ ಹೊಸ ತಂತ್ರಜ್ಞಾನ ವ್ಯವಸ್ಥೆಯಿಂದ 15 ಮಂದಿ ಕಾರ್ಮಿಕರ ನೆರವಿನಿಂದ ಅತ್ಯಾಧುನಿಕ ಯಂತ್ರದ ಮೂಲಕ ಪ್ರತಿದಿನ 800 ಚೀಲ ತಯಾರಿಕೆ ಸಾಧ್ಯವಾಗಿದೆ. ಆರಂಭದಲ್ಲಿ ಕೇವಲ 20 ಕಿ.ಮೀ ವ್ಯಾಪ್ತಿಯಲ್ಲಿ ಮಂಡಕ್ಕಿ ವ್ಯಾಪಾರ ಇತ್ತು. ಉತ್ಪಾದನೆ ಹೆಚ್ಚಿದ ಬಳಿಕ ಈ ವ್ಯಾಪ್ತಿ 100 ಕಿ.ಮೀ ದೂರದವರೆಗೂ ವಿಸ್ತರಿಸಿತು. ಹುಬ್ಬಳ್ಳಿ, ಗದಗ, ಬಾಗಲಕೋಟೆ, ಹುನಗುಂದ, ಹೊಸಪೇಟೆ, ತುರವೀಹಾಳ ಮತ್ತಿತರ ಊರುಗಳಿಗೆ ಪೂರೈಕೆ ಸಾಧ್ಯವಾಯಿತು.

ಸ್ವಯಂಚಾಲಿತ ಯಂತ್ರ ಅಳವಡಿಸಿದ್ದರಿಂದ 200 ಗ್ರಾಂನಿಂದ ಆರಂಭಿಸಿ ಎಷ್ಟು ಬೇಕಿದ್ದರೂ ತೂಕದ ಚೀಲಗಳ ಪ್ಯಾಕಿಂಗ್‌ ಮಾಡಲು ಅನುಕೂಲವಾಗಿದೆ. ಸೂಪರ್‌ ಬಜಾರ್‌ನಂತಹ ಮಾಲ್‌ಗಳಲ್ಲಿ 400 ಗ್ರಾಂ ಪ್ಯಾಕೆಟ್‌ಗಳ ಮಂಡಕ್ಕಿ ಲಭ್ಯವಿದೆ. ನಮ್ಮಲ್ಲೂ ಆ ಪ್ರಮಾಣ ಮತ್ತು ಗುಣಮಟ್ಟದ ಮಂಡಕ್ಕಿ ಲಭ್ಯ ಇದೆ. ಮಾಲ್‌ಗಳಿಂದ ಬೇಡಿಕೆ ಇದ್ದರೂ ಸ್ಥಳೀಯವಾಗಿ ಹೆಚ್ಚು ಬೇಡಿಕೆ ಇರುವುದರಿಂದ ಮಾಲ್‌ಗಳತ್ತ ಗಮನಹರಿಸಿಲ್ಲ ಎನ್ನುತ್ತಾರೆ ಶಹಾಬುದ್ದೀನ್‌.

ಹೀಗಾಗಿ ರೂ75 ಲಕ್ಷ ವೆಚ್ಚದಲ್ಲಿ ಇನ್ನೊಂದು ಘಟಕವನ್ನು ಸ್ಥಾಪಿಸುವ ಉದ್ದೇಶವಿದೆ. ಮೂರು ತಿಂಗಳ ಒಳಗೆ ಈ ಹೊಸ ಘಟಕ ಕಾರ್ಯಾರಂಭಗೊಳ್ಳಲಿದೆ. ಬಳಿಕ ಮಾಲ್‌ಗಳಿಗೆ ಪೂರೈಸುವ ಜತೆಗೆ ವಿದೇಶಕ್ಕೂ ರಫ್ತು ಮಾಡುವ ಉದ್ದೇಶವಿದೆ’ ಎಂದು ಕನಸು ತೆರೆದಿಟ್ಟರು.

