ಬೆಂಗಳೂರು: ಮಹಿಳೆಯೊಬ್ಬರು ಮಗುವನ್ನು ಕೊಲೆ ಮಾಡಿ ನಂತರ ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಎಚ್ಎಎಲ್ ವಿಮಾನ ನಿಲ್ದಾಣ ಸಮೀಪದ ಲಕ್ಷ್ಮಿನಾರಾಯಣಪುರದಲ್ಲಿ ಮಂಗಳವಾರ ನಡೆದಿದೆ.
ತಮಿಳುನಾಡು ಮೂಲದ ಸತ್ಯವೇಲು ಎಂಬುವರ ಪತ್ನಿ ಗೀತಾ (28) ಅವರು ಮೂರು ವರ್ಷದ ಗಂಡು ಮಗು ಮಿತ್ರನ್ನನ್ನು ನೇಣು ಹಾಕಿ ಕೊಲೆ ಮಾಡಿದ್ದಾರೆ.
ಬಳಿಕ ಅವರು ನೇಣು ಹಾಕಿಕೊಂಡಿದ್ದಾರೆ. ಅವರ ಮದುವೆಯಾಗಿ 8 ವರ್ಷವಾಗಿತ್ತು.
ಕೂಲಿ ಕಾರ್ಮಿಕರಾದ ಸತ್ಯವೇಲು ಅವರು ಕೆಲಸಕ್ಕೆ ಹೋಗಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ಅವರು ಮಧ್ಯಾಹ್ನ ಮನೆಗೆ ಬಂದಾಗ ಪ್ರಕರಣ ಬೆಳಕಿಗೆ ಬಂದಿದೆ. ಆತ್ಮಹತ್ಯೆಗೆ ಕಾರಣ ಗೊತ್ತಾಗಿಲ್ಲ ಎಂದು ಎಚ್ಎಎಲ್ ಪೊಲೀಸರು ತಿಳಿಸಿದ್ದಾರೆ.
`ಮಗಳು ಮತ್ತು ಅಳಿಯ ಅನ್ಯೋನ್ಯವಾಗಿದ್ದರು. ಆಕೆ ಏಕೆ ಈ ರೀತಿ ಮಾಡಿದಳು ಎಂಬುದು ಗೊತ್ತಿಲ್ಲ~ ಎಂದು ಗೀತಾ ಪೋಷಕರು ಹೇಳಿದ್ದಾರೆ.
ಘಟನೆ ಸಂಬಂಧ ಕೊಲೆ ಮತ್ತು ಆತ್ಮಹತ್ಯೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.