ಕುಂದಾಪುರ: ಎರಡು ಲೋಕಸಭಾ ಕ್ಷೇತ್ರ ವ್ಯಾಪ್ತಿಯನ್ನು ಹೊಂದಿರುವ ಕುಂದಾಪುರ ತಾಲ್ಲೂಕಿನಲ್ಲಿ ಬಿಸಿಲಿನ ಕಾವು ಏರುತ್ತಿರುವಂತೆ ಚುನಾವಣೆಯ ಕಾವು ಹದವಾಗಿ ಏರಲು ಪ್ರಾರಂಭವಾಗಿದೆ.
ಹಿಂದೆ ಉಡುಪಿ ಲೋಕಸಭಾ ಕ್ಷೇತ್ರ ವ್ಯಾಪ್ತಿಯನ್ನು ಹೊಂದಿದ್ದ ತಾಲ್ಲೂಕಿನ ಎರಡು ವಿಧಾನಸಭಾ ಕ್ಷೇತ್ರಗಳಾದ ಕುಂದಾಪುರ ಹಾಗೂ ಬೈಂದೂರು, ಕ್ಷೇತ್ರ ಪುನರ್ವಿಂಗಡನೆಯ ಬಳಿಕ ಉಡುಪಿ–ಚಿಕ್ಕಮಗಳೂರು ಹಾಗೂ ಶಿವಮೊಗ್ಗ ಲೋಕಸಭಾ ಕ್ಷೇತ್ರಗಳ ವ್ಯಾಪ್ತಿಗೆ ಸೇರ್ಪಡೆಯಾಗಿದೆ.
ಉಡುಪಿ–ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಅಭ್ಯರ್ಥಿಗಳ ನಡುವೆ ನೇರ ಪೈಪೋಟಿ ಕಾಣುತ್ತಿದ್ದರೆ, ಶಿವಮೊಗ್ಗ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಬೈಂದೂರಿನಲ್ಲಿ ಮೇಲ್ನೋಟಕ್ಕೆ ಬಿಜೆಪಿ, ಜೆಡಿಎಸ್ ಹಾಗೂ ಕಾಂಗ್ರೆಸ್ ನಡುವೆ ತ್ರಿಕೋನ ಸ್ಪರ್ಧೆ ಕಾಣುತ್ತಿದೆ.
ತಾಲ್ಲೂಕಿನಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷಗಳಿಗೆ ತಳ ಹಂತದ ಕಾರ್ಯಕರ್ತರ ಪಡೆ ಹಾಗೂ ಭದ್ರವಾದ ರಾಜಕೀಯ ಬುನಾದಿಗಳು ಇದೆ. ಉಡುಪಿ– ಚಿಕ್ಕಮಗಳೂರು ಕ್ಷೇತ್ರದ ಕಾಂಗ್ರೆಸ್ ಪಕ್ಷದ ಹಾಲಿ ಅಭ್ಯರ್ಥಿ ಕೆ.ಜಯಪ್ರಕಾಶ ಹೆಗ್ಡೆಯವರ ಹುಟ್ಟೂರು ಇರುವುದು ಕುಂದಾಪುರ ಸಮೀಪದ ಕೊರ್ಗಿ ಎನ್ನುವ ಕಾರಣಕ್ಕಾಗಿ ಅವರು ಸ್ಥಳೀಯ ಅಭ್ಯರ್ಥಿ. ಪಕ್ಷೇತರರಾಗಿ ಕಣಕ್ಕಿಳಿಯುವ ಹಾಲಾಡಿಯವರ ತೀರ್ಮಾನಗಳಿಂದಾಗಿ ಕಳೆದ ಚುನಾವಣೆಯಲ್ಲಿ ಹೇಳಿಕೊಳ್ಳುವಂತ ಸಾಧನೆಗಳನ್ನು ಮಾಡದ ಬಿಜೆಪಿಗೆ ಈ ಬಾರಿಯ ಚುನಾವಣೆಯಲ್ಲಿ ಹಾಲಾಡಿಯರ ಕೆಲವು ನಿಕಟವರ್ತಿಗಳು ಮರಳಿ ಬಿಜೆಪಿಯನ್ನು ಬೆಂಬಲಿಸುವ ತೀರ್ಮಾನಗಳನ್ನು ಪ್ರಕಟಿಸಿರುವುದರಿಂದ ಹೊಸ ಹುಮ್ಮಸ್ಸು ಬಂದಿದೆ.