ಮಂಡಕ್ಕಿಯಾಗುವ  ಪರಿ!
ಅತ್ಯಾಧುನಿಕ ತಾಂತ್ರಿಕ ವ್ಯವಸ್ಥೆಯ ವಿವಿಧ ಹಂತಗಳಲ್ಲಿ ಭತ್ತ ಹೊರಾವರಣ (ಜಳ್ಳು) ಕಳಚಿಕೊಂಡು ಮಂಡಕ್ಕಿಯಾಗಿ ರೂಪು ಪಡೆಯುವ ಪರಿ ವಿಶೇಷ. ಭತ್ತವನ್ನು ಪ್ಯಾಡಿ ಕ್ಲೀನರ್‌ ಮೂಲಕ ಸ್ವಚ್ಛಗೊಳಿಸಲಾಗುತ್ತದೆ. ಹೀಗೆ ಸ್ವಚ್ಛಗೊಳಿಸಿದ ತಲಾ 45 ಚೀಲ (ಒಂದು ಚೀಲದಲ್ಲಿ 70 ಕಿಲೋ) ತುಂಬಿಸಿಡಬಲ್ಲ ನಾಲ್ಕು ಸ್ಟೋರೇಜ್‌ಗಳು ನಮ್ಮಲ್ಲಿವೆ. ಈ ಪೈಕಿ ಎರಡನ್ನು ಮೀಸಲಿಟ್ಟು, ಉಳಿದ ಎರಡನ್ನು ಅಗತ್ಯಕ್ಕೆ ತಕ್ಕಂತೆ ಬಳಸಲಾಗುತ್ತದೆ. ಒಂದು ದಿನಕ್ಕೆ ಬೇಕಿರುವಷ್ಟು ಭತ್ತವನ್ನು ಸ್ಟೋರೇಜ್‌ಗೆ ಹಾಕಿ 95 ಡಿಗ್ರಿ ಸೆಲ್ಸಿಯಸ್‌ನಲ್ಲಿ ಕುದಿಸಿದ ನೀರನ್ನು ಅದರೊಳಗೆ ಬಿಡಲಾಗುತ್ತದೆ. ಆರು ಗಂಟೆಯ ಬಳಿಕ ಆ ನೀರನ್ನು ಹೊರಗೆ ಬಿಟ್ಟು ರೋಸ್ಟರ್‌ (ಬೆಂಕಿಯಿಂದ) ಮೂಲಕ ಭತ್ತವನ್ನು ಹುರಿಯಲಾಗುತ್ತದೆ. ಹುರಿದ ಭತ್ತವನ್ನು ತಂಪುಗೊಳಿಸಲು ಕೂಲಿಂಗ್‌ ಜಾಲಿಯಲ್ಲಿ ಹಾಕಲಾಗುತ್ತದೆ. ತಣ್ಣಗಾದ ಭತ್ತವನ್ನು ಪಾಲಿಶ್‌ ಮಾಡುವ ವೇಳೆ ಅಕ್ಕಿಯಿಂದ ಸಿಪ್ಪೆ (ತೌಡು) ಬೇರೆಯಾಗಿ ಹೊರಗೆ ಬರುತ್ತದೆ. ಬಿಸಿ ಅಕ್ಕಿಯನ್ನು ತಂಪಾಗಿಸಲು ಮತ್ತೆ ಜಾಲಿಯಲ್ಲಿ ಹಾಕಲಾಗುತ್ತದೆ. ಬಳಿಕ ಫ್ಯಾನ್ ಬಳಸಿ ಸಿಪ್ಪೆಯನ್ನು ಅಕ್ಕಿಯಿಂದ  ಪ್ರತ್ಯೇಕಿಸಲಾಗುತ್ತದೆ. ಆ ಅಕ್ಕಿಯನ್ನು ಡ್ರೈಯರ್‌ಗೆ ಹಾಕಲಾಗುತ್ತದೆ. ಡ್ರೈಯರ್‌ನಲ್ಲಿ ಅಕ್ಕಿ ಮೇಲೆ, ಕೆಳಗೆ ಚಲಿಸುತ್ತದೆ. 45 ಚೀಲ ಅಕ್ಕಿ ಒಣಗಲು ಎರಡೂವರೆ ಗಂಟೆ ತಗಲುತ್ತದೆ. ಆ ಅಕ್ಕಿಯನ್ನು ಜಾಲಿಯಲ್ಲಿ ಹಾಕಿದಾಗ ನುಚ್ಚು ಬೇರೆಯಾಗುತ್ತದೆ. ಈ ಅಕ್ಕಿಯನ್ನು ಇನ್ನೊಂದು ರೋಸ್ಟರ್‌ ಮೂಲಕ ಹಾಯಿಸಿ ಹೊರಬಂದಾಗ ಮಂಡಕ್ಕಿ ತಯಾರಾಗುತ್ತದೆ.

