ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಲ್ಲೇಶ್ವರಂನಲ್ಲಿ ಬಾಂಬ್ ಸ್ಫೋಟ: 16 ಮಂದಿಗೆ ಗಾಯ

Last Updated 17 ಏಪ್ರಿಲ್ 2013, 12:45 IST
ಅಕ್ಷರ ಗಾತ್ರ

ಬೆಂಗಳೂರು : ನಗರದ ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕಚೇರಿ ಸಮೀಪ ಸಂಭವಿಸಿದ ಬಾಂಬ್ ಸ್ಫೋಟವೊಂದರಲ್ಲಿ ಎಂಟು ಮಂದಿ ಪೊಲೀಸರು ಸೇರಿದಂತೆ 16 ಮಂದಿ ಗಾಯಗೊಂಡಿದ್ದು ಗಾಯಾಳುಗಳನ್ನು ಕೆ.ಸಿ. ಜನರಲ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಮಂಗಳವಾರ ಮುಂಜಾನೆ ಸುಮಾರು 10.40 ವೇಳೆಗೆ ಸ್ಫೋಟ ಸಂಭವಿಸಿದೆಯೆಂದು ಪೊಲೀಸ್ ಮೂಲಗಳು ತಿಳಿಸಿವೆ.

ಸುದ್ದಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದೆ.

ಮೊದಲಿಗೆ ಇದೊಂದು ಸಿಲಿಂಡರ್ ಸ್ಫೋಟ ಪ್ರಕರಣವಿರಬಹುದೆಂದು ಭಾವಿಸಲಾಗಿತ್ತು. ಆದರೆ ಈಗ 'ಇದೊಂದು ಬಾಂಬ್ ಸ್ಫೋಟವಾಗಿದ್ದು ದ್ವಿಚಕ್ರ ವಾಹನವೊಂದರಲ್ಲಿ ಬಾಂಬ್ ಇಟ್ಟು ಸ್ಫೋಟಿಸಲಾಗಿದೆ' ಎಂದು ಪೊಲೀಸರು ಖಚಿತಪಡಿಸಿದ್ದಾರೆ. 

ರಾಷ್ಟ್ರೀಯ ತನಿಖಾ ಸಂಸ್ಥೆ ಮತ್ತು ವಿಧಿವಿಜ್ಞಾನ ಸಂಸ್ಥೆ ತಜ್ಞರು  ಸಳಕ್ಕೆ ಭೇಟಿ ನೀಡಿದ್ದು ಪರಿಶೀಲನೆ ಕಾರ್ಯ ಮುಂದುವರಿದಿದೆ.ಯಾವ ಬಗೆಯ ಸ್ಫೋಟಕ ಬಳಸಲಾಗಿದೆ ಎಂಬುದರ ಕುರಿತಂತೆ ಇನ್ನಷ್ಟೇ ಮಾಹಿತಿಗಳು ದೊರೆಯಬೇಕಾಗಿದೆ.

ಬೆಂಗಳೂರಿನಲ್ಲಿ ಬಾಂಬ್ ಸ್ಫೋಟದ ಹಿನ್ನೆಲೆಯಲ್ಲಿ ನವದೆಹಲಿಯಲ್ಲಿ ಕಟ್ಟೆಚ್ಚರ ವಹಿಸಲಾಗಿದ್ದು, ರಾಜಧಾನಿಯನ್ನು ಪ್ರವೇಶಿಸುವ ಮತ್ತು ಹೊರಹೋಗುವ ವಾಹನಗಳ ವಿಶೇಷ ತಪಾಸಣೆ ನಡೆಸಲಾಗುತ್ತಿದೆ. ರೈಲ್ವೇ ನಿಲ್ದಾಣ, ವಿಮಾನ ನಿಲ್ದಾಣ ಮೆಟ್ರೋ ಸೇರಿದಂತೆ ನಗರದ ಪ್ರಮುಖ ಕಡೆಗಳಲ್ಲಿ ಭದ್ರತೆಗೆ ಹೆಚ್ಚಿನ ಗಮನ ನೀಡಿರುವುದಾಗಿ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಹೆಬ್ಬಾಳದಲ್ಲಿ: ಮಲ್ಲೇಶ್ವರಂ ಸ್ಫೋಟ ಸಂಭವಿಸಿದ ಮೂರು ಗಂಟೆಗಳ ಬಳಿಕ ಹೆಬ್ಬಾಳ ಸೇತುವೆಯ ಬಳಿಯೂ ಇನ್ನೊಂದು ಸ್ಫೋಟ ಸಂಭವಿಸಿತು. ಮತ್ತೊಂದು ಬಾಂಬ್ ಸ್ಫೋಟಿಸಿದೆ ಎಂದು ಜನ ಕಳವಳಗೊಂಡರೂ, ಸ್ಪಲ್ಪ ಹೊತ್ತಿನ ಬಳಿಕ ಇದು ಸಿಲಿಂಡರ್ ಸ್ಫೋಟ ಎಂದು ಪೊಲೀಸರು ತಿಳಿಸಿದರು.

ತನಿಖೆಗೆ ಆದೇಶ
ಕೋಲ್ಕತ ವರದಿ (ಐಎಎನ್ಎಸ್
) : ಬೆಂಗಳೂರು ಸ್ಫೋಟ ಪ್ರಕರಣದ ತನಿಖೆ ನಡೆಸುವಂತೆ ಕೇಂದ್ರ ತನಿಖಾ ತಂಡಕ್ಕೆ ಕೇಂದ್ರ ಗೃಹ ಸಚಿವ ಸುಶೀಲ್ ಕುಮಾರ್ ಶಿಂಧೆ ಆದೇಶಿಸಿದ್ದಾರೆ.

ಪ್ರಕರಣದ ಸಂಬಂಧ ಕರ್ನಾಟಕ ಸರ್ಕಾರ ಮತ್ತು ಅಲ್ಲಿನ ಪೊಲೀಸ್ ಇಲಾಖೆ ಜತೆ ಮಾತುಕತೆ ನಡೆಸಿರುವುದಾಗಿ ಶಿಂಧೆ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT