ನ್ಯೂಯಾರ್ಕ್ (ಐಎಎನ್ಎಸ್): ಭಾರತ ಮತ್ತು ಆಗ್ನೇಯ ಏಷ್ಯಾ ಭಾಗದಲ್ಲಿ ಸಾಮಾನ್ಯವಾಗಿ ಕಂಡು ಬರುವ ಮಲೇರಿಯಾಕ್ಕೆ ಕಾರಣವಾಗುವ ರೋಗಾಣು ಕೆಂಪು ರಕ್ತ ಕಣಗಳ ಮೇಲೆ ಹೇಗೆ ದಾಳಿ ಮಾಡುತ್ತದೆ ಎಂಬುದನ್ನು ಭಾರತ ಮೂಲದ ವಿಜ್ಞಾನಿಯೊಬ್ಬರು ಪತ್ತೆ ಹಚ್ಚಿದ್ದಾರೆ.
ಈ ಬೆಳವಣಿಗೆಯು ಮಲೇರಿಯಾಕ್ಕೆ ಪರಿಣಾಮಕಾರಿ ಚಿಕಿತ್ಸೆ ನೀಡುವ ನಿಟ್ಟಿನಲ್ಲಿ ಹೊಸ ಲಸಿಕೆ ಅಭಿವೃದ್ಧಿ ಪಡಿಸಲು ನೆರವಾಗಲಿದೆ ಎಂದು ನಿರೀಕ್ಷಿಸಲಾಗಿದೆ.
ಭಾರತ, ಆಗ್ನೇಯ ಏಷ್ಯಾ ಮತ್ತು ದಕ್ಷಿಣ ಅಮೆರಿಕಗಳಲ್ಲಿ ಸಾಮಾನ್ಯವಾಗಿ ಕಂಡು ಬರುವ ಮಲೇರಿಯಾದ ಪ್ರಕಾರದಲ್ಲಿ ಕೆಂಪು ರಕ್ತಕಣಗಳ ಮೇಲೆ ದಾಳಿ ಮಾಡುವ ಪ್ಲಾಸ್ಮೋಡಿಯಂ ವಿವಾಕ್ಸ್, (ಮಲೇರಿಯಾಕ್ಕೆ ಕಾರಣವಾಗುವ ಸೂಕ್ಷ್ಮಾಣು ಪರಾವಲಂಬಿಗಳಲ್ಲಿ ಒಂದು) ಕೆಂಪುರಕ್ತಕಣಗಳನ್ನು ಕುಗ್ಗಿಸುತ್ತವೆ ಎಂಬುದನ್ನು ಸೇಂಟ್ ಲೂಯಿಸ್ನಲ್ಲಿರುವ ವಾಷಿಂಗ್ಟನ್ ವಿಶ್ವವಿದ್ಯಾಲಯದ ‘ಸ್ಕೂಲ್ ಆಫ್ ಮೆಡಿಸಿನ್’ನಲ್ಲಿ ಅಣು ಸೂಕ್ಷ್ಮಜೀವವಿಜ್ಞಾನ ಮತ್ತು ಜೀವ ರಸಾಯನವಿಜ್ಞಾನದ ಸಹಾಯಕ ಫ್ರೊಫೆಸರ್ ನೀರಜ್ ತೋಲಿಯಾ ಅವರು ಅಧ್ಯಯನ ನಡೆಸಿ ಕಂಡುಕೊಂಡಿದ್ದಾರೆ.
ಕೆಂಪುರಕ್ತ ಕಣಗಳ ಮೇಲೆ ಪ್ಲಾಸ್ಮೋಡಿಯಂ ವಿವಾಕ್ಸ್ ಮಾಡುವ ದಾಳಿಯನ್ನು ತಡೆಯುವುದಕ್ಕಾಗಿ ಹೊಸ ಲಸಿಕೆ ಅಭಿವೃದ್ಧಿ ಪಡಿಸಲು ನಾವು ಈ ಅಧ್ಯಯನದಿಂದ ತಿಳಿದುಬಂದ ಮಾಹಿತಿಯನ್ನು ಬಳಸುತ್ತೇವೆ ಎಂದು ನೀರಜ್ ಹೇಳಿದ್ದಾರೆ.
ಮನುಷ್ಯನ ಯಕೃತ್ನಲ್ಲಿ ಅವಿತುಕೊಳ್ಳುವ ಪ್ಲಾಸ್ಮೋಡಿಯಂ ವಿವಾಕ್ಸ್, ಹಲವು ವರ್ಷಗಳ ನಂತರ ಮತ್ತೆ ಮಲೇರಿಯಾ ಉಂಟುಮಾಡುತ್ತವೆ.