ಮಕ್ಕಳ ಸಿನಿಮಾಗಳು ಕ್ಷೀಣವಾಗುತ್ತಿರುವ ಕಾಲದಲ್ಲಿ ಪ್ರತಿಭಾವಂತ ಮಕ್ಕಳನ್ನು ಕಲೆ ಹಾಕಿ ಚಿತ್ರ ನಿರ್ದೇಶಿಸುತ್ತಿದ್ದಾರೆ ಸಂಜೀವ್ ರೆಡ್ಡಿ. ಚಿತ್ರದ ಹೆಸರು `ಸುಪ್ರೀಮ್~.
ಸಂಜೀವ್ ರೆಡ್ಡಿ ಅವರಿಗೆ ಕಿರುತೆರೆಯಲ್ಲಿ ನಿರ್ದೇಶನದ ಪಾಠ ಹೇಳಿಕೊಟ್ಟ ಬಿ. ಸುರೇಶ್ ಮುಹೂರ್ತ ದಿನದಂದು ಕ್ಲಾಪ್ ಮಾಡಿ ಚಿತ್ರೀಕರಣಕ್ಕೆ ಚಾಲನೆ ನೀಡಿದರು. ಹಿರಿತೆರೆಯ ಗುರು ಓಂ ಸಾಯಿಪ್ರಕಾಶ್ ಶುಭ ಹಾರೈಸಿದರು.
ಮಕ್ಕಳ ಸಿನಿಮಾ ಆಗಿದ್ದರೂ ಇದು ಪಕ್ಕಾ ಕಮರ್ಷಿಯಲ್ ಮಾದರಿಯಲ್ಲಿಯೇ ಇರುತ್ತದೆ ಎಂದರು ಸಂಜೀವ್ ರೆಡ್ಡಿ. ಕ್ರೀಡೆಯಿಂದ ಮಕ್ಕಳು ವಿಮುಖರಾಗುತ್ತಿದ್ದಾರೆ. ಇದಕ್ಕೆ ತಂದೆತಾಯಿಗಳೂ ಕಾರಣ ಎನುವುದು ಅವರ ಬೇಸರ.
ಅವರು ಕ್ರೀಡೆಯ ಬಗ್ಗೆ ಮಾತನಾಡಲು ಕಾರಣಗಳಿದ್ದವು. ಸಿನಿಮಾದ ಬೇರು ವಿವಿಧ ಕ್ರೀಡೆಗಳ ಮೇಲಿದೆ. ಮಾತ್ರವಲ್ಲ ಅದರ ಹಿನ್ನೆಲೆಯಲ್ಲಿ ಕೊಳೆಗೇರಿ, ಮಧ್ಯಮವರ್ಗ ಮತ್ತು ಶ್ರೀಮಂತ ವರ್ಗದವರು ಮಕ್ಕಳನ್ನು ಬೆಳೆಸುವ ಪರಿಯನ್ನು ಸಿನಿಮಾ ವಿಶಿಷ್ಟ ಶೈಲಿಯಲ್ಲಿ ತೆರೆದಿಡಲಿದೆಯಂತೆ. ಕ್ರಿಕೆಟ್ ಹೊರತುಪಡಿಸಿ ಉಳಿದ ಆಟಗಳ ಸಮ್ಮಿಲನ ಈ `ಸುಪ್ರೀಮ್~ ಎನ್ನುವುದು ಅವರ ಹೇಳಿಕೆ.
ಸ್ಕೇಟಿಂಗ್, ಕರಾಟೆ, ಡ್ಯಾನ್ಸ್ ರಿಯಾಲಿಟಿ ಶೋಗಳಲ್ಲಿ ಕಾಣಿಸಿಕೊಂಡ ಮಕ್ಕಳು, ಹೀಗೆ ವಿವಿಧ ವಲಯದ ಸುಮಾರು 70 ಪ್ರತಿಭೆಗಳನ್ನು ಅವರು ಹೆಕ್ಕಿ ತಂದು ಕ್ಯಾಮೆರಾ ಮುಂದೆ ನಿಲ್ಲಿಸಿದ್ದಾರೆ. ಅಡಿಶೀರ್ಷಿಕೆಯಲ್ಲಿ `ಚಿಲ್ಡ್ರನ್ ಮಸ್ಟ್ ಬಿ ಕ್ರೇಜಿ~ ಎಂಬ ವಾದವನ್ನೂ ಮಂಡಿಸಿದ್ದಾರೆ. ಬೆಳಗಾವಿಯಲ್ಲಿ ಐದು ದಿನ 25 ಸಾವಿರ ಮಕ್ಕಳನ್ನು ಒಂದುಗೂಡಿಸಿ ಹಾಡಿಗೆ ನೃತ್ಯ ಮಾಡಿಸುವ ಬಯಕೆ ಅವರಲ್ಲಿದೆ.
ಸುಪ್ರೀಮ್ಗೆ ಹಣ ಹೂಡಿರುವವರು ಗಂಡಸಿ ಸದಾನಂದಸ್ವಾಮಿ. 15 ವರ್ಷದಿಂದ ಫೈನಾನ್ಶಿಯರ್ ಆಗಿ ಚಿತ್ರರಂಗದಲ್ಲಿದ್ದ ಅವರಿಗಿದು ನಿರ್ಮಾಪಕರಾಗಿ ಮೊದಲ ಚಿತ್ರ. ಇದುವರೆಗಿನ ಮಕ್ಕಳ ಚಿತ್ರಗಳಲ್ಲಿಯೇ ಅತಿ ಹೆಚ್ಚು ಬಂಡವಾಳ ಹೂಡುತ್ತಿರುವ ಚಿತ್ರವಿದು ಎನ್ನುವುದು ಅವರ ಹೆಗ್ಗಳಿಕೆ.
ಮಕ್ಕಳ ಸಿನಿಮಾಕ್ಕೆ ಹೊಸಬಗೆಯ ಹಾಡುಗಳನ್ನು ನೀಡುವ ಹೊಣೆ ಸಂಗೀತ ನಿರ್ದೇಶಕ ಮಣಿಕಾಂತ್ ಕದ್ರಿ ಅವರದ್ದು. ಮೂರು ಹಾಡುಗಳಿಗೆ ಅವರು ಸಂಗೀತ ಹೊಸೆಯಲಿದ್ದಾರೆ.
ಮಕ್ಕಳ ಜೊತೆಯಲ್ಲಿ ಅನೇಕ ಹಿರಿಯ ಕಲಾವಿದರೂ ಕೆಲವು ಸನ್ನಿವೇಶಗಳಲ್ಲಿ ನಟಿಸಲಿದ್ದಾರೆ. ತೆಲುಗು ಚಿತ್ರರಂಗದ ಸಂಪರ್ಕ ಹೊಂದಿರುವ ಸಂಜೀವ್ ರೆಡ್ಡಿ ಅಲ್ಲಿನ ತಾರೆಯೊಬ್ಬರು ಅತಿಥಿ ಪಾತ್ರದಲ್ಲಿ ನಟಿಸಲಿದ್ದಾರೆ ಎಂಬ ಸೂಚನೆ ನೀಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.