ಬೆಂಗಳೂರು: ಸರ್ಕಾರದ ನೂತನ ಮರಳು ನೀತಿಯನ್ನು ವಿರೋಧಿಸಿ ಲಾರಿ ಮಾಲೀಕರು ಡಿ.20ರಿಂದ ರಾಜ್ಯದಾದ್ಯಂತ ಆರಂಭಿಸಿರುವ ಅನಿರ್ದಿಷ್ಟಾವಧಿ ಮುಷ್ಕರ ಐದನೇ ದಿನಕ್ಕೆ ಕಾಲಿಟ್ಟಿದೆ. ಮುಷ್ಕರದಿಂದಾಗಿ ಮರಳು ಸಾಗಣೆ ಲಾರಿಗಳ ಸೇವೆ ಸಂಪೂರ್ಣ ಸ್ಥಗಿತಗೊಂಡಿದ್ದು, ಕಟ್ಟಡ ನಿರ್ಮಾಣ ಮತ್ತು ಅಭಿವೃದ್ಧಿ ಕಾಮಗಾರಿಗಳಿಗೆ ಅಡ್ಡಿಯಾಗಿದೆ.
ರಾಜ್ಯದಲ್ಲಿ 25 ಸಾವಿರ ಮರಳು ಸಾಗಣೆ ಲಾರಿಗಳಿದ್ದು, ಮುಷ್ಕರಕ್ಕೂ ಮುನ್ನ ಪ್ರತಿನಿತ್ಯ ಸುಮಾರು 15 ಸಾವಿರ ಲೋಡ್ ಮರಳು ಸಾಗಣೆಯಾಗುತ್ತಿತ್ತು. ನಗರಕ್ಕೆ ಮೂರು ಸಾವಿರ ಲೋಡ್ ಮರಳು ಬರುತ್ತಿತ್ತು. ಆದರೆ, ಮುಷ್ಕರದ ಭಾಗವಾಗಿ ಮರಳು ಪೂರೈಕೆಯಾಗುತ್ತಿಲ್ಲ. ಹಲವೆಡೆ ಈ ಹಿಂದೆಯೇ ದಾಸ್ತಾನು ಮಾಡಿದ್ದ ಮರಳನ್ನೇ ವ್ಯಾಪಾರಿಗಳು ಹೆಚ್ಚಿನ ಬೆಲೆಗೆ ಮಾರುತ್ತಿದ್ದಾರೆ.
ಮತ್ತೊಂದೆಡೆ ಫಿಲ್ಟರ್ ಮರಳನ್ನೇ ಮಾರಾಟ ಮಾಡಲಾಗುತ್ತಿದೆ. ಕೆಲ ವ್ಯಾಪಾರಿಗಳು ನೆರೆಯ ತಮಿಳುನಾಡಿನಿಂದ ರಾತ್ರಿ ವೇಳೆ ಅಕ್ರಮವಾಗಿ ಮರಳು ಸಾಗಿಸಿ ತಂದು ಹೆಚ್ಚಿನ ಬೆಲೆಗೆ ಮಾರುತ್ತಿದ್ದಾರೆ. ದಿನ ಕಳೆದಂತೆ ಲಾರಿ ಚಾಲಕರು, ಕೂಲಿ ಕಾರ್ಮಿಕರು ಮತ್ತು ಕಟ್ಟಡ ಕಾರ್ಮಿಕರಿಗೂ ಮುಷ್ಕರದ ಬಿಸಿ ತಟ್ಟಲಾರಂಭಿಸಿದೆ. ಚಾಲಕರಿಗೆ ಹಾಗೂ ಕಾರ್ಮಿಕರಿಗೆ ದುಡಿಮೆ ಇಲ್ಲದೆ ಜೀವನ ನಿರ್ವಹಣೆಗೆ ತೊಂದರೆಯಾಗಿದೆ. ಇದರಿಂದಾಗಿ ಅವರು ಕುಟುಂಬ ಸದಸ್ಯರೊಂದಿಗೆ ಸ್ವಂತ ಊರುಗಳಿಗೆ ಮರಳುತ್ತಿದ್ದಾರೆ.
‘ತಿಂಗಳಲ್ಲಿ ಸುಮಾರು 20 ಲೋಡ್ ಮರಳು ಸಾಗಿಸಿ ₨ 10 ಸಾವಿರದಿಂದ 15 ಸಾವಿರ ಸಂಪಾದನೆ ಮಾಡುತ್ತಿದ್ದೆ. ಮುಷ್ಕರದಿಂದ ಕೆಲಸ ಇಲ್ಲದಂತಾಗಿದೆ. ಸಂಪಾದನೆಯೂ ಶೂನ್ಯವಾಗಿದೆ. ಇದರಿಂದ ಜೀವನ ನಿರ್ವಹಣೆಗೆ ತೊಂದರೆಯಾಗಿದೆ’ ಎಂದು ಲಾರಿ ಚಾಲಕ ಲೋಕೇಶ್ ಅಳಲು ತೋಡಿಕೊಂಡರು.