ಪಕ್ಷೇತರ ಶಾಸಕರಾಗಿರುವ ಹಾಲಾಡಿಯವರ ತಟಸ್ಥ ನಿಲುವುಗಳು ಖಂಡಿತವಾಗಿಯೂ ಚುನಾವಣೆಯ ಮೇಲೆ ನೇರ ಪರಿಣಾಮಗಳನ್ನು ಉಂಟು ಮಾಡಲಿರುವುದರಿಂದ ಕಾಂಗ್ರೆಸ್ನ ಮತಗಳಿಗೆ ಹೆಚ್ಚಾಗುತ್ತದೆ ಎನ್ನುವ ಆತ್ಮವಿಶ್ವಾಸಗಳು ಆ ಪಕ್ಷದ ಮುಖಂಡರಲ್ಲಿದೆ.ಶಿವಮೊಗ್ಗ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಬೈಂದೂರಿನಲ್ಲಿ ಕಳೆದ ಚುನಾವಣೆಲ್ಲಿ ಕಾಂಗ್ರೆಸ್ ಪಕ್ಷ ಪಡೆದುಕೊಂಡ ಮತಗಳ ಅಂತರವನ್ನು ಉಳಿಸಿಕೊಳ್ಳಲು ಶಾಸಕರು ಹಾಗೂ ಪಕ್ಷದ ಮುಖಂಡರು ನಿರಂತರ ಪ್ರಯತ್ನವನ್ನು ಮಾಡುತ್ತಿದ್ದಾರೆ. ಬಿಜೆಪಿ– ಕೆಜೆಪಿ ಗೊಂದಲಗಳಿಂದಾಗಿ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಭಾರಿ ಅಂತರದ ಸೋಲನ್ನು ಕಂಡಿದ್ದ ಬಿಜೆಪಿ ನಾಯಕರುಗಳಲ್ಲಿ ಇದೀಗ ಬಿ.ಎಸ್ ಯಡಿಯೂರಪ್ಪನವರೆ ಇಲ್ಲಿನ ಅಭ್ಯರ್ಥಿಯಾಗಿರುವುದರಿಂದ ಈ ಅಂತರ ಕಡಿಮೆಯಾಗಲಿದೆ ಎನ್ನುವ ಲೆಕ್ಕಾಚಾರಗಳಿವೆ.
ಒಂದೊಮ್ಮೆ ತಮ್ಮ ಪಕ್ಷದ ಶಾಸಕರನ್ನ ಹೊಂದಿದ್ದ ಜನತಾ ಪರಿವಾರ ಬದಲಾದ ರಾಜ-ಕೀಯ ಧ್ರುವೀಕರಣದಿಂದಾಗಿ ಕಳೆದ ಕೆಲವು ಚುನಾವಣೆಗಳಿಂದ ರಾಜಕೀಯ ಪಡಸಾಲೆಯ ನೈಪಥ್ಯಕ್ಕೆ ಸರಿದಿತ್ತು. ಈ ಬಾರಿಯ ಚುನಾವಣೆಯಲ್ಲಿ ಜೆಡಿಎಸ್ ಶಿವಮೊಗ್ಗ ಕ್ಷೇತ್ರದಿಂದ ತನ್ನ ಅಭ್ಯರ್ಥಿಯಾಗಿ ರಾಜ್ಯದ ಹಿರಿಯ ರಾಜಕೀಯ ಮುತ್ಸದ್ದಿ ದಿ.ಬಂಗಾರಪ್ಪನವರ ಪುತ್ರಿ ಗೀತಾ ಶಿವರಾಜ್ಕುಮಾರ ಅವರನ್ನು ಅಭ್ಯರ್ಥಿಯಾಗಿ ಕಣಕ್ಕೀಳಿಸಿರುವುದರಿಂದ ಕ್ಷೇತ್ರದಲ್ಲಿ ಜೆಡಿಎಸ್ ಮೈಕೊಡವಿಕೊಂಡು ಮೇಲಕ್ಕೇಳುವ ಪ್ರಯತ್ನ ಮಾಡುತ್ತಿದೆ. ಬಂಗಾರಪ್ಪ ಹಾಗೂ ರಾಜ್ ಕುಟುಂಬ ಸ್ನೇಹಿತರು ಕ್ಷೇತ್ರದಲ್ಲಿ ಬೀಡು ಬಿಟ್ಟು ಮತ ಕ್ರೋಢಿಕರಣಕ್ಕಾಗಿ ಇನ್ನಿಲ್ಲದ ಪ್ರಯತ್ನ ಮಾಡುತ್ತಿದ್ದಾರೆ.
