ಬೆಂಗಳೂರು: ತನಗೆ ಕ್ಯಾನ್ಸರ್ ರೋಗವಿರುವ ಕಾರಣಕ್ಕೆ ಪತ್ನಿ ತನ್ನಿಂದ ಮಗನನ್ನು ದೂರ ಮಾಡಿದ್ದು, ಮಗನನ್ನು ಮರಳಿ ನನಗೆ ಒಪ್ಪಿಸಬೇಕು ಎಂದು ಒತ್ತಾಯಿಸಿ ನಗರದ ಶಾಂತಿನಿಕೇತನ ಲೇಔಟ್ನ ನಿವಾಸಿ ಬಿಜು ಮ್ಯಾಥ್ಯು ಅವರು ಕ್ರಿಸ್ಪ್ ಸಂಘಟನೆಯ ಸದಸ್ಯರೊಂದಿಗೆ ಪುರಭವನದ ಎದುರು ಭಾನುವಾರ ಪ್ರತಿಭಟನೆ ನಡೆಸಿದರು.
ಪ್ರತಿಭಟನೆಯಲ್ಲಿ ಮಾತನಾಡಿದ ಬಿಜು, ‘2008ನೇ ಇಸವಿಯಲ್ಲಿ ನಮ್ಮ ಕುಟುಂಬದ ಹತ್ತಿರದ ಸಂಬಂಧಿಯೊಬ್ಬರನ್ನು ನಾನು ಮದುವೆಯಾದೆ. 2009ರಲ್ಲಿ ನಮಗೆ ಗಂಡು ಮಗುವೊಂದು ಜನಿಸಿತು. ಕಳೆದ ವರ್ಷ ನನಗೆ ಕ್ಯಾನ್ಸರ್ ಇರುವ ವಿಷಯ ಗೊತ್ತಾಯಿತು. ಇದರಿಂದಾಗಿ ನನ್ನ ಹೆಂಡತಿ ಮಗುವನ್ನು ಕರೆದುಕೊಂಡು ಬೇರೆ ಯಾಗಿ ವಾಸಿಸುತ್ತಿದ್ದಾಳೆ’ ಎಂದರು.
‘ಮಗು ನನ್ನನ್ನು ಹೆಚ್ಚಾಗಿ ಹಚ್ಚಿಕೊಂಡಿತ್ತು. ಆದರೆ, ನನ್ನ ಹೆಂಡತಿ ಮಗುವನ್ನು ನನ್ನ ಬಳಿಗೆ ಬರುವುದಕ್ಕೆ ಬಿಡುತ್ತಿಲ್ಲ. ನನ್ನಿಂದ ಮಗುವನ್ನು ದೂರ ಮಾಡಿರುವ ಹೆಂಡತಿ, ನನ್ನ ವಿರುದ್ಧ ವರದಕ್ಷಿಣೆ ಕಿರುಕುಳ ಪ್ರಕರಣವನ್ನು ದಾಖಲಿಸಿದ್ದಾಳೆ’ ಎಂದು ಅವರು ಆರೋಪಿಸಿದರು.
‘ನಾನು ದಿನಕ್ಕೆ ಕನಿಷ್ಠ 13 ಗಂಟೆಗಳಷ್ಟು ಸಮಯವನ್ನು ನನ್ನ ಕ್ಯಾನ್ಸರ್ ಚಿಕಿತ್ಸೆಗಾಗಿಯೇ ಕಳೆಯಬೇಕಾಗಿದೆ. ಹೀಗಾಗಿ ಮಗು ಎಲ್ಲೇ ಇದ್ದರೂ ಚೆನ್ನಾಗಿರಬೇಕು ಎಂಬ ಆಶಯ ನನ್ನದು’ ಎಂದು ಬಿಜು ತಮ್ಮ ದುಃಖ ತೋಡಿಕೊಂಡರು.
‘ನಾನು ಮಗುವನ್ನು ನೋಡಲೂ ಕೂಡಾ ಹೆಂಡತಿ ಅಡ್ಡಿ ಪಡಿಸುತ್ತಿರುವುದು ಸರಿಯಲ್ಲ. ಈ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ರಾಜ್ಯಪಾಲ ಎಚ್.ಆರ್. ಭಾರದ್ವಾಜ್ ಅವರಿಗೆ ಮನವಿ ಸಲ್ಲಿಸಿದ್ದೇನೆ’ ಎಂದು ಅವರು ತಿಳಿಸಿದರು.