ಮರಳು ದರ ಏರಿಕೆ: ‘ಮುಷ್ಕರದಿಂದ ಮರಳಿನ ದರದಲ್ಲಿ ಏರಿಕೆಯಾಗಿದೆ. ಮುಷ್ಕರಕ್ಕೂ ಮುನ್ನ ₨ 20 ಸಾವಿರದಿಂದ 25 ಸಾವಿರ ಇದ್ದ ಒಂದು ಲಾರಿ ಲೋಡ್ ಮರಳಿನ ಬೆಲೆ ಇದೀಗ ₨ 65 ಸಾವಿರಕ್ಕೆ ಏರಿಕೆಯಾಗಿದೆ. ಅಷ್ಟು ಹಣ ಕೊಟ್ಟರೂ ಗುಣಮಟ್ಟದ ಮರಳು ಸಿಗುತ್ತಿಲ್ಲ’ ಎಂದು ಸ್ಟೇಟ್ ಲ್ಯಾಂಡ್ ಡೆವಲಪರ್್ಸ ಮತ್ತು ಬಿಲ್ಡರ್್ಸ ಅಸೋಸಿಯೇಷನ್ನ ಸಂಘಟನಾ ಕಾರ್ಯದರ್ಶಿ ವಿ.ಕೃಷ್ಣಮೂರ್ತಿ ‘ಪ್ರಜಾವಾಣಿ’ಗೆ ತಿಳಿಸಿದರು. ‘ಮುಷ್ಕರ ಮುಂದುವರಿದರೆ ಪರಿಸ್ಥಿತಿ ಮತ್ತಷ್ಟು ಗಂಭೀರವಾಗಲಿದೆ. ಸರ್ಕಾರ ಈ ಬಗ್ಗೆ ನಿರ್ಲಕ್ಷ್ಯ ತೋರದೆ ಬೇಗನೆ ಸಮಸ್ಯೆ ಬಗೆಹರಿಸಬೇಕು’ ಎಂದು ಮನವಿ ಮಾಡಿದ್ದಾರೆ.
ಮುಷ್ಕರ ತೀವ್ರ
ಮುಷ್ಕರ ಆರಂಭವಾಗಿ ಐದು ದಿನ ಕಳೆದರೂ ಸರ್ಕಾರ ಮಾತುಕತೆಗೆ ಕರೆದಿಲ್ಲ. ಬೇಡಿಕೆಗಳನ್ನು ಈಡೇರಿಸುವ ಸಂಬಂಧ ಮೂರ್ನಾಲ್ಕು ದಿನಗಳಲ್ಲಿ ಸರ್ಕಾರ ನಿರ್ಧಾರ ಕೈಗೊಳ್ಳದಿದ್ದರೆ ಇಟ್ಟಿಗೆ, ಜಲ್ಲಿ ಕಲ್ಲು, ಸಿಮೆಂಟ್ ಮತ್ತಿತರ ಕಟ್ಟಡ ನಿರ್ಮಾಣ ಸಾಮಗ್ರಿಗಳ ಸಾಗಣೆ ಸೇವೆಯನ್ನೂ ಸ್ಥಗಿತಗೊಳಿಸಿ ಮುಷ್ಕರವನ್ನು ತೀವ್ರಗೊಳಿಸುತ್ತೇವೆ
- –ಜಿ.ಆರ್.ಷಣ್ಮುಗಪ್ಪ, ಅಧ್ಯಕ್ಷರು, ರಾಜ್ಯ ಲಾರಿ ಮಾಲೀಕರು ಮತ್ತು ಏಜೆಂಟರ ಸಂಘಗಳ ಒಕ್ಕೂಟ.
ಪ್ರತಿಕೂಲ ಪರಿಣಾಮ
ಲಾರಿ ಮುಷ್ಕರ ಕಟ್ಟಡ ನಿರ್ಮಾಣ ಚಟುವಟಿಕೆಗಳ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದೆ. ಹಲವೆಡೆ ನಿರ್ಮಾಣ ಕಾರ್ಯ ಚಟುವಟಿಕೆಗಳು ಸ್ಥಗಿತಗೊಂಡಿದ್ದು, ಕೂಲಿ ಕಾರ್ಮಿಕರು ದುಡಿಮೆ ಇಲ್ಲದೆ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ
– ಕೆ.ವೀರಮಣಿ, ಅಧ್ಯಕ್ಷರು, ಸಿಐಟಿಯು ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಒಕ್ಕೂಟ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.