ಗೋಣಿಕೊಪ್ಪಲು: ತಿತಿಮತಿ ಸಮೀಪದ ಮತ್ತಿಗೋಡು ಸಾಕಾನೆ ಶಿಬಿರಕ್ಕೆ ಧರ್ಮರಾಯ, ನಕುಲ, ಕಪಿಲಾ ಎಂಬ ಎರಡು ವರ್ಷದ ನೂತನ ಅತಿಥಿಗಳ ಆಗಮನವಾಗಿದೆ.
ಬಳ್ಳೆ ಆನೆ ಕ್ಯಾಂಪಿನಿಂದ ಈ ಅತಿಥಿಗಳನ್ನು ಕರೆತರಲಾಗಿದೆ. ಕಪಿಲಾನ ತಾಯಿ ಸರಳಾ ಈಗಾಗಲೆ ಮೈಸೂರು ದಸರಾ ಉತ್ಸವಕ್ಕೆ ತೆರಳಿದೆ. ಧರ್ಮರಾಯನ ತಾಯಿ ವರಲಕ್ಷ್ಮಿ, ನಕುಲನ ತಾಯಿ ಗಂಗೆ ಎರಡನೇ ಹಂತದಲ್ಲಿ ದಸರಾ ಉತ್ಸವಕ್ಕೆ ತೆರಳಲಿವೆ. ಈ ಕಾರಣದಿಂದ ಈ ಮರಿಗಳನ್ನು ಮತ್ತಿಗೋಡಿಗೆ ತರಲಾಗಿದೆ ಎಂದು ವನ್ಯಜೀವಿ ವಿಭಾಗದ ವಲಯ ಅರಣ್ಯಾಧಿಕಾರಿ ದೇವರಾಜು ತಿಳಿಸಿದರು.
ಮತ್ತಿಗೋಡು ಕ್ಯಾಂಪಿನಿಂದ ಈಗಾಗಲೆ ಬಲರಾಮ ಹಾಗೂ ಅಭಿಮನ್ಯು ಆನೆಗಳು ದಸರಾ ಉತ್ಸವಕ್ಕೆ ತೆರಳಿವೆ. ಇವುಗಳ ಸ್ಥಾನವನ್ನು ಮರಿ ಆನೆಗಳು ತುಂಬಲಿವೆ ಎಂದು ಅವರು ಹೇಳಿದರು. ತಾಯಿಯಿಂದ ಈ ಮರಿ ಆನೆಗಳನ್ನು ಅಗಲಿಸುವುದು ಬಹಳ ಕಷ್ಟವಾಯಿತು. ಆದರೂ ಮುಂದೆ ಸ್ವತಂತ್ರವಾಗಿ ಜೀವಿಸಲಿ ಎಂಬ ಉದ್ದೇಶದಿಂದ ಬೇರ್ಪಡಿಸಲಾಗಿದೆ ಎಂದರು.
ತಾಯಿಯ ಬೆಚ್ಚನೆಯ ಮಡಿಲಲ್ಲಿ ನಿದ್ರಿಸುತ್ತಿದ್ದ ಮರಿಗಳ ಮಖದಲ್ಲಿ ಅಗಲಿಕೆಯ ನೋವು ಎದ್ದು ಕಾಣುತ್ತಿತ್ತು.