ಮಡಿಕೇರಿ: ಕೇರಳದ ಮಂಜೇಶ್ವರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅಪರಾಧವೆಸಗಿ ಮಡಿಕೇರಿಯಲ್ಲಿ ತಲೆಮರೆಸಿಕೊಂಡಿದ್ದ ಇಬ್ಬರು ಆರೋಪಿಗಳನ್ನು ಜಿಲ್ಲಾ ಪೊಲೀಸ್ ಅಪರಾಧ ಪತ್ತೆ ದಳದ ಪೊಲೀಸರು ಬುಧವಾರ ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದ್ದಾರೆ.
ಈ ಆರೋಪಿಗಳಿಗೆ ನಗರದ ಹೋಟೆಲ್ ಉದ್ಯಮಿ ಫಾರೂಕ್ ಎಂಬವರು ಆಶ್ರಯ ನೀಡಿದ್ದಾರೆ ಎನ್ನಲಾಗಿದೆ.
ಮಂಜೇಶ್ವರದಲ್ಲಿ ಒಂದೂವರೆ ತಿಂಗಳ ಹಿಂದೆ ಹಂಸ ಎಂಬವರ ಕೊಲೆಗೆ ಯತ್ನ ನಡೆಸಿದ್ದರೆನ್ನಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಾದ ಜಕಾರಿಯಾ ಹಾಗೂ ಜುಬೈದ್ ಎಂಬುವವರು ಮಡಿಕೇರಿಯ ಹೋಟೆಲ್ನಲ್ಲಿ ಆಶ್ರಯ ಪಡೆದಿದ್ದರು. ಪೊಲೀಸರು ದಾಳಿ ಮಾಡಿದ ಸಂದರ್ಭದಲ್ಲಿ ಜುಬೈದ್ ಸಿಕ್ಕಿಬಿದ್ದಿದ್ದಾನೆ. ಜಕಾರಿಯಾನನ್ನು ಪತ್ತೆ ಹಚ್ಚಲು ಕ್ರಮ ಕೈಗೊಳ್ಳಲಾಗಿದೆ ಎಂದು ವೃತ್ತ ನಿರೀಕ್ಷಕ ಗಜೇಂದ್ರಕುಮಾರ್ ತಿಳಿಸಿದರು.
ಮಂಜೇಶ್ವರದಲ್ಲಿಯೇ ನಡೆದ ಮತ್ತೊಂದು ಪ್ರಕರಣಕ್ಕೆ ಸಂಬಂಧಿಸಿದಂತೆ ಜುನೈದ್ ಎನ್ನುವ ಆರೋಪಿಯನ್ನು ಸಹ ಇದೇ ಹೋಟೆಲ್ನಿಂದ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ವಶಕ್ಕೆ ತೆಗೆದುಕೊಳ್ಳಲಾಗಿರುವ ಆರೋಪಿಗಳ ಕುರಿತು ಮಂಜೇಶ್ವರ ಪೊಲೀಸರಿಗೆ ಸುದ್ದಿ ನೀಡಲಾಗಿದ್ದು, ಅಲ್ಲಿನ ಪೊಲೀಸರು ಬಂದ ತಕ್ಷಣ ಅವರಿಗೆ ಆರೋಪಿಗಳನ್ನು ಹಸ್ತಾಂತರಿಸಲಾಗುವುದು ಎಂದು ಗಜೇಂದ್ರಕುಮಾರ್ ತಿಳಿಸಿದರು.
ಅಪಘಾತ: ಇಬ್ಬರಿಗೆ ಗಾಯ
ಮಡಿಕೇರಿ: ಕಾರು ಹಾಗೂ ಸರಕು ಸಾಗಾಟ ವಾಹನದ ನಡುವೆ ಮಂಗಳವಾರ ಸಂಭವಿಸಿದ ಅಪಘಾತದಲ್ಲಿ ಪ್ರಯಾಣಿಕರಿಬ್ಬರು ಗಾಯಗೊಂಡಿರುವ ಘಟನೆ ಇಲ್ಲಿಗೆ ಸಮೀಪದ ಇಬ್ನಿವಳವಾಡಿ ಗ್ರಾಮದಲ್ಲಿ ನಡೆದಿದೆ.
ಮಡಿಕೇರಿಯಿಂದ ಬೆಂಗಳೂರಿಗೆ ತೆರಳುತ್ತಿದ್ದ ಕಾರು ಹಾಗೂ ಮೈಸೂರಿನಿಂದ ಮಡಿಕೇರಿಗೆ ಬರುತ್ತಿದ್ದ ಸರಕು ಸಾಗಾಟ ವಾಹನದ ನಡುವೆ ಡಿಕ್ಕಿ ಸಂಭವಿಸಿದೆ.
ಅಪಘಾತದಲ್ಲಿ ಕಾರು ಚಾಲಕ ಮಡಿಕೇರಿ ನಗರದ ನಿವಾಸಿ ಜಗದೀಶ್ ಹಾಗೂ ಜೇಮ್ಸ ಡಯಾಲಿನ್ ಅವರು ಗಾಯಗೊಂಡಿದ್ದಾರೆ. ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.