ಶ್ರೀರಂಗಪಟ್ಟಣ: ಭಾರತ ನಿರ್ಮಾಣ್ ಸ್ವಯಂಸೇವಕರು ತಾಲ್ಲೂಕಿನ ಮರಳಾಗಾಲ ಸಮೀಪ ಇರುವ ಆಂಜನೇಯಸ್ವಾಮಿ ದೇವಾಲಯದ ಆವರಣದಲ್ಲಿ ಗುರುವಾರ ಸ್ವಚ್ಛತಾ ಕಾರ್ಯ ನಡೆಸಿದರು.
ಡಿ.25ರಂದು ದೇವಾಲಯದ ಆವರಣದಲ್ಲಿ ಹನುಮ ಜಯಂತಿ ನಡೆಯಲಿರುವ ಹಿನ್ನೆಲೆಯಲ್ಲಿ ಸ್ವಚ್ಛತಾ ಕಾರ್ಯ ಹಮ್ಮಿಕೊಳ್ಳಲಾಗಿತ್ತು. ದೇಗುಲದ ಮುಂದೆ ಇದ್ದ ಮಂಡಿಯುದ್ದ ಗುಂಡಿಗಳನ್ನು ಕಲ್ಲು, ಮಣ್ಣಿನಿಂದ ಮುಚ್ಚಿ ಮಟ್ಟಸಗೊಳಿಸಿದರು. ಹಾರೆ ಗುದ್ದಲಿ ಹಿಡಿದು, ತಲೆಮೇಲೆ ಮಣ್ಣು ಹೊತ್ತು ಶ್ರಮದಾನ ಮಾಡಿದರು.
ಸುತ್ತಲೂ ಬೆಳೆದಿದ್ದ ಗಿಡಗಂಟಿಗಳನ್ನು ಕಿತ್ತು ಹಸನು ಮಾಡಿದರು. ವರ್ಷದಿಂದ ಪಾಳು ಬಿದ್ದಿದ್ದ ಜಾಗವನ್ನು ಸ್ವಚ್ಛಗೊಳಿಸಲಾಯಿತು.ದೇವಾಲಯಕ್ಕೆ ತೆರಳುವ ಮಾರ್ಗದಲ್ಲಿ ಬೆಳೆದಿದ್ದ ಪಾರ್ಥೇನಿಯಂ ಹಾಗೂ ಇತರ ಕಳೆಗಿಡಗಳನ್ನು ಕುಡುಗೋಲು ಹಿಡಿದು ಕತ್ತರಿಸಿದರು. ಪ್ಲಾಸ್ಟಿಕ್ ವಸ್ತುಗಳನ್ನು ಹೆಕ್ಕಿ ತೆಗೆದರು.
ವಿವಿಧ ಗ್ರಾಮಗಳ 25ಕ್ಕೂ ಹೆಚ್ಚು ಸ್ವಯಂಸೇವಕರು ಬೆಳಿಗ್ಗೆ 10ರಿಂದ ಮಧ್ಯಾಹ್ನ 3ರವರೆಗೆ ಶ್ರಮದಾನ ನಡೆಸಿದರು. ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರಾದ ಎಂ.ಸ್ವಾಮಿ, ಮಂಚಯ್ಯ ಕೂಡ ಸ್ವಯಂ ಸೇವಕರಾಗಿ ದುಡಿದು ಗಮನ ಸೆಳೆದರು. ಕೆ.ಶೆಟ್ಟಹಳ್ಳಿ ಅಪ್ಪಾಜಿ, ಮೋಹನಕುಮಾರಿ, ಯೋಗೇಶ್ ಇದ್ದರು.