ನಟ ಅಂಬರೀಷ್ ಅವರ 60ನೇ ವರ್ಷದ ಹುಟ್ಟುಹಬ್ಬಕ್ಕೆಂದು ಅಲ್ಲಿ ಎಲ್ಲ ಗಣ್ಯರೂ ಒಂದೆಡೆ ಸೇರಿದ್ದರು. ಈ ಸಂಭ್ರಮವನ್ನು ಅರ್ಥಪೂರ್ಣವಾಗಿ ಆಚರಿಸೋಣ ಎಂದು ಭಾರತದ ಒಡವೆ ಕ್ಷೇತ್ರದಲ್ಲಿ ಹೆಸರು ಮಾಡಿರುವ ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ಸ್ ವಿಶೇಷ ಕೊಡುಗೆಯನ್ನು ನೀಡಿತ್ತು.
ನಗರದ ಅರಮನೆ ಮೈದಾನದಲ್ಲಿ ನಡೆದ ಅಂಬರೀಷ್ ಅವರ 60ನೇ ವರ್ಷದ ಹುಟ್ಟುಹಬ್ಬದ ಕಾರ್ಯಕ್ರಮಮವನ್ನು ಮುಖ್ಯಮಂತ್ರಿ ಡಿ. ವಿ. ಸದಾನಂದ ಗೌಡರು ಉದ್ಘಾಟಿಸಿದರು. ಕಾರ್ಯಕ್ರಮಕ್ಕೆ ಸಾರಿಗೆ ಸಚಿವ ಆರ್. ಅಶೋಕ್, ನಟ ರಜನೀಕಾಂತ್, ಚಿರಂಜೀವಿ, ಶತ್ರುಗ್ನ ಸಿನ್ಹಾ, ಜಯಪ್ರದಾ, ಸುನಿಲ್ ಶೆಟ್ಟಿ, ಪುನೀತ್ರಾಜ್ಕುಮಾರ್, ಶಿವರಾಜ್ಕುಮಾರ್, ಉಪೇಂದ್ರ, ರಮ್ಯಾ, ಮೋಹನ್ಬಾಬು, ಎಸ್. ಪಿ. ಬಾಲಸುಬ್ರಮಣ್ಯಂ, ಅರ್ಜುನ್, ಖುಷ್ಬೂ, ಇನ್ನೂ ಹಲವಾರು ನಟ ನಟಿಯರು ಅಲ್ಲಿ ಸೇರಿದ್ದರು.
ಈ ಸಂದರ್ಭದಲ್ಲಿ ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ಸ್ ಸಂಸ್ಥೆ ಕರ್ನಾಟಕದ 60 ಮಂದಿ ಬಡವರಿಗೆ ಸೂರು ನೀಡುವ ವಿಶೇಷ ಯೋಜನೆಯನ್ನು ಘೋಷಿಸಿತು. `ಅಂಬರೀಷ್ ಅವರ ಹುಟ್ಟುಹಬ್ಬದ ಪ್ರಯುಕ್ತ ಈ ಯೋಜನೆಯನ್ನು ಹಮ್ಮಿಕೊಳ್ಳಲಾಗಿದೆ. ಅವರಿಗೆ 60 ವರ್ಷ ತುಂಬಿರುವ ನೆಪದಲ್ಲಿ ಒಂದಷ್ಟು ಬಡಜನರು ಒಳಿತು ಕಾಣಲಿ ಎಂದು 60 ಮಂದಿ ನಿರ್ಗತಿಕರಿಗೆ ಮನೆ ಕಟ್ಟಿಸಿಕೊಡಲಾಗುತ್ತಿದೆ~ ಎಂದರು ಮಲಬಾರ್ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ಒ. ಆಶೆರ್.
`ಸಂಸ್ಥೆಯು ಮಲಬಾರ್ ಚಾರಿಟೆಬಲ್ ಟ್ರಸ್ಟ್ ಹೆಸರಿನಲ್ಲಿ ಬಡವರಿಗೆ ಔಷಧೋಪಚಾರವನ್ನೂ ನೀಡುತ್ತಿದೆ. ಮಲಬಾರ್ ಹೌಸಿಂಗ್ ಚಾರಿಟಿ ಅಡಿಯಲ್ಲಿ ಇದುವರೆಗೂ 5,500ಕ್ಕೂ ಹೆಚ್ಚು ಮನೆಗಳನ್ನು ಕಟ್ಟಿಸಿಕೊಡಲಾಗಿದೆ. ಈ ಬಾರಿ 60 ನಿರ್ಗತಿಕರಿಗೆ ಮನೆ ಕಟ್ಟಿಸಿಕೊಡಲಾಗುತ್ತದೆ~ ಎಂದು ಹೇಳಿದರು.