ಮಂಡಕ್ಕಿ ಮಾರುಕಟ್ಟೆ –ವ್ಯವಹಾರ

ಹುಬ್ಬಳ್ಳಿ, ಧಾರವಾಡ, ದಾಂಡೇಲಿ, ಗಂಗಾವತಿ, ಹೊಸಪೇಟೆ, ಬಳ್ಳಾರಿ, ರಾಯಚೂರು, ಗೋವಾ... ಹೀಗೆ ಕೊಪ್ಪಳದ ಮಂಡಕ್ಕಿ ಮಾರುಕಟ್ಟೆ ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಪ್ರದೇಶಗಳಿಗೆ ವಿಸ್ತರಿಸಿ ಕೊಂಡಿದೆ. ಅಷ್ಟೇ ಅಲ್ಲ, ಮೆಟ್ರೋ ಸಿಟಿಗಳ ಮಾಲ್‌ಗಳಿಗೂ ಮಂಡಕ್ಕಿ ಲಗ್ಗೆ ಇಟ್ಟಿದೆ.

‘ನಾವು ಕಿಲೋ ಒಂದಕ್ಕೆ ರೂ40ರಂತೆ 5 ಕಿಲೋ ಚೀಲಕ್ಕೆ ರೂ200 ಮಾರಾಟ ಮಾಡುತ್ತೇವೆ. ಚಿಲ್ಲರೆ ಯಾಗಿ ಮಾರಾಟ ಮಾಡಲು ಅಂಗಡಿಗಳಿಗೆ ನೇರವಾಗಿ 10– 20 ಚೀಲ ಸಾಗಿಸುತ್ತೇವೆ. ಒಂದು ಲೋಡ್‌ನಲ್ಲಿ 5 ಕಿಲೋದ 800 ಚೀಲ ತುಂಬುತ್ತವೆ. ದಿನವೊಂದಕ್ಕೆ ಇಂತಹ ಒಂದು ಲೋಡ್ ನಮ್ಮಲ್ಲಿಂದ ಸಾಗಣೆಯಾಗುತ್ತದೆ’ ಎನ್ನುತ್ತಾರೆ ಶಹಾಬುದ್ದೀನ್‌.

ಹೀಗೆ ಆದ ಮಂಡಕ್ಕಿಯನ್ನು ಕನ್ವೇಯರ್‌ ಸಹಾಯದಿಂದ ಸಂಗ್ರಹ ಟ್ಯಾಂಕಿನಲ್ಲಿ ತುಂಬಲಾಗುತ್ತದೆ. ಒಂದೊಂದು ಟ್ಯಾಂಕ್‌ನಲ್ಲಿ 1,500 ಚೀಲ ಮಂಡಕ್ಕಿ ಹಿಡಿಯಬಲ್ಲದು. ಅಂತಹ ನಾಲ್ಕು ಟ್ಯಾಂಕ್‌ಗಳು ಇವೆ. ನಂತರ ಮಂಡಕ್ಕಿಯನ್ನು ಪ್ಯಾಕ್‌ ಮಾಡಲಾಗುತ್ತದೆ. ಗ್ರಾಹಕರ ಬೇಡಿಕೆಗೆ ತಕ್ಕಂತೆ 3 ಕಿಲೋದಿಂದ 6 ಕಿಲೋವರೆಗೆ ವಿಧವಿಧ ಚೀಲದಲ್ಲಿ ಪ್ಯಾಕ್‌ ಮಾಡಿಕೊಡುತ್ತೇವೆ. ನಮ್ಮಲ್ಲಿ ಸಾಮಾನ್ಯವಾಗಿ 5 ಕಿಲೋ ತೂಕದ ಚೀಲಗಳನ್ನು ಸಿದ್ಧಪಡಿಸಿ ಸಾಗಿಸಲಾಗುತ್ತದೆ.

