ಮರಿಯಮ್ಮನಹಳ್ಳಿ: ಕಾಡಿನಲ್ಲಿರಬೇಕಾದ ಚಿಪ್ಪುಹಂದಿ (ಪ್ಯಾಂಗೋಲಿನ್) ಪಟ್ಟಣದಲ್ಲಿ ಬುಧವಾರ ರಾತ್ರಿ ಪ್ರತ್ಯಕ್ಷಗೊಂಡು ಅಚ್ಚರಿ ಹಾಗೂ ಆಶ್ಚರ್ಯ ಮೂಡಿಸಿತು.
ಪಟ್ಟಣದ ನಾಲ್ಕನೇ ಬಿ ವಾರ್ಡ್ನ ಕಲ್ಲಕುಟ್ರಿ ಸೋಮಣ್ಣ ಅವರು ಮನೆಯ ಹಿಂಭಾಗದಲ್ಲಿ ರಾತ್ರಿ ಕರೆಂಟ್ ಹೋದ ಸಮಯದಲ್ಲಿ ಕತ್ತಲಲ್ಲಿ ಆಗಮಿಸಿದ ವಿಶೇಷ ಅತಿಥಿಯನ್ನು ಕಂಡು ಸುತ್ತಮುತ್ತಲಿನ ಮಹಿಳೆಯರು ಆಶ್ಚರ್ಯಗೊಂಡು ಕ್ಷಣಕಾಲ ಭಯಗೊಂಡಿದ್ದರು.
ನಂತರ ಬ್ಯಾಟರಿ ಮೂಲಕ ಬೆಳಕು ಹರಿಸಿದಾಗ ಮನೆಯ ಮುಂಭಾಗದಲ್ಲಿನ ಬೇಲಿಯ ಗಿಡಗಳ ಪೊದೆಯಲ್ಲಿ ಸೇರಿಕೊಂಡಿದ್ದ ಚಿಪ್ಪುಹಂದಿಯನ್ನು ಕೆಲ ಯುವಕರು ಪೊದೆ ಸರಿಸಿ ಹೊರಕ್ಕೆ ಎಳೆದರು.
ಈ ಸಂದರ್ಭದಲ್ಲಿ ಜನರ ಗಲಾಟೆಗೆ ಭಯಗೊಂಡ ಪೆಂಗೋಲಿಯನ್ ರಕ್ಷಣೆಗಾಗಿ ಬಾಲದಲ್ಲಿ ತಮ್ಮ ದೇಹವನ್ನು ಸುತ್ತಿಕೊಂಡಿತು. ವಿಷಯ ತಿಳಿಯುತ್ತಿದ್ದಂತೆ ಅಕ್ಕಪಕ್ಕ ಜನರು ನೋಡಲು ಮುಗಿಬಿದ್ದರು. ನಂತರ ಯುವಕರು ಅದನ್ನು ಚೀಲದಲ್ಲಿ ಹಾಕಿಕೊಂಡು ಬೆಳಿಗ್ಗೆ ಕಾಡಿನತ್ತ ಬಿಟ್ಟು ಬಂದರು.