ಫೀಲ್ಡ್ಗೆ 400?: ಅಂತರರಾಷ್ಟ್ರೀಯ ಮಟ್ಟದಲ್ಲಿ ಉಂಟಾಗುತ್ತಿರುವ ಹಣದುಬ್ಬರಗಳಿಗೆ ಪೂರಕವಾಗಿ ಚುನಾವಣೆಯಲ್ಲಿನ ಕ್ಷೇತ್ರ ಕಾರ್ಯದಲ್ಲಿಯೂ ದರ ಪಟ್ಟಿಗಳು ಏರಿಕೆಯಾಗುತ್ತಿದೆಯಂತೆ. ಕಳೆದ ಚುನಾವಣೆಯಲ್ಲಿ ಊಟ– ಕಾಫಿ ನೀಡಿ ₨300 ಗೆ ಇದ್ದ ಬಟವಾಡೆ ಈ ಬಾರಿ 400ಕ್ಕೆ ಏರಿಕೆಯಾಗಿದೆಯಂತೆ. ಕಳೆದ ಬಾರಿ ತಾ.ಪಂ ಹಾಗೂ ಜಿ.ಪಂ ಮಟ್ಟದ ಪ್ರಮುಖ ನಾಯಕರುಗಳ ಪಕ್ಷಾಂತರಕ್ಕೆ 5 ಲಕ್ಷವಿದ್ದರೆ, ಈ ಬಾರಿ ಅದು 15ಕ್ಕೆ ಏರಿಕೆಯಾಗಿದೆಯಂತೆ ಎನ್ನುವ ಸುದ್ದಿಗಳು ಅಲ್ಲಲ್ಲಿ ಕೇಳಿ ಬರುತ್ತಿವೆ.
ಪ್ರಮುಖ ರಾಜಕೀಯ ಪಕ್ಷದ ಮುಖಂಡರ ಹಾಗೂ ಆ ಪಕ್ಷಗಳನ್ನು ಬೆಂಬಲಿಸುವ ಉದ್ಯಮಿಗಳ ಮನೆ ಬಾಗಿಲಿನಲ್ಲಿ ಮುಂಜಾನೆಯಿಂದ ಪಕ್ಷ ನಿಷ್ಠರ ದೊಡ್ಡ ಸಾಲುಗಳೇ ಕಾಣ ಸಿಗುತ್ತದೆ.
ಕುಂದಾಪುರದ ಸಮೀಪದಲ್ಲಿ ನಡೆದ ಸಭೆಗೆ ಬಂದಿದ್ದ ಮತದಾರರ ಮನವೊಲಿಸಲು ಮತದಾರ ಪ್ರಭುಗಳಿಗೆ ಬಿರಿಯಾನಿ ರುಚಿ ತಿನ್ನಿಸಲು ಪ್ರಮುಖ ರಾಜಕೀಯ ಪಕ್ಷದ ಮುಖಂಡರು ಮುಂದಾಗಿರುವುದು ಈ ಬಾರಿಯ ಚುನಾವಣೆಯ ಸ್ಪೆಷಲ್.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.