ಲಾಭದ ಲೆಕ್ಕಾಚಾರ
2010ರಿಂದ ದೊಡ್ಡಮಟ್ಟದಲ್ಲಿ ಉತ್ಪಾದನೆ ಮತ್ತು ಮಾರುಕಟ್ಟೆ ಮಾಡಿದ್ದರಿಂದ ಲಾಭದ ಪ್ರಮಾಣವೂ ಹೆಚ್ಚಿತು. ಪ್ರತಿ ತಿಂಗಳು ಎಲ್ಲ ಖರ್ಚು ಕಳೆದು ರೂ1.50 ಲಕ್ಷದವರೆಗೆ ಲಾಭ ಗಳಿಸಲು ಸಾಧ್ಯವಾಯಿತು. ಎಲ್ಲ ವೆಚ್ಚ ಕಳೆದು ತಿಂಗಳಿಗೆ ರೂ25 ಲಕ್ಷದವರೆಗೆ ಲಾಭಾಂಶ ಬರುತ್ತಿದೆ. ಬೇಡಿಕೆ ಜಾಸ್ತಿ ಇದ್ದಾಗ ಲಾಭವೂ ಹೆಚ್ಚುತ್ತದೆ’ ಎಂದರು.

‘ನಮ್ಮಲ್ಲಿ 200 ಗ್ರಾಂ  ತೂಕದ ಪ್ಯಾಕೆಟ್‌ ಕೂಡಾ ಮಾಡಬಹುದು. ಆದರೆ ಒಂದು ಕುಟುಂಬಕ್ಕೆ ಅದು ಬಹಳ ಚಿಕ್ಕದಾಗುತ್ತದೆ. ಒಂದು ಕುಟುಂಬಕ್ಕೆ ಕನಿಷ್ಠ 400 ಗ್ರಾಂನಷ್ಟು ಬೇಕು. ನಮ್ಮಲ್ಲಿ ತಯಾರಾದ ಮಂಡಕ್ಕಿಯನ್ನು ಎರಡು ತಿಂಗಳವರೆಗೆ ಇಟ್ಟುಕೊಳ್ಳಬಹುದು. ಅದಕ್ಕೆ ನಾವು ಯಾವುದೇ ರಾಸಾಯನಿಕ ಹಾಕುವುದಿಲ್ಲ’ ಎಂದೂ ಶಹಾಬುದ್ದೀನ್‌ (ಮೊ: 96200 71066) ಮಾಹಿತಿ ನೀಡಿದರು.
‘ಕೈಗಾರಿಕಾ ನೀತಿಯಡಿ ನೆರವು’
‘ಶಹಾಬುದ್ದೀನ್‌ ಅವರದ್ದು ದೊಡ್ಡ ಮಟ್ಟದ ಮಂಡಕ್ಕಿ ಉದ್ಯಮ. ಕಡಿಮೆ ಬಂಡವಾಳದಲ್ಲಿ ಉದ್ಯಮ ಆರಂಭಿಸಿದ್ದ ಅವರು, ಬಳಿಕ ಇನ್ನಷ್ಟು ಬಂಡವಾಳ ತೊಡಗಿಸಿ ಅತ್ಯಾಧುನಿಕ ತಂತ್ರಜ್ಞಾನ ಅಳವಡಿಸಿಕೊಂಡಿದ್ದಾರೆ. ಇಂತಹ ಉದ್ಯಮ ಆರಂಭಿಸುವವರಿಗೆ ತೊಡಗಿಸಿಕೊಳ್ಳುವ ಬಂಡವಾಳಕ್ಕೆ ಅನುಗುಣವಾಗಿ (ಸಣ್ಣ, ಮಧ್ಯಮ, ದೊಡ್ಡ) ಕೈಗಾರಿಕಾ ನೀತಿಯಡಿ ಎಲ್ಲ ರಿಯಾಯಿತಿಗಳನ್ನು ನೀಡಲಾಗುವುದು. ಹೂಡಿಕೆಗೆ ಅನುಗುಣವಾಗಿ ಸಬ್ಸಿಡಿಯೂ ಸಿಗುತ್ತದೆ’
ಬಸವರಾಜ ಎನ್‌. ಗದಗ
ಜಂಟಿ ನಿರ್ದೇಶಕ, ಜಿಲ್ಲಾ ಕೈಗಾರಿಕಾ ಕೇಂದ್ರ,

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT